ಮೂವರು ಮಾಜಿ ಸಿಎಂಗಳಿಗೆ ಮಹತ್ವದ ಹುದ್ದೆ ನೀಡಿದ ಅಮಿತ್ ಶಾ
ನವದೆಹಲಿ, ಜನವರಿ 11: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದ ಬಳಿಕ, ಆಡಳಿತ ಕಳೆದುಕೊಂಡ ಮೂವರು ಮುಖ್ಯಮಂತ್ರಿಗಳನ್ನು ಮೂಲೆಗುಂಪಾಗಿಸಬಹುದು ಎಂದೆನಿಸಲಾಗಿತ್ತು. ಆದರೆ, ಮೂರು ರಾಜ್ಯಗಳ ಸಿಎಂಗಳಿಗೆ ಮಹತ್ವದ ಹುದ್ದೆಯನ್ನು ನೀಡಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಚ್ಚರಿ ಮೂಡಿಸಿದ್ದಾರೆ.
ಮಾಜಿ ಸಿಎಂಗಳಾದ ಶಿವರಾಜ್ ಸಿಂಗ್ ಚೌಹಾಣ್, ರಮಣ್ ಸಿಂಗ್ ಹಾಗೂ ವಸುಂಧರಾ ರಾಜೇ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಲೋಕಸಭೆ ಚುನಾವಣೆಗಾಗಿ ರಣತಂತ್ರ ರೂಪಿಸಲು ಎರಡು ದಿನಗಳ ರಾಷ್ಟ್ರೀಯ ಕೌನ್ಸಿಲ್ ಸಭೆ ನಿಗದಿಯಾಗಿರುವ ಬೆನ್ನಲ್ಲೇ ಈ ನೇಮಕ ಕುತೂಹಲ ಮೂಡಿಸಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಮೂರು ಮಾಜಿ ಸಿಎಂಗಳನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿರುವ ಬಗ್ಗೆ ಟ್ವೀಟ್ ಮಾಡಿದರು. ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ಥಾನದಲ್ಲಿ ಉಂಟಾಗಿರುವ ಸೋಲನ್ನು ಗೆಲುವಾಗಿ ಪರಿವರ್ತಿಸಲು ಯೋಜನೆ ರೂಪಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್ ಗಢದಲ್ಲಿ ರಮಣ ಸಿಂಗ್ ಹಾಗೂ ರಾಜಸ್ಥಾನದಲ್ಲಿ ವಸುಂಧರಾ ರಾಜೇ ಅವರು ಮುಖ್ಯಮಂತ್ರಿಯಾಗಿದ್ದರು. ಮೂರು ರಾಜ್ಯಗಳಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.