ಕೇರಳದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಬಿಜೆಪಿ ಪ್ರಭಾವ: ಪಿಣರಾಯಿಗೆ ಅದೇ ಚಿಂತೆ?
Recommended Video
ರಕ್ಷಾ ಬಂಧನದ ವೇಳೆ RSSನ ರಾಖಿ ಕಟ್ಟಿಕೊಂಡು ಕೇರಳದ ರಸ್ತೆಗಳಲ್ಲಿ ತಿರುಗಾಡಲು ಹಿಂಜರಿಯುವ ದಿನಗಳಿದ್ದವು. ಸಂಘಪರಿವಾರ ಮತ್ತು ಕಮ್ಯೂನಿಸ್ಟರ ನಡುವೆ ರಕ್ತಪಾತಕ್ಕೆ ಕೊನೆಯೇ ಇರಲಿಲ್ಲ. ಆದರೆ ಈಗ, ಕಮ್ಯೂನಿಸ್ಟರ ಈ ಭದ್ರಕೋಟೆಯಲ್ಲಿ ದಿನದಿಂದ ದಿನಕ್ಕೆ ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದೆಯಾ?
ಯಾರಾದರೂ ಇನ್ನೊಬ್ಬರನ್ನು ಹೆಚ್ಚಾಗಿ ಟೀಕಿಸಲು ಶುರುಮಾಡಲು ಆರಂಭಿಸುತ್ತಾರೋ, ಆವಾಗ ಅವರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುವುದು ಸಿಂಪಲ್ ಲೆಕ್ಕಾಚಾರ. ಕಳೆದ ಕೇರಳದ ಅಸೆಂಬ್ಲಿ ಚುನಾವಣೆಯಿಂದ ಹಿಡಿದು, ಇತ್ತೀಚಿನ ಕೇರಳದ ಪ್ರವಾಹ ಮತ್ತು ಶಬರಿಮಲೆ ವಿವಾದದಲ್ಲಿ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರಕಾರ ಟೀಕಿಸುತ್ತಿರುವುದು ಬರೀ ಬಿಜೆಪಿ, ನರೇಂದ್ರ ಮೋದಿ ಮತ್ತು RSS ಅನ್ನು.
ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್
ಕೇರಳದ ಭೀಕರ ಪ್ರವಾಹದ ವೇಳೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಸಹಸಂಸ್ಥೆಗಳ ಮೂಲಕ, ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಭಾರೀ ಪ್ರಶಂಸೆಗೊಳಗಾಗಿತ್ತು. ಇದರ ಜೊತೆಗೆ, ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ವಿಚಾರದಲ್ಲೂ ಬಿಜೆಪಿ ಮತ್ತು ಸಂಘ ಪರಿವಾರ ರಾಜ್ಯದಲ್ಲಿ ಹಿಂದೂ ಬಹುಸಂಖ್ಯಾತರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಕೇರಳದಲ್ಲಿ ದಶಕಗಳಿಂದ ನೇರ ಹಣಾಹಣಿ ನಡೆಯುತ್ತಿರುವುವುದು ಯುಡಿಎಫ್ ಮತ್ತು ಎಲ್ಡಿಎಫ್ ಮೈತ್ರಿಕೂಟಗಳ ನಡುವೆ. ಆದರೆ, ಕಳೆದ ಅಸೆಂಬ್ಲಿ ಚುನಾವಣೆಯ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ಹೆಚ್ಚಾಗಿ ಅಲ್ಲಿ ಕಾಣಿಸಿದ್ದು ಸ್ಪಷ್ಟವಾಗಿತ್ತು. 140ಕ್ಷೇತ್ರಗಳ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರವನ್ನು ಗೆದ್ದಿದ್ದರೂ, ವೋಟ್ ಶೇರ್ ನಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗುತ್ತಿರುವುದು ಕಾಣುತ್ತಿತ್ತು.
