ಕೊರೊನಾದಿಂದ ಗುಣಮುಖರಾದವರಿಗೆ ಸದ್ಯಕ್ಕೆ ಒಂದೇ ಡೋಸ್ ಲಸಿಕೆ ಸಾಕು; BHU ತಜ್ಞರ ಅಭಿಪ್ರಾಯ
ವಾರಾಣಸಿ, ಮೇ 31: ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕೊರೊನಾ ಲಸಿಕೆಯ ಒಂದೇ ಡೋಸ್ ಅತಿ ಪರಿಣಾಮಕಾರಿಯಾಗಬಲ್ಲದು. ಕೊರೊನಾ ಸೋಂಕು ತಗುಲದವರಿಗಿಂತ ಸೋಂಕಿನಿಂದ ಗುಣಮುಖರಾದವರಲ್ಲಿ ಪ್ರತಿರೋಧಕ ಶಕ್ತಿಯು ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಜೆನೆಟಿಕ್ಸ್ ಗ್ಯಾನೇಶ್ವರ್ ಚೌಬೆ ಪ್ರತಿಪಾದಿಸಿದ್ದಾರೆ.
ಕೊರೊನಾದಿಂದ ಗುಣಮುಖರಾದವರಿಗೆ ಸದ್ಯಕ್ಕೆ ಕೇವಲ ಒಂದು ಡೋಸ್ ಲಸಿಕೆ ನೀಡುವುದು ಸಾಕು. ಇದರಿಂದ ಯಾವುದೇ ಸಮಸ್ಯೆಯಿಲ್ಲ. ದೇಶದಲ್ಲಿರುವ ಕೊರೊನಾ ಲಸಿಕೆ ಅಭಾವವನ್ನೂ ಈ ಮೂಲಕ ಸರಿದೂಗಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಸೋಂಕು, ಲಸಿಕೆಯಿಂದ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಉತ್ಪತ್ತಿ ಭರವಸೆ
ಕೊರೊನಾ ಸೋಂಕು ತಗುಲದ 90% ಮಂದಿಯಲ್ಲಿ ಲಸಿಕೆ ತೆಗೆದುಕೊಂಡ ಮೂರರಿಂದ ನಾಲ್ಕು ವಾರದ ನಂತರ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಕೊರೊನಾದಿಂದ ಗುಣಮುಖರಾದ ಮಂದಿಯಲ್ಲಿ ಮೊದಲ ಡೋಸ್ ಪಡೆದ ನಂತರ ಪ್ರತಿರೋಧಕ ಶಕ್ತಿ ಹೆಚ್ಚಲಿದೆ. ಹೀಗಾಗಿ ಸದ್ಯಕ್ಕೆ ಕೊರೊನಾದಿಂದ ಗುಣಮುಖರಾದವರಿಗೆ ಒಂದು ಡೋಸ್ ಲಸಿಕೆ ನೀಡಿದರೆ ಸಾಕು. ಇದರಿಂದ ಲಸಿಕೆಗೆ ಉಂಟಾಗಿರುವ ಅಭಾವವನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸಬಹುದು. ಈ ಕುರಿತು ಪ್ರಧಾನಿ ಮೋದಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಕೊರೊನಾ ಲಸಿಕೆ ಅಭಾವ ಎದುರಾಗಿದ್ದು, ಮೊದಲ ಡೋಸ್ ಲಸಿಕೆಯ ಪ್ರಭಾವದ ಕುರಿತು ಕೇಂದ್ರ ಸರ್ಕಾರ ಅಧ್ಯಯನ ನಡೆಸಲು ಚಿಂತಿಸಿದ ಬೆನ್ನಲ್ಲೇ ಚೌಬೆ ಅವರು ಈ ಸಲಹೆ ನೀಡಿದ್ದಾರೆ.
ಜನವರಿ 16ರಿಂದ ಭಾರತದಲ್ಲಿ ಲಸಿಕಾ ಅಭಿಯಾನ ಆರಂಭವಾಗಿದ್ದು, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ರಷ್ಯಾದ ಸ್ಫುಟ್ನಿಕ್ ವಿ ಲಸಿಕೆಗೆ ಅನುಮೋದನೆ ನೀಡಿದ್ದು, ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆ ನೀಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅವಕಾಶ ಕೊಟ್ಟ ನಂತರ ಹಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆಗೆ ಕೊರತೆ ಎದುರಾಗಿದೆ.