2002ರ ಗೋಧ್ರಾ ರೈಲಿಗೆ ಬೆಂಕಿಹಚ್ಚಿದ ಕೇಸ್,ಇಬ್ಬರಿಗೆ ಜೀವಾವಧಿ ಶಿಕ್ಷೆ
ಅಹಮದಾಬಾದ್, ಆಗಸ್ಟ್ 27: 2002ರಲ್ಲಿ ಕರಸೇವಕರಿದ್ದ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ವಿಶೇಷ ನ್ಯಾಯಾಲಯವು ಇಂದು ಶಿಕ್ಷೆ ಪ್ರಕಟಿಸಿದೆ. ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.
ಸರಬಮತಿ ಎಕ್ಸ್ ಪ್ರೆಸ್ ನ ಎರಡು ಕೋಚ್ ಗಳಿಗೆ ಬೆಂಕಿ ಹಚ್ಚಿದ್ದರಿಂದ 59ಕರಸೇವಕರು ಜೀವಂತವಾಗಿ ಬೆಂಕಿಗೆ ಆಹುತಿಯಾಗಿದ್ದರು. ಪ್ರಕರಣ ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯದ ಜಡ್ಜ್ ಎಚ್ ಸಿ ವೋರಾ ಅವರು ಮೂವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿ, ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.
ಅಮಿತ್ ಶಾ ನೀಡಿದ ಸಾಕ್ಷಿಗೆ ಬೆಲೆ, ಮಾಯಾ ನಿರ್ದೋಷಿ!
ಫರೂಕ್ ಭಾನಾ ಹಾಗೂ ಇಮ್ರಾನ್ ಶೇರು ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಹುಸೇನ್ ಸುಲೇಮಾನ್ ಮೋಹನ್, ಕಾಸಂ ಭಾಮೆಡಿ, ಫಾರುಖ್ ಧಾಂಟಿಯಾ ಅವರನ್ನು ಖುಲಾಸೆಗೊಳಿಸಲಾಗಿದೆ.
ಈ ಪ್ರಕರಣದಲ್ಲಿ 31 ಜನರನ್ನು ಅಪರಾಧಿಗಲು ಎಂದು ಮಾರ್ಚ್ 1,2011ರಲ್ಲಿ ಘೋಷಿಸಲಾಗಿದೆ. ಈ ಪೈಕಿ 11 ಮಂದಿಗೆ ಗಲ್ಲುಶಿಕ್ಷೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ ಪ್ರಟಿಸಲಾಗಿದೆ.
ಆದರೆ, ಅಕ್ಟೋಬರ್ 2017ರಲ್ಲಿ ಗುಜರಾತ್ ಹೈಕೋರ್ಟ್, 11 ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಆದೇಶ ಹೊರಡಿಸಿತು. ವಿಶೇಷ ನ್ಯಾಯಾಲಯ ನೀಡಿದ್ದ 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯಲಾಯಿತು.
2002 ಗುಜರಾತ್ ಗಲಭೆ : ನರೇಂದ್ರ ಮೋದಿಗೆ ಕ್ಲೀನ್ ಚೀಟ್
2002ರ ಫೆಬ್ರವರಿ 27ರಂದು 59ಕರಸೇವಕರು ರೈಲಿನಲ್ಲಿ ಹತ್ಯೆಗೀಡಾದ ಬಳಿಕ ಕೋಮುಗಲಭೆ ಆರಂಭವಾಯಿತು. ಗುಜರಾತಿನ ಇತಿಹಾಸದಲ್ಲಿ ಕರಾಳ ದಿನವಾಗಿದ್ದು, ಸುಮಾರು 1,000ಕ್ಕೂ ಅಧಿಕ ಮಂದಿಯನ್ನು ಬಲಿಪಡೆಯಿತು.