ನಟ ದಿಲೀಪ್ ಬಂಧನದಿಂದ ಆ ಬಹುಭಾಷಾ ನಟಿಗೆ ಶಾಕ್ ಆಯ್ತಂತೆ!
ತಿರುವನಂತಪುರಂ, ಜುಲೈ 13: ತಮ್ಮ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಅವರನ್ನು ಕೇರಳ ಪೊಲೀಸರು ಬಂಧಿಸಿರುವ ಸುದ್ದಿ ಕೇಳಿ ಆ ಬಹುಭಾಷಾ ನಟಿಗೆ ಶಾಕ್ ಆಗಿದೆಯಂತೆ!
ಫೆಬ್ರವರಿಯಲ್ಲಿ ನಟಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಚಲಿಸುತ್ತಿದ್ದ ಕಾರಿನಲ್ಲೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿತ್ತು. ಈ ಘಟನೆ, ಇಡೀ ದೇಶವನ್ನೇ ದಂಗುಬಡಿಸಿತ್ತು.
ದೇಶದ ಬಹುತೇಕ ಎಲ್ಲಾ ಚಿತ್ರರಂಗಗಳ ಗಣ್ಯರು ಈ ಘಟನೆಯನ್ನು ಕಟುವಾದ ಶಬ್ದಗಳಿಂದ ಖಂಡಿಸಿದ್ದರು. ಅಲ್ಲದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದರು.
ಕಾವ್ಯಾ ಮಾಧವನ್ ಸುತ್ತ ದೌರ್ಜನ್ಯದ ಉರುಳು!
ಇದರನ್ವಯ ಕೇರಳ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಆರಂಭಿಸಿದ್ದರು. ಆಗಲೇ ದುಷ್ಕರ್ಮಿಗಳು ಸಿಕ್ಕಿಹಾಕಿಕೊಂಡು ನಟ ದಿಲೀಪ್ ಹೆಸರನ್ನು ಬಾಯಿಬಿಟ್ಟಿದ್ದು. ಹಾಗಾಗಿ, ಪೊಲೀಸರು ಈಗ ದಿಲೀಪ್ ಅವರನ್ನು ಬಂಧಿಸಿದ್ದಾರೆ. ಆದರೆ, ದಿಲೀಪ್ ಅವರ ಬಂಧನದಿಂದ ತಮಗೆ ಶಾಕ್ ಆಗಿದೆ ಎಂದು ಹೇಳುವ ಮೂಲಕ ಆ ಬಹುಭಾಷಾ ನಟಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಈ ಬಗ್ಗೆ ಅಸಲಿಗೆ ನಟಿ ಹೇಳಿದ್ದೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಪೊಲೀಸರ ಹೇಳಿಕೆ ಕೇಳಿ ಬೇಸರ
ಅಸಲಿಗೆ ಆ ನಟಿ ಹೇಳಿದ್ದೇನೆಂದರೆ, ತಮ್ಮ ಪ್ರಕರಣದಲ್ಲಿ ದಿಲೀಪ್ ಅವರೇ ತಪ್ಪಿತಸ್ಥರೆಂದು ಬಯಲಾಗಿರುವುದು ಆಕೆಗೆ ಶಾಕ್ ತಂದಿದೆಯಂತೆ. ತಮ್ಮ ಮೇಲಿನ ಅಕ್ರಮಕ್ಕೆ ನಿಜವಾದ ಕಾರಣರು ಯಾರು ಎಂಬುದು ಖುದ್ದು ಆಕೆಗೂ ಗೊತ್ತಿಲ್ಲ. ಯಾರ ಬಗ್ಗೆಯೂ ಅನುಮಾನವಿಲ್ಲ. ಆದರೆ, ಘಟನೆಯಂತೂ ನಡೆದುಹೋಗಿದೆ. ಆದರೆ, ಇದಕ್ಕೆ ದಿಲೀಪ್ ಅವರೇ ಕಾರಣ ಎಂದು ಪೊಲೀಸರು ನಿರ್ಧರಿಸಿರುವುದರಿಂದ ಅದು ಆಕೆಗೆ ಶಾಕ್ ಕೊಟ್ಟಿದೆಯಂತೆ.
