ಸಿಕ್ಕಿಂ ರಾಜ್ಯದ ರಾಯಭಾರಿಯಾಗಿ ಎ.ಆರ್. ರೆಹಮಾನ್
ಗ್ಯಾಂಗ್ಟಕ್, ಜೂನ್ 20: ಆಸ್ಕರ್ ಪ್ರಶಸ್ತಿ ವಿಜೇತ ಪ್ರಖ್ಯಾತ ಸಂಗೀತಗಾರ ಎ.ಆರ್. ರೆಹಮಾನ್ ಅವರನ್ನು ಸಿಕ್ಕಿಂ ರಾಜ್ಯದ ರಾಯಭಾರಿಯನ್ನಾಗಿ ನೇಮಿಸಲಾಗಿದೆ.
ಸಿಕ್ಕಿಂ ರಾಜ್ಯ ಸರಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಎ.ಆರ್. ರೆಹಮಾನ್ ಪ್ರಚಾರ ಪಡಿಸಲಿದ್ದಾರೆ. ಈ ಸಂಬಂಧ ಸಿಕ್ಕಿಂ ಮುಖ್ಯ ಕಾರ್ಯದರ್ಶಿ ಎ.ಕೆ. ಶ್ರೀವಾಸ್ತವ ಪ್ರಕಟಣೆ ಹೊರಡಿಸಿದ್ದಾರೆ.
ಅಪೂರ್ವ ಸೌಂಧರ್ಯದ ಪ್ರಕೃತಿಯನ್ನು ಸಿಕ್ಕಿಂ ಹೊಂದಿದ್ದು ಕಳೆದ ಎರಡು ದಶಕದಲ್ಲಿ ಜಗತ್ತಿನ ಪ್ರಖ್ಯಾತ ಪರಿಸರ ಪ್ರವಾಸೋದ್ಯಮದ ಕೇಂದ್ರವಾಗಿ ಗುರುತಿಸಿಕೊಂಡಿದೆ. ದೇಶದಲ್ಲೇ ಸಂಪೂರ್ಣವಾಗಿ ಸಾವಯವ ಕೃಷಿ ಮಾಡುವ ರಾಜ್ಯ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಸಿಕ್ಕಿಂ ಇದೀಗ ತನ್ನ ಖ್ಯಾತಿಯನ್ನು ಮತ್ತಷ್ಟು ಪ್ರಚುರ ಪಡಿಸಲು ಸಂಗೀತ ಮಾತ್ರಿಕನ ನೆರವನ್ನು ನೆಚ್ಚಿಕೊಂಡಿದೆ.
ಈ ವರ್ಷದ ಆರಂಭದಲ್ಲಿ ಸಿಕ್ಕಿಂ ರಾಜ್ಯದ ಪ್ರವಾಸೋದ್ಯಮ ಮತ್ತು ಉದ್ಯಮ ರಾಯಭಾರಿಯನ್ನಾಗಿ ಎ.ಆರ್. ರೆಹಮಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಅವರನ್ನು ಪೂರ್ತಿ ಸರಕಾರಕ್ಕೆ ರಾಯಭಾರಿಯನ್ನಾಗಿ ನೇಮಿಸಲಾಗಿದೆ.