'ಚಪ್ಪಲಿ' ಸಂಸದನ ಕೇಸ್ ಇತ್ಯರ್ಥಗೊಳಿಸಿ: ಸ್ಪೀಕರ್ ಗೆ ಶಿವಸೇನೆ ಆಗ್ರಹ
ನವದೆಹಲಿ, ಮಾರ್ಚ್ 31: ತನ್ನ ಪಕ್ಷದ ಸಂಸದ ರವೀಂದ್ರ ಗಾಯಕ್ವಾಡ್ ಮೇಲೆ ವಿಮಾನ ಯಾನ ಸಂಸ್ಥೆಗಳು ಹೇರಿರುವ ನಿರ್ಬಂಧವನ್ನು ತೆಗೆದು ಹಾಕಿಸುವಲ್ಲಿ ಸಹಾಯ ಮಾಡಬೇಕೆಂದು ಶಿವಸೇನೆ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಕೋರಿದೆ.
ವಾರದ ಹಿಂದೆ ಏರ್ ಇಂಡಿಯಾ ಸಿಬ್ಬಂದಿಯೊಬ್ಬರ ಮೇಲೆ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ರವೀಂದ್ರ ಗಾಯಕ್ವಾಡ್ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ರವೀಂದ್ರ ಅವರು ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಸಂಸದ.
ಮಾ. 22ರಂದು ಪುಣೆಯಿಂದ ನವದೆಹಲಿಗೆ ಆಗಮಿಸಿದ್ದ ರವೀಂದ್ರ ಗಾಯಕ್ವಾಡ್ ಅವರು, ಏರ್ ಇಂಡಿಯಾ ಸಂಸ್ಥೆಯು ತಮಗೆ ವಿಐಪಿ ಸೌಲಭ್ಯಗಳನ್ನು ನೀಡಿಲ್ಲ ಎಂದು ಆರೋಪಿಸಿ, ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದರು. ವಿಮಾನದಿಂದ ಇಳಿಯದೇ ಅವರು ಪ್ರತಿಭಟನೆಗೆ ಮುಂದಾದಾಗ ಅವರನ್ನು ಸಮಾಧಾನಪಡಿಸಲು ಏರ್ ಇಂಡಿಯಾದ ಸುಕುಮಾರ್ ಎಂಬ ವ್ಯವಸ್ಥಾಪಕರು ಆಗಮಿಸಿದ್ದರು.
ಆ ಸಂದರ್ಭದಲ್ಲಿ ಸುಕುಮಾರ್ ಅವರೊಂದಿಗೆ ಮಾತಿನ ಚಕಮತಿ ನಡೆದು, ರವೀಂದ್ರ ಅವರು ಚಪ್ಪಲಿಯಿಂದ ಸುಕುಮಾರ್ ಅವರಿಗೆ ಹೊಡೆದಿದ್ದರಲ್ಲದೆ, ಅದೇ ಬಿರುಸಿನಿಂದ ವಿಮಾನದಿಂದ ಕೆಳಗಿಳಿದು ಬಂದು ಮಾಧ್ಯಮಗಳ ಮುಂದೆ ನಿಂತು ''ನಾನು ಚಪ್ಪಲಿಯಿಂದ ಏರ್ ಇಂಡಿಯಾ ಸಿಬ್ಬಂದಿಯನ್ನು 25 ಬಾರಿ ಹೊಡೆದಿದ್ದೇನೆ'' ಎಂದು ಹೇಳಿ ಬೀಗಿದ್ದರು.[ಕಪಿಲ್ ಶರ್ಮಾ ರಂಪ ಮಾಡಿದ್ರೂ ಪ್ಲೇನ್ ನೊಳಕ್ಕೆ ಬಿಟ್ಟಿದ್ರು: ಶಿವಸೇನೆ ಪ್ರಶ್ನೆ]
ಇದು ಭಾರೀ ದೊಡ್ಡ ವಿವಾದವನ್ನು ಸೃಷ್ಟಿಸಿತ್ತಲ್ಲದೆ, ದೊಡ್ಡ ಮಟ್ಟದ ಪ್ರಚಾರ ಪಡೆಯಿತು. ರವೀಂದ್ರ ಅವರ ಈ ನಡೆಯನ್ನು ಇತರ ರಾಜಕೀಯ ನೇತಾರರು, ಪಕ್ಷಗಳು ಖಂಡಿಸಿದರೂ, ಶಿವಸೇನೆ ಮಾತ್ರ ಅವರ ಬೆನ್ನಿಗೇ ನಿಂತಿದೆ.
ಪ್ರಕರಣ ಇತ್ಯರ್ಥಕ್ಕೆ ಅವಸರವೇಕೆ?
ಹಾಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಸಂದರ್ಭದಲ್ಲೇ ರವೀಂದ್ರ ವಿಚಾರ ಲೋಕಸಭೆಯಲ್ಲಿ ಚರ್ಚೆಯಾಗುವಂತೆ ಮಾಡಿ, ಲೋಕಸಭೆಯ ಶಿಫಾರಸಿನ ಆಧಾರದಲ್ಲಿ ರವೀಂದ್ರ ಅವರ ಮೇಲಿನ ನಿಷೇಧ ತೆರವುಗೊಳಿಸುವ ಆಲೋಚನೆ ಶಿವಸೇನೆಯದ್ದು.['ಚಪ್ಪಲಿ' ಸಂಸದ ರವೀಂದ್ರ ಗಾಯಕ್ವಾಡ್ ಗೆ ಮತ್ತೆ ಮುಖಭಂಗ]
ಹೈರಾಣಾದಿರುವ ಸಂಸದ
ಈ ಹಿನ್ನೆಲೆಯಲ್ಲಿ ಭಾರತೀಯ ವಿಮಾನ ಸೇವಾ ಸಂಸ್ಥೆಗಳ ಒಕ್ಕೂಟವು ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರನ್ನು ನಿಷೇಧಿಸಿದೆ. ಇದರಿಂದಾಗಿ, ರವೀಂದ್ರ ಅವರು ಪುಣೆಯಿಂದ ವಿಮಾನ ನಿಲ್ದಾಣ ಬಳಸುತ್ತಿದ್ದರು. ಆದರೀಗ,ವಿಮಾನ ಯಾನ ಸಂಸ್ಥೆಗಳು ಅವರ ಮೇಲೆ ನಿಷೇಧ ಹೇರಿರುವುದು ಅವರಿಗೆ ಸಂಕಷ್ಟವನ್ನು ತಂದೊಡ್ಡಿದೆ. ನಿಷೇಧದ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ರೈಲಿನಲ್ಲೇ ಪುಣೆಯಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಅವರು ಇತ್ತೀಚೆಗೆ ಕಾರಿನ ಮೊರೆ ಹೋಗಿದ್ದಾರೆ. ಆದರೆ, ಬಲು ದೂರ ಆ ಪ್ರಯಾಣ ಅವರಿಗೆ ಸಾಕಪ್ಪಾ ಸಾಕು ಎನ್ನಿಸಿದೆ.
ಸ್ಪಷ್ಟನೆ ನೀಡಿದ್ದರು ಸ್ಪೀಕರ್
ಅವರ ಈ ಕಷ್ಟವನ್ನು ಕಂಡು ಮರುಗಿರುವ ಅವರ ಪಕ್ಷ ಶಿವಸೇನೆಯು ಈಗ ಸ್ಪೀಕರ್ ಮೊರೆ ಹೋಗಿದೆ. ಆದರೆ, ಈ ಹಿಂದೆ ಇದೇ ವಿಚಾರವನ್ನು ಶಿವಸೇನೆಯು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾಗ, ಸುಮಿತ್ರಾ ಮಹಾಜನ್ ಅವರು, ಮಾತುಕತೆಯ ಮೂಲಕ ಲೋಕಸಭೆಯ ಹೊರಗೆ ಈ ವಿಚಾರವನ್ನು ಬಗೆಹರಿಸಿಕೊಳ್ಳಬೇಕೆಂದು ಸಲಹೆ ಮಾಡಿದ್ದರು.
ಏರ್ ಇಂಡಿಯಾ ಮರೆತಿಲ್ಲ ಆ ರಾದ್ಧಾಂತವನ್ನು
ಏತನ್ಮಧ್ಯೆ, ಘಟನೆ ಕಳೆದು ವಾರವಾದ ನಂತರ ರವೀಂದ್ರ ಅವರು, ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಇದನ್ನು ತನ್ನ ಡೇಟಾ ಬೇಸ್ ನಲ್ಲಿ ಪತ್ತೆ ಹಚ್ಚಿದ ಏರ್ ಇಂಡಿಯಾ ಸಂಸ್ಥೆಯು ಈ ವಿಮಾನ ಯಾನ ಟಿಕೆಟ್ ಅನ್ನು ರದ್ದುಗೊಳಿಸಿತು. ಆ ಮೂಲಕ, ರವೀಂದ್ರ ಮೇಲಿನ ತನ್ನ ಸಿಟ್ಟನ್ನು ಮತ್ತೆ ವ್ಯಕ್ತಪಡಿಸಿತು ಏರ್ ಇಂಡಿಯಾ.
ಈಗ ಸ್ಪೀಕರ್ ಏನು ಹೇಳ್ತಾರೋ ಗೊತ್ತಿಲ್ಲ!
ಇಷ್ಟೆಲ್ಲಾ ಆದರೂ, ರವೀಂದ್ರ ಆಗಲೀ, ಶಿವಸೇನೆ ಪಕ್ಷವಾಗಲೀ ಕ್ಷಮೆ ಕೋರಿಲ್ಲ. ಬದಲಿಗೆ, ತಮ್ಮ ಮೂಗಿನ ನೇರಕ್ಕೇ ಈ ಪ್ರಕರಣವನ್ನು ಸಮರ್ಥಿಸಿಕೊಳ್ಳುತ್ತಿರುವುದರಿಂದಲೇ ಈ ಪ್ರಕರಣ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ ಎಂದು ಮಾಧ್ಯಮಗಳು ದೂರಿವೆ. ಶಿವಸೇನೆಯು ಈಗ ಮತ್ತೆ ಸುಮಿತ್ರಾ ಅವರಿಗೇ ಅಹವಾಲು ಸಲ್ಲಿಸಿರುವುದರಿಂದ ಈ ಬಾರಿ ಅವರು ಏನು ಹೇಳುತ್ತಾರೋ ಕಾದು ನೋಡಬೇಕಿದೆ.