ದೇಶದಾದ್ಯಂತ ಬುರ್ಖಾ ನಿಷೇಧಕ್ಕೆ ಶಿವಸೇನಾ ಆಗ್ರಹ: ಬಿಜೆಪಿಯಲ್ಲೇ ವಿರೋಧ
ನವದೆಹಲಿ, ಮೇ 1: ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾವನ್ನು ಕಡ್ಡಾಯವಾಗಿ ನಿಷೇಧ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿವಸೇನಾ ಆಗ್ರಹಿಸಿದೆ.
ಶ್ರೀಲಂಕಾದಲ್ಲಿ ಉಗ್ರರ ದಾಳಿಯ ಬಳಿಕ ಬುರ್ಖಾ ಧರಿಸಿ ಓಡಾಡುವುದನ್ನು ನಿಷೇಧಿಸಿದ ಬೆನ್ನಲ್ಲೇ ಶಿವಸೇನಾ ಈ ಒತ್ತಾಯ ಮಾಡಿದೆ.
ಭಾರತವೂ ಶ್ರೀಲಂಕಾದ ಮಾದರಿಯನ್ನೇ ಅನುಸರಿಸಿ ಬುರ್ಖಾ ನಿಷೇಧ ಮಾಡಬೇಕು ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ' ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಿದೆ.
ಭಾರತದಲ್ಲಿ ತ್ರಿವಳಿ ತಲಾಖ್ ಮಾತ್ರವಲ್ಲ, ಬುರ್ಖಾವನ್ನೂ ಕೂಡ ಈಗ ನಿಷೇಧ ಮಾಡಬೇಕಿದೆ. ರಾವಣದ ರಾಜ್ಯವಾದ ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ ಆಗಿರಬೇಕಾದರೆ, ರಾಮನ ದೇಶವಾಗಿರುವ ಭಾರತದಲ್ಲಿ ಏಕೆ ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ? ಎಂದು ಶಿವಸೇನಾ ಪ್ರಶ್ನಿಸಿದೆ.
ಮಂಗಳವಾರ ಬಲಪಂಥೀಯ ಸಂಘಟನೆ ಹಿಂದೂ ಸೇನಾ ಗೃಹಸಚಿವಾಲಯಕ್ಕೆ ಪತ್ರ ಬರೆದಿತ್ತು. ದೇಶದಲ್ಲಿ ಮುಖ ಮುಚ್ಚುವ ದಿರಿಸುಗಳನ್ನು, ಬುರ್ಖಾ ಮತ್ತು ನಿಕಾಬ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿತ್ತು.
ಆತ್ಮಾಹುತಿ ಬಾಂಬ್ ದಾಳಿ: ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾ ನಿಷೇಧ
ಶ್ರೀಲಂಕಾದಲ್ಲಿ ನಡೆದಂತೆಯೇ ದಾಳಿಗಳನ್ನು ಎಸಗುವುದನ್ನು ತಡೆಯಲು ಭಾರತದಲ್ಲಿ ಮತ್ತು ಭಾರತದ ಭೂ ಪ್ರದೇಶಗಳಲ್ಲಿ, ಜಗತ್ತಿನಾದ್ಯಂತ ಇರುವ ದೇಶದ ರಾಯಭಾರ ಕಚೇರಿಗಳು ಮತ್ತು ಹೈ ಕಮಿಷನ್ಗಳಲ್ಲಿ ಯುದ್ಧತಂತ್ರ ಮತ್ತು ಮುನ್ನೆಚ್ಚರಿಕೆಯ ನೀತಿಗಳನ್ನು ಕೂಡಲೇ ರೂಪಿಸುವಂತೆ ಕೋರುತ್ತೇವೆ ಎಂದು ಅದು ಪತ್ರದಲ್ಲಿ ಹೇಳಿದೆ.