ಶಬರಿಮಲೆ ಸುಪ್ರೀಂ ತೀರ್ಪು: ನ.13 ರಂದು ಮೇಲ್ಮನವಿ ವಿಚಾರಣೆ
2011ರ ಚುನಾವಣೆಯಲ್ಲಿ ಶೇ. 6ರಷ್ಟು ಮತ ಪಡೆದಿದ್ದ ಬಿಜೆಪಿಯ ವೋಟ್ ಶೇರ್ 2016ರ ವಿಧಾನಸಭಾ ಚುನಾವಣೆಯಲ್ಲಿ ಶೇ. 10.6ಕ್ಕೆ ಏರಿತ್ತು. ಸಿಪಿಐ, ಕೇರಳ ಮುಸ್ಲಿಂಲೀಗ್ ಪಡೆದ ವೋಟಿಗಿಂತಲೂ ಇದು ಜಾಸ್ತಿಯಾಗಿತ್ತು ಎನ್ನುವುದು ಗಮನಿಸಬೇಕಾದ ವಿಚಾರ. ಚುನಾವಣಾ ಆಯೋಗದ ಅಂಕಿಅಂಶದ ಪ್ರಕಾರ ಬಿಜೆಪಿ, 21,29,726 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿತ್ತು.
ಕಣ್ಣೂರು, ತ್ರಿಶೂರು ಮುಂತಾದ ಕಡೆ ಬರ್ಭರವಾಗಿ ಹತ್ಯೆಗೊಂಡಿದ್ದರು
ಪಿಣರಾಯಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾಲುಸಾಲು ಸಂಘ ಪರಿವಾರದ ಕಾರ್ಯಕರ್ತರು ಕಣ್ಣೂರು, ತ್ರಿಶೂರು ಮುಂತಾದ ಕಡೆ ಬರ್ಭರವಾಗಿ ಹತ್ಯೆಗೊಂಡಿದ್ದರು. ರಾಷ್ಟ್ರ ಮಟ್ಟದಲ್ಲಿ ಇದು ಭಾರೀ ಸುದ್ದಿಯಾಗಿತ್ತು, ಎಡಪಕ್ಷಗಳ ಕಾರ್ಯಕರ್ತರೇ ಇದರಲ್ಲಿ ಶಾಮೀಲಾಗಿದ್ದರು ಎನ್ನುವುದು ಸ್ಪಷ್ಟವಾಗಿತ್ತು. ಹತ್ಯೆಯನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಕರೆದಿದ್ದ ಹರತಾಳಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿತ್ತು.
RSS ಮತ್ತು ಅದರ ಸಹ ಸಂಘಟನೆ ದೇಶೀಯ ಸೇವಾಭಾರತಿ
ಇದಾದ ನಂತರ, ಕಂಡು ಕೇಳರಿಯದ ಪ್ರವಾಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಸಹ ಸಂಘಟನೆ ದೇಶೀಯ ಸೇವಾಭಾರತಿ ತೊಡಗಿಸಿಕೊಂಡಿದ್ದ ರೀತಿ ವ್ಯಾಪಕ ಪ್ರಶಂಸೆಗೊಳಗಾಗಿತ್ತು. ಪ್ರವಾಹ ಪೀಡಿತ ಎಲ್ಲಾ ಹದಿನಾಲ್ಕು ಜಿಲ್ಲೆಗಳಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ದೇಣಿಗೆಯಿಂದ ಹಿಡಿದು ವಸತಿ, ಊಟ, ಪರಿಹಾರ ಶಿಬಿರ ಮುಂತಾದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಮಹಿಳಾ ಕಾರ್ಯಕರ್ತರೂ ಸೇರಿ ಸುಮಾರು ಒಂದು ಲಕ್ಷ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದರು.
ಕೇರಳ ಪ್ರವಾಹ: 1ಲಕ್ಷ RSS ಕಾರ್ಯಕರ್ತರ ಬೃಹತ್ ಪರಿಹಾರ ಕಾರ್ಯಾಚರಣೆ
ಪುರಾಣಪ್ರಸಿದ್ದ ಶಬರಿಮಲೆ ದೇವಸ್ಥಾನ
ಪುರಾಣಪ್ರಸಿದ್ದ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಬಹುತೇಕ ಹಿಂದೂ ಭಕ್ತರನ್ನು ಕೆರಳಿಸಿತ್ತು. ಸಣ್ಣದಾಗಿ ಆರಂಭವಾದ ಹೋರಾಟ, ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆಯಿತು. ಕೇರಳದ ಎಲ್ಲಾ ಜಿಲ್ಲಾಕೇಂದ್ರಗಳಲ್ಲೂ ಮತ್ತು ಪಕ್ಕದ ತಮಿಳುನಾಡು ಮತ್ತು ಕರ್ನಾಟಕದಲ್ಲೂ ಪ್ರತಿಭಟನೆ ತೀವ್ರತೆಯನ್ನು ಪಡೆಯಿತು.
