ಭಾರತದ ಹೆಣ್ಣು ಮಕ್ಕಳ ವ್ಯಥೆ ಬಿಚ್ಚಿಡುವ ವರದಿಯಲ್ಲೇನಿದೆ?
ನವದೆಹಲಿ, ಆಗಸ್ಟ್. 26: ನಮ್ಮ ದೇಶದಲ್ಲಿ ಪರಂಪರೆಯಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಆದರೆ ಕೇಂದ್ರ ಅಪರಾಧ ದಳ(ಎನ್ ಸಿ ಆರ್ ಬಿ) ಬಿಡುಗಡೆ ಮಾಡಿರುವ ಮಾಹಿತಿ ನವ ಭಾರತದ ಹೆಣ್ಣು ಮಕ್ಕಳ ದುರಂತ ಕತೆಯನ್ನು ಹೇಳುತ್ತದೆ.
ಕಳೆದ ದಶಕಕ್ಕೆ ಹೋಲಿಸಿದರೆ ಹೆಣ್ಣು ಮಕ್ಕಳ ಸಾಗಾಟ ಅಪರಾಧ ಪ್ರಕರಣದಲ್ಲಿ 14 ಪಟ್ಟು ಹೆಚ್ಚಳವಾಗಿದೆ. 2014 ಅಂತ್ಯಕ್ಕೆ ಶೇ. 65 ಹೆಚ್ಚಳ ಕಂಡಿದೆ! ಹೌದು ಇಂಥ ಆತಂಕಕಾರಿ ಸುದ್ದಿಯನ್ನು ಅರಗಿಸಿಕೊಳ್ಳಲೇಬೇಕು.
ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರೇ ಸಾಗಾಟದಾರರ ಟಾರ್ಗೆಟ್. ಅವರ ತಂತ್ರಗಳು ಇವರ ಸುತ್ತವೇ ತಿರುಗುತ್ತಿರುತ್ತವೆ ಎಂದು ಅಪರಾಧ ದಳ ವರದಿಯಲ್ಲಿ ತಿಳಿಸಿದೆ. ಉಳಿದಂತೆ ವೇಶ್ಯಾವಾಟಿಗೆ ದಂಧೆಗೆ ದೂಡಲು, ವಿದೇಶಗಳಿಗೆ ಕಳುಹಿಸಲು ಹೆಣ್ಣು ಮಕ್ಕಳ ಮೇಲೆ ವಕ್ರದೃಷ್ಟಿ ಬೀರಲಾಗುತ್ತಿದೆ.
ಲೈಂಗಿಕ ಶೋಷಣೆ, ಹೈಟೆಕ್ ವೇಶ್ಯಾವಾಟಿಕೆ, ಪ್ರವಾಸೋದ್ಯಮದ ಹೆಸರಲ್ಲಿ ವೇಶ್ಯಾವಾಟಿಕೆ, ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಬಳಕೆ ಹೆಣ್ಣು ಮಕ್ಕಳ ಸಾಗಾಟದ ಹಿಂದಿರುವ ಕರಾಳ ಮುಖಗಳು. 2014ರಲ್ಲಿ ದೇಶಾದ್ಯಂತ 8.099 ಹೆಣ್ಣು ಮಕ್ಕಳ ಸಾಗಾಟ ಪ್ರಕರಣ ದಾಖಲಾಗಿದೆ ಅಂದರೆ ವ್ಯವಸ್ಥೆ ಯಾವ ಸ್ಥಿತಿಗೆ ತಲುಪಿದೆ ಎಂಬುದು ಅರ್ಥ ಆಗುತ್ತದೆ. ಭಾರತದ ಗೃಹ ಇಲಾಖೆ ಸಾಗಾಟ ತಡೆಗೆ ಅನೇಕ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿದ್ದು ವೆಬ್ ಪೋರ್ಟಲ್ ವೊಂದನ್ನು ಆರಂಭಿಸಿದೆ.
ಅನೈತಿಕ ಸಂಬಂಧಕ್ಕೆ ಅತಿ ಹೆಚ್ಚು
ಅನೈತಿಕ ಸಂಬಂಧಕ್ಕೆ ಸಂಬಂಧಿಸಿ ಅತಿಹೆಚ್ಚು ಅಂದರೆ 3,351 ಪ್ರಕರಣಗಳು ದಾಖಲಾಗಿವೆ. ಕೆಲಸದ ಜಾಗ, ಮನೆ, ಕಟ್ಟಡ ಕಾಮಗಾರಿ ಸ್ಥಳದಿಂದಲೇ ಮಹಿಳೆಯರನ್ನು, ಬಾಲಕಿಯರನ್ನು ಅಪಹರಿಸಿಕೊಂಡು ಹೋಗಲಾಗಿದೆ.
ಎಲ್ಲಿಗೆ ಸಾಗಿಸುತ್ತಾರೆ?
ಅಪಹರಣ ಮಾಡಿದ ಹೆಣ್ಣು ಮಕ್ಕಳನ್ನು ಉಕ್ರೇನ್, ಜಾರ್ಜಿಯಾ, ಕಜಲಿಸ್ತಾನ್, ಉಜಕಿಸ್ತಾನ್, ನೇಪಾಳ, ಥೈಲ್ಯಾಂಡ್, ಮಲೇಷಿಯಾಕ್ಕೆ ಸಾಗಿಸಲಾಗುತ್ತದೆ ಎಂದು ಅಮೆರಿಕದ ಸಂಸ್ಥೆಯೊಂದು ವರದಿ ಮಾಡಿದೆ.