ಎಲ್ಲ ಕಡೆ ನಿಷೇಧ ಹೇರಿ
'ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಒಳಗೆ ಬುರ್ಖಾ, ನಿಕಾಬ್ನಂತಹ ಸಂಪೂರ್ಣ ಮುಖ ಮುಚ್ಚುವ ವಸ್ತ್ರಗಳನ್ನು ಧರಿಸುವುದನ್ನು ನಿಷೇಧಿಸಬೇಕು. ಈ ರೀತಿಯ ತಲೆಯನ್ನು ಸಂಪೂರ್ಣವಾಗಿ ಮುಚ್ಚುವ ಉಡುಪುಗಳು ಉಗ್ರರು ತಮ್ಮ ಗುರುತನ್ನು ಸಿಸಿಟಿವಿ ಕ್ಯಾಮೆರಾಗಳಿಂದ ಮುಚ್ಚಿಡಲು ನೆರವಾಗುತ್ತವೆ. ಶ್ರೀಲಂಕಾ ಈಗಾಗಲೇ ಈ ನೀತಿಯನ್ನು ಜಾರಿ ಮಾಡಿದೆ' ಎಂದು ಪತ್ರದಲ್ಲಿ ಹೇಳಿದೆ.
ನಿಷೇಧ ಬೇಡ ಎಂದ ಬಿಜೆಪಿ ಸಂಸದ
ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರು ಬುರ್ಖಾ ನಿಷೇಧಿಸಬೇಕೆಂಬ ಶಿವಸೇನಾದ ಆಗ್ರಹವನ್ನು ವಿರೋಧಿಸಿದ್ದಾರೆ. ಭಾರತದಲ್ಲಿ ಬುರ್ಖಾ ನಿಷೇಧ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಎನ್ಡಿಎ ಮಿತ್ರಕೂಟದಲ್ಲಿರುವ ಸಚಿವ ರಾಮದಾಸ್ ಅಠವಲೆ ಕೂಡ ಈ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಬುರ್ಖಾ ಧರಿಸುವ ಎಲ್ಲಾ ಮಹಿಳೆಯರೂ ಉಗ್ರರಲ್ಲ. ಅವರು ಉಗ್ರರಾಗಿದ್ದರೆ ಅವರ ಬುರ್ಖಾವನ್ನು ತೆಗೆದುಹಾಕಬೇಕು. ಇದೊಂದು ಸಂಪ್ರದಾಯ. ಅದನ್ನು ಧರಿಸುವುದು ಅವರ ಹಕ್ಕು. ಭಾರತದಲ್ಲಿ ಬುರ್ಖಾ ಮೇಲೆ ನಿಷೇಧ ಹೇರುವುದು ಸರಿಯಲ್ಲ' ಎಂದು ಅವರು ಹೇಳಿದ್ದಾರೆ.
ಮಹಿಳೆಯರಿಗೆ ಬಿಟ್ಟ ವಿಚಾರ
ಬುರ್ಖಾ ನಿಷೇಧಿಸುವ ಒತ್ತಾಯಕ್ಕೆ ಬಿಜೆಪಿ ಬೆಂಬಲಿತ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಸೀಮ್ ರಿಜ್ವಿ ವಿರೋಧಿಸಿದ್ದಾರೆ. 'ಇದು ಬೇಜವಾಬ್ದಾರಿಯುತ ಮತ್ತು ಅಸಂವಿಧಾನಿಕ ಬೇಡಿಕೆ. ಬುರ್ಖಾ ಧರಿಸಬೇಕೇ ಅಥವಾ ಬೇಡವೇ ಎನ್ನುವುದು ಮುಸ್ಲಿಂ ಮಹಿಳೆಯರಿಗೆ ಬಿಟ್ಟಿದ್ದು' ಎಂದು ರಿಜ್ವಿ ಹೇಳಿದ್ದಾರೆ.
ಮಹಿಳೆಯರೇ ಬುರ್ಖಾ ತ್ಯಜಿಸಲಿ
ದೇಶದಲ್ಲಿ ಬುರ್ಖಾ ನಿಷೇಧ ಜಾರಿಯಾಗಬೇಕೆಂಬ ಶಿವಸೇನಾ ಒತ್ತಾಯವನ್ನು ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಬೆಂಬಲಿಸಿದ್ದಾರೆ. ಮುಸ್ಲಿಂ ಮಹಿಳೆಯರು ಸ್ವ ಇಚ್ಚೆಯಿಂದ ಬುರ್ಖಾ ತ್ಯಜಿಸಬೇಕು. ಆ ನಿರ್ಧಾರ ಅವರಿಗೇ ಬಿಟ್ಟಿದ್ದು ಎಂದೂ ಅವರು ಹೇಳಿದ್ದಾರೆ.