ಹಿಂದು ಪಾಕಿಸ್ತಾನ ಹೇಳಿಕೆ: ತರೂರ್ ವಿರುದ್ಧ ಪ್ರಕರಣ ದಾಖಲು
ಕೋಲ್ಕತ್ತಾ, ಜುಲೈ 14: ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ನೀಡಿದ್ದ 'ಹಿಂದು ಪಾಕಿಸ್ತಾನ' ಎಂಬ ವಿವಾದಾತ್ಮಕ ಹೇಳಿಕೆಗೆ ಅವರ ವಿರುದ್ಧ ಕೋಲ್ಕತ್ತಾದಲ್ಲಿ ದಾವೆ ಹೂಡಲಾಗಿದೆ.
ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 153A/295A ಮತ್ತು ಸೆಕ್ಷನ್ 2 ರ (ರಾಷ್ಟ್ರ ಗೌರವಕ್ಕೆ ಧಕ್ಕೆ ತರುವುದರ ವಿರುದ್ಧ ನಿಯಂತ್ರಣ ಹೇರುವ ಕಾಯ್ದೆ) ಅಡಿಯಲ್ಲಿ ಅವರ ವಿರುದ್ಧ ಕೋಲ್ಕತ್ತಾ ಮೂಲದ ಸುಮೀತ್ ಚೌಧರಿ ಎಂಬ ವಕೀಲರು ಪ್ರಕರಣ ದಾಖಲಿಸಿದ್ದಾರೆ.
ಹಿಂದು ಪಾಕಿಸ್ತಾನ, ಮುಸ್ಲಿಂ ಪಾಕಿಸ್ತಾನ: ಟ್ವಿಟ್ಟರ್ ಗಲಾಟೆ ನೋಡಿ!
ಇತ್ತೀಚೆಗಷ್ಟೇ ಕೇರಳದ ತಿರುವನಂತಪುರಂನಲ್ಲಿ ಮಾತನಾಡುತ್ತಿದ್ದ ಶಶಿ ತರೂರ್, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ಹಿಂದು ಪಾಕಿಸ್ತಾನವಾಗಲಿದೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
'ಪಾಕಿಸ್ತಾನದಲ್ಲಿ ಹೇಗೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಲಾಗಿದೆಯೋ, ಬಿಜೆಪಿ ಸರ್ಕಾರ ಮ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದಲ್ಲಿಯೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯಲಾಗುತ್ತದೆ' ಎಂದು ಅವರು ಹೇಳಿದ್ದರು.
ತಾವು ಶಶಿ ತರೂರ್ ವಿರುದ್ಧ ಪ್ರಕರಣ ದಾಖಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಸುಮೀತ್ ಚೌಧರಿ, ಶಶಿ ತರೂರ್ ಅವರು ಭಾರತದಂಥ ಜಾತ್ಯತೀತ ರಾಷ್ಟ್ರವನ್ನು ಪಾಕಿಸ್ತಾನದಂಥ ರಾಷ್ಟ್ರಕ್ಕೆ ಹೋಲಿಸಿದ್ದಾರೆ. ಇದು ಭಾರತಕ್ಕೆ ಮಾಡಿದ ಅವಮಾನ. ಆದ್ದರಿಂದಲೇ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.
ಶಶಿ ತರೂರ್ ಅವರ ಹಿಂದು ಪಾಕಿಸ್ತಾನ ಹೇಳಿಕೆಗೆ ಭಾರತದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. 'ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ಹಿಂದು ಪಾಕಿಸ್ತಾನವಾಗುತ್ತದೆ ಎನ್ನುತ್ತೀರಾ. ಹಾಗಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತ ಮುಸ್ಲಿಂ ಪಾಕಿಸ್ತಾನವಾಗುತ್ತದೆಯೇ?' ಎಂದು ಹಲವರು ಕುಹಕದಿಂದ ಪ್ರಶ್ನಿಸಿದ್ದರು.