ಎನ್ಡಿಎ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿ ದಳ ಹೊರಕ್ಕೆ
ನವದೆಹಲಿ, ಸೆ. 27: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕೃಷಿ ಮಸೂದೆಗಳಿಗೆ ವಿರೋಧ ಶಿರೋಮಣಿ ಅಕಾಲಿ ದಳ ಭಾರಿ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ, ಎನ್ಡಿಎ ಮೈತ್ರಿಕೂಟದಿಂದ ಶಿರೋಮಣಿ ಅಕಾಲಿ ದಳ ಹೊರ ಬಂದಿದೆ.
''ಮೂರು ಕೃಷಿ ಮಸೂದೆಗಳು ರೈತ ವಿರೋಧಿಯಾಗಿದ್ದು, ಈ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಮನವಿ ಮಾಡಿದ್ದೇವೆ. ಎನ್ಡಿಎ ಮೈತ್ರಿಕೂಟ ತೊರೆಯಲು ನಮ್ಮ ಪಕ್ಷದ ಕೋರ್ ಕಮಿಟಿಯ ಎಲ್ಲ ನಾಯಕರೂ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ'' ಎಂದು ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ನಾವು ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಅಷ್ಟೇ ಮೈತ್ರಿ ಕಳಚಿಕೊಂಡಿದ್ದೇವೆ..ಆದರೆ ಉಳಿದ ವಿಚಾರಗಳಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಬೆಂಬಲ ಇದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಮಸೂದೆಗಳನ್ನು ವಿರೋಧಿಸಿ ಸುಖ್ಬೀರ್ ಅವರ ಪತ್ನಿ ಹರ್ಸಿಮ್ರತ್ ಕೌರ್ ಅವರು ಅಹಾರ ಸಂಸ್ಕರಣಾ ಖಾತೆ ಸಚಿವ ಸ್ಥಾನಕ್ಕೆ ಸೆಪ್ಟೆಂಬರ್ 17ರಂದು ರಾಜೀನಾಮೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಿವಸೇನಾ ಹಾಗೂ ತೆಲುಗು ದೇಶಂ ಪಾರ್ಟಿ ನಂತರ ಎನ್ಡಿಎ ಮೈತ್ರಿಕೂಟದಿಂದ ಅಕಾಲಿ ದಳ ಹೊರ ಬೀಳುತ್ತಿದೆ. ಪಂಜಾಬ್ ರಾಜ್ಯದ ಶಾಂತಿ ಮತ್ತು ಸೌಹಾರ್ದತೆಗಾಗಿ ಸರ್ಕಾರ ಕೈಗೊಳ್ಳುವ ಯಾವುದೇ ನಡೆಯನ್ನು ಅಕಾಲಿದಳ ಬೆಂಬಲಿಸಲಿದೆ ಎಂದು ಸುಖ್ಬೀರ್ ಸಿಂಗ್ ಹೇಳಿದ್ದಾರೆ.
Recommended Video
ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ-2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದನ್ನು ವಿರೋಧಿಸಿ 22 ವರ್ಷಗಳ ಮೈತ್ರಿಗಳನ್ನು ಕಳೆದುಕೊಳ್ಳಲು ಅಕಾಲಿ ದಳ ಮುಂದಾಗಿದೆ.