ಹೆಣ್ಣು ಮಕ್ಕಳ ಸಾಗಾಟ ಮಾಡಿದ್ರೆ ಏನು ಶಿಕ್ಷೆ?
2013ರ ತಿದ್ದುಪಡಿಯ ಪ್ರಕಾರ ಹೆಣ್ಣು ಮಕ್ಕಳ ಸಾಗಾಟ ಮಾಡಿದರೆ ಕನಿಷ್ಠ ಮೂರು ವರ್ಷ ಜೈಲು ವಾಸದಿಂದ ಹಿಡಿದು ಜೀವಾವಧಿವರೆಗೆ ವಿಧಿಸಬಹುದು. ಮಕ್ಕಳ ಸಾಗಾಟ, ಲೈಂಗಿಕ ಕಿರುಕುಳ, ಗುಲಾಮಗಿರಿಗೆ ದೂಡುವುದು, ಬಲಾತ್ಕಾರಯುತವಾಗಿ ವ್ಯಕ್ತಿಯ ಅಂಗಗಳನ್ನು ತೆಗೆದುಹಾಕುವುದು ಈ ಅಪರಾಧದ ಅಡಿಯಲ್ಲಿಯೇ ಬರುತ್ತದೆ.
ಕರ್ನಾಟಕಕ್ಕೆ 3ನೇ ಸ್ಥಾನ
ತಮಿಳುನಾಡು ಅತಿಹೆಚ್ಚು ಅಂದರೆ 9,701 ಪ್ರಕರಣಗಳಿಗೆ ಸಾಕ್ಷಿಯಾದರೆ, ಆಂಧ್ರ ಪ್ರದೇಶ 5,861, ನಮ್ಮ ರಾಜ್ಯ ಕರ್ನಾಟಕ 5,443, ಪಶ್ಚಿಮ ಬಂಗಾಳ 4,190 ಪ್ರಕರಣಗಳಿಗೆ ವಾರಸುದಾರರಾಗಿವೆ.
ಮುಂಬೈ ರೆಡ್ ಲೈಟ್ ಏರಿಯಾಕ್ಕೆ
ತಮಿಳುನಾಡಿನಲ್ಲಿ ಅಪಹರಣಕ್ಕೆ ಒಳಗಾದ ಬಾಲಕಿಯರು, ಮಹಿಳೆಯರನ್ನು ನೇರವಾಗಿ ಮುಂಬೈ ವೇಶ್ಯಾವಾಟಿಕೆ ಜಾಲಕ್ಕೆ ದೂಡಲಾಗುತ್ತಿದೆ.
ಮಾನವ ಸಾಗಾಟ ಅಂತಾರಾಷ್ಟ್ರೀಯ ಸಮಸ್ಯೆ
ಇದು ನಮ್ಮ ದೇಶಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಇಡೀ ಪ್ರಪಂಚದಲ್ಲೇ ಇದು ಮೂರನೇ ಸ್ಥಾನ ಪಡೆದುಕೊಂಡಿದೆ. ಕಳೆದ ದಶಕದಲ್ಲಿ ಭಾರತದಲ್ಲಿನ ಶೇ, 92 ರಷ್ಟು ಏರಿಕೆಯಾಗಿದೆ.
ಪರಿಹಾರ ಕ್ರಮಗಳೇನು?
ಮಾನವ ಸಾಗಾಟ ತಡೆಗೆ ಘಟಕವೊಂದರ ಮೂಲಕ ಕೇಂದ್ರ ಗೃಹ ಇಲಾಖೆ ಇಲಾಖೆ ಕೆಲಸ ಮಾಡುತ್ತಿದೆ. ದೇಶದೆಲ್ಲೆಡೆ 335 ಠಾಣೆಗಳ ಮೂಲಕ ಸಕಲ ಮಾಹಿತಿ ಪಡೆದುಕೊಳ್ಳುತ್ತಿದೆ.
2.65 ಕೋಟಿ ರು. ಅನುದಾನ
ಕೇಂದ್ರ ಸರ್ಕಾರ ಅರುಣಾಚಲ ಪ್ರದೇಶ, ಗುಜರಾತ್, ಹರ್ಯಾಣ, ಕೇರಳ, ನಾಗಾಲ್ಯಾಂಡ್, ಉತ್ತರಾಖಂಡದ ಮಾನವ ಸಾಗಾಟ ತಡೆಗೆ ಸಂಬಂಧಿಸಿ 2.65 ಕೋಟಿ ರು. ಅನುದಾನ ನೀಡಿದೆ.
ವೆಬ್ ಪೋರ್ಟಲ್
ಸಕಲ ಮಾಹಿತಿ ಎಲ್ಲರಿಗೂ ಒಂದೇ ಕಡೆ ಲಭ್ಯವಾಗಲಿ ಎಂದು ವೆಬ್ ಪೋರ್ಟಲ್ ಕೂಡಾ ಇದೆ. ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಜ್ವಲ ಎಂಬ ಹೆಸರಿನಲ್ಲಿ ಯೋಜನೆಯೊಂದನ್ನು ಅನುಷ್ಠಾನ ಮಾಡುತ್ತಿದೆ.