ಶಿರಡಿ ಸಾಯಿಬಾಬಾ ಸಮಾಧಿಸ್ಥರಾಗಿ ನೂರು ವರ್ಷ
ಬೆಂಗಳೂರು, ಜೂನ್ 07 : ಸಂತ, ಫಕೀರ, ಸದ್ಗುರು, ಕಲಿಯುಗದ ಪವಾಡಪುರುಷ, ದೇವರ ಅವತಾರವೆಂದೇ ಖ್ಯಾತಿ ಪಡೆದಿರುವ, ಹಿಂದೂ ಮುಸ್ಲಿಂ ಮತ್ತಾವುದೇ ಜಾತಿಯನ್ನು ಮೀರಿ ಭಕ್ತಗಣವನ್ನು ಪಡೆದಿರುವ ಶಿರಡಿ ಸಾಯಿಬಾಬಾ ಅವರು ಸಮಾಧಿಸ್ಥರಾಗಿ (1918) ಒಂದು ನೂರು ವರುಷ ತುಂಬುತ್ತಿದೆ.
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿಯಲ್ಲಿ ಅವರ ಸಮಾಧಿಯಿದ್ದು, ಅವರನ್ನು ದೇವರ ಅವತಾರವೆಂದೇ ಜನ ಪೂಜಿಸುತ್ತಾರೆ, ಭಜಿಸುತ್ತಾರೆ. ದೇಶದ ಮೂರನೇ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಈಗ ಪುಣ್ಯಸ್ಮರಣೆಯ ಶತಮಾನೋತ್ಸವದ ಸಿದ್ಧತೆಗಳು ನಡೆದಿವೆ.
ಕರ್ನಾಟಕದಾದ್ಯಂತ ಶಿರಡಿ ಸಾಯಿಬಾಬಾ ಅವರ ಭಕ್ತರಿದ್ದಾರೆ. ಬೆಂಗಳೂರಿನಲ್ಲಿಯೂ ಪ್ರತಿ ಗುರುವಾರ ಶಿರಡಿ ಸಾಯಿಬಾಬಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ನರಸಿಂಹರಾಜ ಕಾಲೋನಿಯಲ್ಲಿ ಪ್ರತಿ ಗುರುವಾರ ಅವರ ಭಕ್ತಾದಿಗಳ ಸೇರಿ, ಸಂಜೆ ರಸ್ತೆರಸ್ತೆಗಳಲ್ಲಿ ರಂಗೋಲಿ ಹಾಕಿ ಮೆರವಣಿಗೆಯನ್ನೂ ಮಾಡಿ ಪುನೀತರಾಗುತ್ತಾರೆ. [ಸಾಯಿಬಾಬಾ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ಬೇಹುಗಾರಿಕಾ ಸಂಸ್ಥೆ]
ಅತ್ಯಂತ ಸರಳಾತಿಸರಳ ವ್ಯಕ್ತಿಯಾಗಿದ್ದ ಸಾಯಿಬಾಬಾ ಅವರ ಜೀವನಾಧಾರಿತ ಟಿವಿ ಧಾರಾವಾಹಿಯನ್ನು ನಿರ್ಮಿಸಲು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನಿರ್ಧಾರ ತೆಗೆದುಕೊಂಡಿದೆ. ಆಸಕ್ತ ನಿರ್ಮಾಪಕರು ಸಂಪರ್ಕಿಸಬೇಕೆಂದು ಸಂಸ್ಥಾನದ ಚೇರ್ಮನ್ ಆಗಿರುವ ಡಾ. ಸುರೇಶ್ ಹವಾರೆ ಅವರು ಕರೆ ನೀಡಿದ್ದಾರೆ.
2017ರ ಅಕ್ಟೋಬರ್ 1ರಿಂದ 18ನೇ ತಾರೀಖಿನವರೆಗೆ ಶಿರಡಿ ಸಾಯಿಬಾಬಾ ಸಮಾಧಿ ಶತಮಾನೋತ್ಸವವನ್ನು ಆಚರಿಸಲಾಗುವುದು ಎಂದು ಸುರೇಶ್ ಹವಾರೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಕ್ತಾದಿಗಳು ಸಾಯಿಬಾಬಾ ಅವರ ಜೀವನವನ್ನು ಅರಿತುಕೊಳ್ಳಬೇಕು, ಅವರ ಜೀವನಕಥೆ ವಿಶ್ವದಾದ್ಯಂತ ಪಸರಿಸಬೇಕು ಎಂಬ ಉದ್ದೇಶ ಅವರದು. [ದೇವೇಗೌಡರ ಜೀವನದಲ್ಲಿ ನಡೆದ ಅತಿದೊಡ್ಡ ಪವಾಡ!]
ಈ ಧಾರಾವಾಹಿ ಹಲವಾರು ಭಾಷೆಗಳಲ್ಲಿ ತಯಾರಾಗಲಿದೆ ಎಂದು ಸುರೇಶ್ ಹವಾರೆ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಹಿಂದೆ ಸಾಯಿಬಾಬಾ ಕುರಿತಾಗಿ ಧಾರಾವಾಹಿ ನಿರ್ಮಿಸಿರುವವರು ಅಥವಾ ಹೊಸದಾಗಿ ನಿರ್ಮಿಸಲು ಉತ್ಸುಕರಾಗಿರುವವರು ಸಂಪರ್ಕಿಸಬೇಕೆಂದು ಕೋರಿದ್ದಾರೆ. ಈ ಧಾರಾವಾಹಿ ಕನ್ನಡದಲ್ಲಿಯೂ ನಿರ್ಮಾಣವಾಗಲೆಂಬುದು ಕನ್ನಡಿಗರ ಆಶಯ. [ಪವಾಡದ ಅನುಭೂತಿ : ಸಾಯಿಬಾಬಾ ಪಾದದ ಬಳಿ ವಿಭೂತಿ!]