ಶಬರಿಮಲೆ ತೀರ್ಪಿನ ವಿರುದ್ದ ಹೋರಾಟ
ಕೇರಳದ ಜನತೆ ಇದುವರೆಗೆ ಯಾವ ಪಕ್ಷಕ್ಕೆ ಬೆಂಬಲಿಸಿಕೊಂಡು ಬರುತ್ತಿದ್ದರೋ, ಅದನ್ನೆಲ್ಲಾ ಮರೆತು ಒಂದಾಗಿ ಶಬರಿಮಲೆ ತೀರ್ಪಿನ ವಿರುದ್ದ ಹೋರಾಡಲು ಆರಂಭಿಸಿದರು. ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಈ ಘಟನೆ ಮಹತ್ವದ ಪಾತ್ರವನ್ನು ವಹಿಸಿಕೊಂಡಿತು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿ, ಈ ವಿಚಾರವನ್ನು ಇಟ್ಟುಕೊಂಡು, ಅಯ್ಯಪ್ಪ ಭಕ್ತರ ಕೂಗಿಗೆ ಧ್ವನಿಯಾಗಲು ಆರಂಭಿಸಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದರೂ, ಪಿಣರಾಯಿ ವಿಜಯನ್ ಸರಕಾರ ಅದನ್ನು ಮಾಡಲಿಲ್ಲ ಎನ್ನುವ ಸಿಟ್ಟು ಅಸಂಖ್ಯಾತ ಭಕ್ತರಲ್ಲಿತ್ತು. ಇದರ ಎಲ್ಲಾ ಮೈಲೇಜುಗಳನ್ನು ಬಿಜೆಪಿ ಪಡೆದುಕೊಂಡಿತು ಎಂದೇ ಹೇಳಲಾಗುತ್ತಿದೆ.
ಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಕಣ್ಣೀರಿಟ್ಟ ಕೇರಳ ಪೊಲೀಸ್ ಐಜಿಪಿ
ಮೂವರು ಅನ್ಯಜಾತಿಯ ಕೋಮಿನವರು ದೇವಾಲಯ ಪ್ರವೇಶಕ್ಕೆ ಯತ್ನ
ಮೂವರು ಅನ್ಯಜಾತಿಯ ಕೋಮಿನವರು ಶಬರಿಮಲೆ ದೇವಾಲಯ ಪ್ರವೇಶಕ್ಕೆ ಯತ್ನ, ಆ ದಿನ ನಡೆದ ಪ್ರತಿಭಟನೆ, ಅಯ್ಯಪ್ಪ ಭಕ್ತರ ಮೇಲೆ ನಡೆದ ಲಾಠಿಚಾರ್ಜ್ ಇವೆಲ್ಲವೂ ರಾಜ್ಯ ಸರಕಾರದ ಅಣತಿಯಂತೆ ನಡೆಯಿತು ಎನ್ನುವ ಗುಸುಗುಸು ಮಾತು ಕೇರಳದಲ್ಲಿ ಚಾಲ್ತಿಯಲ್ಲಿದೆ. ಇವೆಲ್ಲವೂ ಮುಂದಿನ ಸಾರ್ವತ್ರಿಕ ಚುನಾವಣೆಯ ವೇಳೆ ಪಿಣರಾಯಿಗೆ ಹಿನ್ನಡೆ ತರುವ ಅಂಶಗಳು ಆದರೂ ಆಗಬಹುದು. ಬದಲಾದ ರಾಜಕೀಯ ಲೆಕ್ಕಾಚಾರಾವೋ ಏನೋ, ಮುಖ್ಯಮಂತ್ರಿ ಪಿಣರಾಯಿ, ಅಯ್ಯಪ್ಪ ದೇವಾಲಯದ ಆವರಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ರಣರಂಗವನ್ನಾಗಿ ಮಾಡುತ್ತಿದೆ. ಬಿಜೆಪಿ ಭಕ್ತರನ್ನು ಛೂ ಬಿಟ್ಟಿದೆ ಎಂದು ದೂರುತ್ತಿದ್ದಾರೆ. ಇದು ಅಲ್ಲಿನ ಸದ್ಯದ ಸ್ಥಿತಿಗತಿ, ಮುಂದೇನು ಆಗುತ್ತೋ.. ನೋಡೋಣ..