ಅಂಥವರಿಂದ ಇದು ಸಾಧ್ಯವಾ: ನಟಿ
ಆ ಬಹುಭಾಷಾ ನಟಿಗೆ ಹಾಗೆ ಶಾಕ್ ಆಗಲೂ ಕಾರಣವಿದೆಯಂತೆ. ಮಲಯಾಳಂ ಚಿತ್ರರಂಗದಲ್ಲಿ ದಿಲೀಪ್ ಸ್ಥಾನ ಸಣ್ಣದೇನಲ್ಲ. ಮಮ್ಮುಟ್ಟಿ, ಮೋಹನ್ ಲಾಲ್ ಬಿಟ್ಟರೆ ಆತ ಅಲ್ಲಿ 3ನೇ ಸೂಪರ್ ಸ್ಟಾರ್ ಎಂದು ಪರಿಗಣಿಸಲ್ಪಡುತ್ತಾನೆ. ಅಂಥ ದೊಡ್ಡ ಸ್ಟಾರ್ ಹೀಗೆಲ್ಲಾ ಮಾಡಲು ಸಾಧ್ಯವಾ ಎಂಬ ವಿಚಾರವೇ ಆಕೆಗೆ ಶಾಕ್ ಕೊಟ್ಟಿತಂತೆ.
ಭಿನ್ನಾಭಿಪ್ರಾಯ ನಿಜ, ಆರ್ಥಿಕ ವ್ಯವಹಾರ ಸುಳ್ಳು!
ಇನ್ನು, ಮಾಧ್ಯಮಗಳಲ್ಲಿ ಬಂದ ವರದಿಗಳಲ್ಲಿ ಎಲ್ಲವನ್ನೂ ಒಪ್ಪಲು ಆ ನಟಿ ಸಿದ್ಧವಿಲ್ಲ. ''ನನ್ನ ಹಾಗೂ ದಿಲೀಪ್ ನಡುವೆ ಭಿನ್ನಾಭಿಪ್ರಾಯಗಳಿದ್ದುದು ನಿಜ. ಅದಕ್ಕಾಗಿಯೇ ನಮ್ಮ ಸ್ನೇಹದಿಂದ ನಾವಿಬ್ಬರೂ ದೂರಾದೆವು. ಆದರೆ, ನನ್ನ ಹಾಗೂ ಆತನ ನಡುವೆ ಹಣಕಾಸು ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದವು ಎಂಬುದು ಸತ್ಯಕ್ಕೆ ದೂರವಾದ ಮಾತು'' ಎಂದಿದ್ದಾರೆ ಅವರು. ಇದಲ್ಲದೆ, ''ಪೊಲೀಸರ ವಿಚಾರಣೆ ವೇಳೆ ನಾನೂ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿರಲಿಲ್ಲ'' ಎಂದು ಅವರು ಹೇಳಿದ್ದಾರೆ.
ತಪ್ಪುಮಾಡಿದ್ದರೆ ಶಿಕ್ಷೆಯಾಗಲಿ
ಕೆಲವಾರು ಭಿನ್ನಾಭಿಪ್ರಾಯಗಳಿದ್ದ ಮಾತ್ರಕ್ಕೇ ದಿಲೀಪ್ ಇಂಥ ಕೆಳಮಟ್ಟಕ್ಕೆ ಇಳಿಯುತ್ತಾರಾ ಎಂಬ ಬಗ್ಗೆ ನನಗಿನ್ನೂ ನಂಬಿಕೆ ಬರುತ್ತಿಲ್ಲ. ಆದರೆ, ಆತ ತಪ್ಪು ಮಾಡಿದ್ದರೆ ಆತನಿಗೆ ಶಿಕ್ಷೆಯಾಗಲಿ. ಆತ ನಿರಪರಾಧಿ ಎಂದರೆ ಆತನಿಗೆ ಶಿಕ್ಷೆಯಾಗದಿರಲಿ ಎಂದು ಆಕೆ ಹೇಳಿದ್ದಾರೆ.