ಉತ್ತರ ಭಾರತದಲ್ಲಿ ಶ್ರಾವಣ ಸೋಮವಾರ, ದೋಷ ನಿವಾರಣೆಗೆ ಪೊರಕೆ ದಾನ
ಉತ್ತರ ಭಾರತದಲ್ಲಿ ಈಗ ಶ್ರಾವಣ ಶುರುವಾಗಿದೆ. ಶ್ರಾವಣದ ಮೊದಲ ಸೋಮವಾರದ ಜುಲೈ 30ರಂದು ಉತ್ತರಪ್ರದೇಶದ ಸಂಭಾಲ್ ನಲ್ಲಿರುವ ಪಟಾಲೇಶ್ವರ ದೇವಸ್ಥಾನದಲ್ಲಿ ಭಕ್ತರು ಕಸದ ಪೊರಕೆ ದಾನ ಮಾಡಿ, ಪ್ರಾರ್ಥನೆ ಅರ್ಪಿಸಿದರು. ಸ್ಥಳೀಯರ ನಂಬಿಕೆ ಪ್ರಕಾರ. ಈ ದೇವಸ್ಥಾನದಲ್ಲಿ ಪೊರಕೆ ಅರ್ಪಿಸಿದರೆ ಎಲ್ಲ ರೋಗ- ರುಜಿನಗಳು ನಿವಾರಣೆಯಾಗುತ್ತವೆ.
ಇನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೆಹಲಿಯಲ್ಲಿರುವ ಗೌರಿಶಂಕರ್ ದೇವಾಲಯದಲ್ಲಿ ಶ್ರಾವಣದ ಮೊದಲ ಸೋಮವಾರದ ಕಾರಣಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು. ಕಾನ್ಪುರದ ಆನಂದೇಶ್ವರ ದೇಗುಲದಲ್ಲಿ ಕೂಡ ಭಕ್ತರು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದರು.
ಶಿವ ಪುರಾಣ ಪ್ರಕಾರ ಯಾವ ರೀತಿಯ ಶಿವನ ಪೂಜೆಗೆ ಏನು ಫಲ?
ಉಜ್ಜೈನಿಯ ಮಹಾಕಾಲ ದೇವಾಲಯದಲ್ಲಿ ಬೆಳ್ಳಂಬೆಳಗ್ಗೆ ಭಕ್ತರು ತಮ್ಮ ಮನದ ಅಭಿಲಾಷೆ ತೀರಿಸುವಂತೆ ಕೋರಿಕೊಂಡರು. ಒಟ್ಟಾರೆ ಈಗ ಉತ್ತರ ಭಾರತದಲ್ಲಿ ಶ್ರಾವಣ ಮಾಸ ಆರಂಭ ಆಗಿರುವುದರಿಂದ ಶಿವನಿಗೆ ವಿಶೇಷ ಪೂಜೆ ಸಲ್ಲಿಸುವ ಪದ್ಧತಿ ಇದೆ. ಆದರೆ ಕರ್ನಾಟಕದಲ್ಲಿ ಈಗ ಆಷಾಢ ಮಾಸ ನಡೆಯುತ್ತಿದೆ.
ಉತ್ತರ ಭಾರತದಲ್ಲಿ ವಿಕ್ರಮ ಶಕೆ- ಸೌರಮಾನವನ್ನು ಅನುಸರಿಸುತ್ತಾರೆ. ಅಲ್ಲಿನ ಮಾಸಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಇರುತ್ತದೆ. ದಕ್ಷಿಣ ಭಾರತದಲ್ಲಿ ಶಾಲಿವಾಹನ ಶಕೆ- ಚಾಂದ್ರಮಾನವನ್ನು ಅನುಸರಿಸುತ್ತಾರೆ. ಆದ್ದರಿಂದ ಈ ರೀತಿಯಾಗುತ್ತದೆ ಎಂದು ಜ್ಯೋತಿಷಿಗಳು ಅಭಿಪ್ರಾಯ ಪಡುತ್ತಾರೆ.