ಪ್ರಧಾನಿ ಮೋದಿಗೆ ಏನಿದು ಪ್ರಿಯಾಂಕ ಗಾಂಧಿಯ ಗಂಭೀರ ಪ್ರಶ್ನೆ?
Recommended Video
ನವದೆಹಲಿ, ಆ 26: ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದತಿಯ ವಿಚಾರದಲ್ಲಿ ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯ ಬಳಿ, ಕಾಶ್ಮೀರದ ಮಹಿಳೆಯೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ಕಣ್ಣೀರಿಡುತ್ತಾ ವಿವರಿಸುವ ವಿಡಿಯೋ ಜೊತೆಗೆ ಟ್ವೀಟ್ ಮಾಡಿರುವ ಪ್ರಿಯಾಂಕ, " ಕಾಶ್ಮೀರದಲ್ಲಿ ಏನಾಗುತ್ತಿದೆ" ಎಂದು ಪ್ರಶ್ನಿಸಿದ್ದಾರೆ.
ಕಾಶ್ಮೀರ ಮತ್ತೆ ಉದ್ವಿಗ್ನ: ಕಲ್ಲು ತೂರಾಟಕ್ಕೆ ಟ್ರಕ್ ಚಾಲಕ ಬಲಿ
ಸರಣಿ ಟ್ವೀಟ್ ಮೂಲಕ ಮುಂದುವರಿಯುತ್ತಾ, " ಕಾಶ್ಮೀರಿಗಳಿಗೆ ಅವರಿಗೆ ಸಿಗಬೇಕಾಗಿರುವ ಪ್ರಜಾಪ್ರಭುತ್ವ ಹಕ್ಕುಗಳನ್ನು ನಿರಾಕರಿಸಿರುವುದರಿಂದ, ಇದಕ್ಕಿಂತ ಇನ್ನೊಂದು ದೊಡ್ಡ ದೇಶದ್ರೋಹದ ಕೆಲಸ ಇದೆಯಾ" ಎನ್ನುವ ಗಂಭೀರ ಟ್ವೀಟ್ ಅನ್ನು ಪ್ರಿಯಾಂಕ ಗಾಂಧಿ ಮಾಡಿದ್ದಾರೆ.
ಆರ್ಟಿಕಲ್ 370 ರದ್ದತಿಯನ್ನು ಪರೋಕ್ಷವಾಗಿ ದೇಶದ್ರೋಹದ ಕೆಲಸವೆಂದು ಹೇಳಿರುವ ಪ್ರಿಯಾಂಕ, " ಇದು ಎಲ್ಲಿಯವರಗೆ ಸಾಗುತ್ತೆ? ಒಂದು ಮಿಲಿಯನ್ ಜನರನ್ನು ರಾಷ್ಟ್ರವಾದದ ಹೆಸರಿನಲ್ಲಿ ಹತ್ತಿಕ್ಕಲಾಗುತ್ತಿದೆ. ಯಾರು ಈ ವಿಚಾರವನ್ನು ಹಿಡಿದುಕೊಂಡು, ಪ್ರತಿಪಕ್ಷವು ರಾಜಕೀಯ ಮಾಡುತ್ತಿದೆ ಎಂದು ಹೇಳುತ್ತಾರೋ, ಅವರಿಗೆ ಈ ವಿಡಿಯೋ ಅರ್ಪಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ, ಗುಲಾಂನಬಿ ಆಜಾದ್, ಸೀತಾರಾಂ ಯಚೂರಿ ಸಹಿತ ವಿರೋಧ ಪಕ್ಷದ ಮುಖಂಡರ ನಿಯೋಗ, ಶನಿವಾರ (ಆ 24) ಕಾಶ್ಮೀರದ ವಸ್ತುಸ್ಥಿತಿ ಅರಿಯಲು ಶ್ರೀನಗರಕ್ಕೆ ತೆರಳಿತ್ತು. ಆದರೆ, ಅವರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ, ವಾಪಸ್ ದೆಹಲಿಗೆ ಕಳುಹಿಸಲಾಗಿತ್ತು.
How long is this going to continue?This is one out of millions of people who are being silenced and crushed in the name of “Nationalism”.
— Priyanka Gandhi Vadra (@priyankagandhi) August 25, 2019
For those who accuse the opposition of ‘politicising’ this issue: https://t.co/IMLmnTtbLb
" ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರದ ರಾಜ್ಯಪಾಲಾರಾದ ಸತ್ಯಪಾಲ್ ಮಲಿಕ್ ನಮ್ಮನ್ನು ಅಲ್ಲಿಗೆ ಆಹ್ವಾನಿಸಿದ್ದರು. ಅದರಂತೇ, ನಾವು ಅಲ್ಲಿಗೆ ಹೋದಾಗ, ನಮ್ಮನ್ನು ತಡೆಹಿಡಿಯಲಾಗಿದೆ" ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತ ಪಡಿಸಿದ್ದರು.