ಮಹಾದೇವಿಗೆ ಸಂಸದರಿಂದಲೂ ಹರಿದುಬಂದ ಸಹಾಯಹಸ್ತ
ಬೆಂಗಳೂರು, ಫೆಬ್ರವರಿ 23 : ಹುಬ್ಬಳ್ಳಿ ಮೂಲದ ಹುತಾತ್ಮ ವೀರ ಯೋಧ ಹನುಮಂತಪ್ಪ ಕೊಪ್ಪದ ಅವರ ಹೆಂಡತಿ ಮಹಾದೇವಿಗೆ ಇನ್ನೂ ಸರಕಾರದಿಂದ ನೌಕರಿ ನೀಡಿಲ್ಲ ಎಂದು ಒನ್ಇಂಡಿಯಾ ಪ್ರಕಟಿಸಿದ ಲೇಖನಕ್ಕೆ ಭಾರೀ ಸ್ಪಂದನೆ ಮತ್ತು ಬೆಂಬಲ ವ್ಯಕ್ತವಾಗಿದೆ.
ಜನಸಾಮಾನ್ಯರು ಮಾತ್ರವಲ್ಲ, ಸಂಸದರಾದ ರಾಜೀವ್ ಚಂದ್ರಶೇಖರ್, ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ, ಪ್ರಹ್ಲಾದ್ ಜೋಶಿ ಮುಂತಾದವರು 27 ವರ್ಷದ ಮಹಾದೇವಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ವಾಗ್ದಾನ ನೀಡಿದ್ದಾರೆ.[ಮಾನವೀಯತೆಯ ಇದ್ದರೆ ಮಹಾದೇವಿಗೆ ಕೆಲಸ ಕೊಡಲಿ : ಜೋಶಿ]
ಈ ಎಲ್ಲ ಬೆಂಬಲದಿಂದ ನನ್ನ ಹೃದಯ ತುಂಬಿಬಂದಿದೆ. ವರ್ಷದ ಹಿಂದೆ ಹುಬ್ಬಳ್ಳಿಗೆ ನನ್ನ ಗಂಡನ ದೇಹ ತಂದಾಗ ಸರಕಾರಿ ಅಧಿಕಾರಿಗಳು, ಗಂಡನ ಅಂತ್ಯಸಂಸ್ಕಾರಕ್ಕೆ ಹಣ ನೀಡಿದರು, ಎಲ್ಲ ಅನುಕೂಲತೆಗಳನ್ನು ಒದಗಿಸಿದರು. ಸರಕಾರ ಎಲ್ಲ ಸಹಕಾರ ನೀಡಿತು, ಆದರೆ ಉದ್ಯೋಗ ನೀಡುವಲ್ಲಿ ಯಾಕೋ ತಡವಾಗುತ್ತಿದೆ. ಅದನ್ನೂ ನೀಡುತ್ತೇನೆಂದು ಹೇಳಿದ್ದಾರೆ ಎಂದು ಮಹಾದೇವಿ ಕೃತಜ್ಞತಾಭಾವವಾಗಿ ನುಡಿಯುತ್ತಾರೆ.[ಭಿಕ್ಷೆ ಬೇಡುವುದನ್ನು ನನ್ನ ವೀರ ಗಂಡ ಕಲಿಸಿಲ್ಲ : ಮಹಾದೇವಿ]
ಒಂದೆಡೆ ಸಹಾಯ ಹರಿದುಬರುತ್ತಿದ್ದರೆ, ಮತ್ತೊಂದೆಡೆ ಮಹಾದೇವಿಗೆ ಎಷ್ಟೊಂದು ಪರಿಹಾರ ನೀಡಿದ್ದರೂ ಆಕೆ ದುರಾಸೆ ಮಾಡುತ್ತಿದ್ದಾಳೆ ಎಂದು ರಾಜಕೀಯ ವಲಯದಿಂದಲೇ ಟೀಕೆಗಳು ಕೇಳಿಬಂದಿದ್ದವು. ಪರಿಹಾರ ಬಂದಿರುವುದನ್ನು ಮಹಾದೇವಿ ಅಲ್ಲಗಳೆದಿಲ್ಲ. ಆದರೆ, ತನ್ನ ಮತ್ತು ಮಗಳ ಭವಿಷ್ಯದ ದೃಷ್ಟಿಯಿಂದ ಗೌರವಯುತವಾಗಿ ಬದುಕಲು ಒಂದು ಕೆಲಸ ಬೇಕು ಎಂದೂ ಕೇಳಿದ್ದಳು.
