ಮಹಾರಾಷ್ಟ್ರ: ಶಿವಸೇನೆ- ಬಿಜೆಪಿ ವಿರಸ, ಆದರೂ ಮೈತ್ರಿ ಸರಾಗ
ಮುಂಬೈ, ಅ 14: ಸುಧೀಂದ್ರ ಕುಲಕರ್ಣಿ ಮಸಿ ವೃತ್ತಾಂತದ ನಂತರ ಬಿಜೆಪಿ ಮತ್ತು ಶಿವಸೇನೆ ನಡುವಿನ ಮನಸ್ತಾಪ ತೀವ್ರವಾಗಿದ್ದು ಇಬ್ಬರ ಮೈತ್ರಿ ಸದ್ಯದಲ್ಲೇ ಅಂತ್ಯ ಕಾಣಲಿದೆ ಎನ್ನುವ ಸುದ್ದಿಯನ್ನು ಬಿಜೆಪಿ ತಳ್ಳಿಹಾಕಿದೆ.
ಬಿಜೆಪಿಗೆ ಮುಜುಗರ ತರುವ ಕೆಲಸವನ್ನು ಶಿವಸೇನೆ ಮಾಡುತ್ತಿದೆ, ಆದರೆ ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಶಿವಸೇನೆ ನಮ್ಮ ಜೊತೆ ಮೈತ್ರಿ ಮುರಿದುಕೊಳ್ಳುವುದಿಲ್ಲ ಹಿರಿಯ ಬಿಜೆಪಿ ಮುಖಂಡರೊಬ್ಬರು 'ಒನ್ ಇಂಡಿಯಾ'ಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಮಹಮೂದ್ ಕಸೂರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಕ್ಕಾಗಿ ಮಹಾ ಸಿಎಂ ವಿರುದ್ದ ಶಿವಸೇನೆ ಕೆಂಡಕಾರುತ್ತಿದೆ. (ಶಿವಸೇನೆಯಿಂದ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ)
ಇನ್ನೇನು ನಡೆಯಲಿರುವ ಕಲ್ಯಾಣ್ ಮತ್ತು ಡೊಂಬಿವಿಲಿ ಪಾಲಿಕೆ ಚುನಾವಣೆಯಲ್ಲಿ (ನವೆಂಬರ್ ಒಂದರಂದು ನಡೆಯಲಿರುವ ಚುನಾವಣೆ) ನಾವು ಬಿಜೆಪಿ ಜೊತೆ ಮೈತ್ರಿಮಾಡಿಕೊಳ್ಳುವುದಿಲ್ಲ. ನಾವು ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ ಎಂದು ಶಿವಸೇನೆ ನೀಡಿದ ಹೇಳಿಕೆಯ ಬೆನ್ನಲ್ಲೇ 'ಮೈತ್ರಿ ಮುಂದುವರಿಯಲಿದೆ' ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಕಳೆದ ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆಯೂ ಈ ಎರಡು ಪಕ್ಷಗಳ ನಡುವೆ ಒಡಕು ಮೂಡಿತ್ತು. ಆದರೆ ಅಮಿತ್ ಶಾ ಮತ್ತು ನರೇಂದ್ರ ಮೋದಿ ಮಧ್ಯಸ್ಥಿತಿಕೆಯಿಂದ ಸರಿದಾರಿಗೆ ಬಂದಿತ್ತು.
ಮಸಿ ಪ್ರಕರಣದ ನಂತರ ಮತ್ತಷ್ಟು ಅಂತರ
ತನ್ನದೇ ಮೈತ್ರಿ ಸರಕಾರವನ್ನು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಟೀಕಿಸುತ್ತಲೇ ಬರುತ್ತಿದ್ದ ಶಿವಸೇನೆ, ಬಿಜೆಪಿಯನ್ನು ಹಲವು ಬಾರಿ ಮುಜುಗರಕ್ಕೀಡು ಮಾಡಿತ್ತು. ಆಡ್ವಾಣಿ ಆಪ್ತ ಸುಧೀಂದ್ರ ಕುಲಕರ್ಣಿಗೆ ಮಸಿಬಳೆದ ಪ್ರಕರಣದ ನಂತರ ಇಬ್ಬರ ನಡುವಣ ಸಂಬಂಧದಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದೆ
ಬಾಳಾ ಸಾಹೇಬ್ ಠಾಕ್ರೆ
ಕಟ್ಟಾ ಹಿಂದುತ್ವವಾದಿ ಬಾಳಾ ಸಾಹೇಬ್ ಠಾಕ್ರೆ ಜೀವಾತಾವಧಿಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಮನಸ್ತಾಪವಿದ್ದರೂ, ಅಟಲ್, ಅಡ್ವಾಣಿ ಮತ್ತು ಠಾಕ್ರೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದರು. ಪ್ರಮೋದ್ ಮಹಾಜನ್ ಮತ್ತು ಗೋಪಿನಾಥ್ ಮುಂಡೆ ಅವರ ಅವಧಿಯಲ್ಲಿ ಎಲ್ಲವೂ ಸರಿಯಾಗಿತ್ತು.
