ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸರ ಕಿತ್ತಾಟ: 6 ಸಾವು
ರಾಯಪುರ, ಡಿಸೆಂಬರ್ 04: ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು ಪರಸ್ಪರ ಘರ್ಷಣೆ ಮಾಡಿಕೊಂಡಿದ್ದು, ಈ ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ಛತ್ತೀಸ್ಘಡ ರಾಜ್ಯದ ನಾರಾಯಣಪುರ ಬಳಿ ಕದೇನಿಯರ್ ಕ್ಯಾಂಪ್ನ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸರ 45 ನೇ ಬೆಟಾಲಿಯನ್ ನಲ್ಲಿ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಒಬ್ಬ ಐಟಿಬಿಪಿ ಪೊಲೀಸ್ ಒಬ್ಬ ತನ್ನದೇ ಬೆಟಾಲಿಯನ್ ನ ಪೊಲೀಸರ ಮೇಲೆ ಏಕಾ-ಏಕಿ ಬಂದೂಕು ಚಲಾಯಿಸಿ ಐವನರನ್ನು ಕೊಂದಿದ್ದಾನೆ. ನಂತರ ಆತನನ್ನು ಹೊಡೆದುರುಳಿಸಲಾಗಿದೆ. ಘಟನೆ ಬಗ್ಗೆ ಪೂರ್ಣ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಬೆಳಿಗ್ಗೆ 9 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಐಟಿಬಿಪಿ ಸಿಬ್ಬಂದಿ ಒಬ್ಬ ಏಕಾ-ಏಕಿ ತನ್ನ ಸರ್ವಿಸ್ ಬಂದೂಕಿನಿಂದ ತನ್ನ ಸಹವರ್ತಿಗಳ ಮೇಲೆಯೇ ಗುಂಡು ಹಾರಿಸಿದ್ದಾನೆ. ಕೊನೆಗೆ ಆತನನ್ನು ಹೊಡೆದು ಉರುಳಿಸಲಾಗಿದೆ. ಘಟನೆಯಲ್ಲಿ ಇಬ್ಬರು ಐಟಿಬಿಪಿ ಸಿಬ್ಬಂದಿ ಗಾಯಗೊಂಡಿದ್ದಾರೆ.
ಯಾವ ಕಾರಣಕ್ಕಾಗಿ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ರಜೆ ನೀಡದ ಕಾರಣ ಆತ ಆಕ್ರೋಶಗೊಂಡಿದ್ದ ಎನ್ನಲಾಗಿದೆ.
ಐಜಿಪಿ ಸುಂದರ್ ರಾಜ್ ಎಸ್ ಅವರು ಘಟನೆ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿಯು ಕೆಲವೇ ಹೊತ್ತಿನಲ್ಲಿ ಹೊರಬೀಳಲಿದೆ.