ಮಹಾದೇವಿಗೆ ನೌಕರಿ ಅಲ್ಲಗಳೆಯುವುದು ಸಮ್ಮತವಲ್ಲ
ಇದಕ್ಕೆ ಹುತಾತ್ಮ ಸೈನಿಕರಿಗಾಗಿ ಸ್ಮಾರಕ ನಿರ್ಮಿಸಿರುವ ರಾಜೀವ್ ಚಂದ್ರಶೇಖರ್ ಅವರು ಪ್ರತಿಕ್ರಿಯಿಸುತ್ತ, ಮಹಾದೇವಿಗೆ ಪರಿಹಾರ ನೀಡಿರುವುದರಿಂದ ನೌಕರಿ ಅಲ್ಲಗಳೆಯುವುದು ಸಮ್ಮತವಲ್ಲ. ಆಕೆಗೆ ತನ್ನ ಸ್ವಂತ ಕಾಲ ಮೇಲೆ ನಿಂತು ಸ್ವತಂತ್ರವಾಗಿ ಬದುಕಲು ಉದ್ಯೋಗ ಬೇಕೇಬೇಕು. ಇಂಥವರು ದೇಶಸೇವೆ ಗೈಯುವ ಯೋಧನನ್ನು ಮದುವೆಯಾಗಿರುತ್ತಾರೆ ಎಂಬುದನ್ನು ಮರೆಯಬಾರದು. ಅವರಿಗೆ ಅನುಕಂಪದ ಅಗತ್ಯವಿರುವುದಿಲ್ಲ, ಅವರಿಗೆ ಸ್ವಂತವಾಗಿ ಬದುಕಲು ಬೆಂಬಲದ ಅಗತ್ಯವಿರುತ್ತದೆ ಎಂದು ಒನ್ಇಂಡಿಯಾಗೆ ತಿಳಿಸಿದರು.
ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಕೆಲಸ
ಮಹಾದೇವಿಗೆ ಅಗತ್ಯವಿರುವ ಸಹಾಯ ನೀಡುವುದಾಗಿ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮಾಡಿದ್ದಕ್ಕೆ ಪ್ರತಿಯಾಗಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು, ಮಹಾದೇವಿಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಕೆಲಸ ಕೊಡಿಸುವುದಾಗಿ ವಾಗ್ದಾನ ನೀಡಿದ್ದರು.
ಹುಬ್ಬಳ್ಳಿಯಲ್ಲಿ ಅಂಗನವಾಡಿಯಲ್ಲಿ ನೌಕರಿ
ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದಾಗ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ಕೂಡ ಮಹಾದೇವಿಯನ್ನು ಸಂಪರ್ಕಿಸಿ, ಹುಬ್ಬಳ್ಳಿಯಲ್ಲಿಯೇ ಅಂಗನವಾಡಿಯಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಮಾತು ನೀಡಿದ್ದಾರೆ. ಇದೇ ಸಮಯದಲ್ಲಿ ರಾಜ್ಯ ಸರಕಾರದಲ್ಲಿಯೇ ಅವರಿಗೆ ಕೆಲಸ ನೀಡುವುದಾಗಿ ಮುಖ್ಯಮಂತ್ರಿ ಕಚೇರಿಯಿಂದ ಮಹಾದೇವಿಗೆ ಪತ್ರ ರವಾನೆಯಾಗಿದೆ.
ಭರವಸೆ ನೀಡಿದವರೆಲ್ಲ ಮಾಯವಾಗುತ್ತಾರೆ
"ಹೀಗೆ ಭರವಸೆ ನೀಡಿದ ರಾಜಕಾರಣಿಗಳು ಇದ್ದಕ್ಕಿದ್ದಂತೆ ಮಾಯವಾಗುತ್ತಾರೆ. ಇಂಥ ಹಲವರನ್ನು ದಶಕಗಳ ಕಾಲ ನೋಡಿದ್ದೇನೆ. ಒಂದು ಬಾರಿ ಜನ ಮತ್ತು ಮಾಧ್ಯಮ ಹಿಂದೆ ಸರಿದ ಮೇಲೆ ಹುತಾತ್ಮ ಯೋಧರ ಕುಟುಂಬಕ್ಕೆ ಅಗತ್ಯವಾಗಿದ್ದು ಸಿಗಬೇಕೆಂಬ ಉದ್ದೇಶದಿಂದಲೇ ಫ್ಲಾಗ್ಸ್ ಆಫ್ ಆನರ್ ಆರಂಭಿಸಿದ್ದು. ಕೊಪ್ಪದ ಪ್ರಕರಣದಲ್ಲಿ ಕೂಡ ಅದೇ ಆಗಿದ್ದು. ಆಕೆಗೆ ಭರವಸೆ ನೀಡಿದ್ದೇ ಹೆಚ್ಚು" ಎಂದು ವಿಷಾದ ವ್ಯಕ್ತಪಡಿಸುತ್ತಾರೆ ರಾಜೀವ್ ಚಂದ್ರಶೇಖರ್.
ಗೌರವಯುತ ಬದುಕಿಗೆ ಉದ್ಯೋಗ ಬೇಕೇಬೇಕು
ಇದು ಇಂದಿನ ಕಥೆಯಲ್ಲ, ಹೀಗೆ ದೇಶಕ್ಕಾಗಿ ಜೀವವನ್ನು ತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ಎಲ್ಲ ರೀತಿ ಭರವಸೆಗಳನ್ನು ನೀಡಿದವರೆಷ್ಟೋ? ಹಾಗೆ ನೋಡಿದರೆ ಮಹಾದೇವಿಗೆ ಸದ್ಯಕ್ಕೆ ನೌಕರಿಯ ಅಗತ್ಯವಿಲ್ಲ. ಆದರೆ, ಈ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕಿದ್ದರೆ ಒಂದು ಉದ್ಯೋಗದ ಅಗತ್ಯ ಖಂಡಿತವಿದೆ. ಅದನ್ನು ಕೊಡಬೇಕಾಗಿರುವುದು ಕರ್ನಾಟಕ ಸರಕಾರದ ಜವಾಬ್ದಾರಿ ಕೂಡ. ಅದನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಾಕಷ್ಟು ವಿಳಂಬ ಮಾಡಿದೆ.