ಉದ್ಭವ್ ಠಾಕ್ರೆ ಶಿವಸೇನೆಯ ಮುಖ್ಯಸ್ಥ
ಉದ್ಭವ್ ಠಾಕ್ರೆ ಶಿವಸೇನೆಯ ಮುಖ್ಯಸ್ಥರಾದ ನಂತರ ಬಿಜೆಪಿ ಮತ್ತು ಶಿವಸೇನೆ ಕಾರ್ಯಕರ್ತರ ನಡುವಿನ ಬೀದಿ ಜಗಳ, ಮುಖಂಡರಲ್ಲಿನ ಮನಸ್ತಾಪ, ಹೊಂದಾಣಿಕೆಯಲ್ಲಿನ ಕೊರತೆಯಿಂದಾಗಿ ಇವರಿಬ್ಬರ ದೋಸ್ತಿ ಹಲವು ಬಾರಿ ಅಂತ್ಯ ಕಾಣುವ ಹಂತಕ್ಕೆ ಬಂದಿತ್ತು.
ಕಸೂರಿ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಕಸೂರಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಶಿವಸೇನೆ, ಬಿಜೆಪಿಯಲ್ಲಿ ಕೇಳಿಕೊಂಡಿತ್ತು. ಆದರೆ, ಆ ಕಾರ್ಯಕ್ರಮಕ್ಕೆ ಅನುಮತಿ ನೀಡುವುದರ ಜೊತೆಗೆ ಅಭೂತಪೂರ್ವ ಭದ್ರತೆಯನ್ನು ಮಹಾರಾಷ್ಟ್ರ ಒದಗಿಸಿತ್ತು. ಇದು ಶಿವಸೇನೆ ಸಿಟ್ಟಾಗಲು ಪ್ರಮುಖ ಕಾರಣ.
ಮಹಾ ಸಿಎಂ ಹೇಳಿಕೆ
ಕಸೂರಿ ಬಿಡುಗಡೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಸುಧೀಂದ್ರ ಕುಲಕರ್ಣಿಯವರಿಗೆ ಮಸಿಬಳೆದ ಘಟನೆ ದುರದೃಷ್ಟಕರ. ಇದರಿಂದ ಮಹಾರಾಷ್ಟ್ರದ ಹೆಸರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಳಂಕ ತಂದಿದೆ ಎಂದು ಮಹಾ ಸಿಎಂ ಫಡ್ನವೀಸ್ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದರು.
ಶಿವಸೇನೆ ಪ್ರತಿಕ್ರಿಯೆ
ಮಹಾ ಸಿಎಂ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ, ಮಹಾರಾಷ್ಟ್ರ ಜನರ ಭಾವನೆಯನ್ನು ಮೊದಲು ಫಡ್ನವೀಸ್ ಅರ್ಥ ಮಾಡಿಕೊಳ್ಳುಲಿ. ನಮ್ಮ ಯೋಧರಿಗೆ ಅವರು (ಪಾಕಿಸ್ತಾನ) ಅವಮಾನ ಮಾಡಿದ್ದಾರೆ. ಮಸಿಬಳೆದ ನಮ್ಮ ಪಕ್ಷದ ಕಾರ್ಯಕರ್ತನಿಗೆ ನಾವು ಸನ್ಮಾನ ಮಾಡಲಿದ್ದೇವೆಂದು ಶಿವಸೇನೆ, ಮಹಾ ಸಿಎಂಗೆ ತಿರುಗೇಟು ನೀಡಿತ್ತು.