1973 ರ ಪ್ರತಿಭಟನೆ ವಿಡಿಯೋ ವೈರಲ್: ಬಿಜೆಪಿಗೆ ಹಳೆಯ ದಿನಗಳ ನೆನಪಿಸಿದ ಶಶಿ ತರೂರ್
ನವದೆಹಲಿ, ಜು.04: ಪ್ರತಿದಿನ ದೇಶದಾದ್ಯಂತ ತೈಲ ಬೆಲೆ ಏರಿಕೆಯಾಗುತ್ತಿದ್ದು ಇದರ ವಿರುದ್ದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ. ಆದರೆ 1973 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂಧನ ಬೆಲೆ ಏರಿಕೆಯ ವಿರುದ್ದ ನಡೆಸಿದ ಪ್ರತಿಭಟನೆಯ ವಿಡಿಯೋ ಈಗ ಕಾಂಗ್ರೆಸ್ ಹಂಚಿಕೊಂಡಿದೆ. ಈ ಮೂಲಕ ಆಡಳಿತ ಪಕ್ಷ ಬಿಜೆಪಿಗೆ ತಿರುಗೇಟು ನೀಡಿದೆ.
ಟ್ವಿಟ್ಟರ್ನಲ್ಲಿ ಇಂಗ್ಲೀಷ್ನ ಹೊಸ ಪದ ಬಳಕೆಯ ಮೂಲಕ ಸುದ್ದಿಯಾಗುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಶಿ ತರೂರ್ ವಿಡಿಯೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಪೆಟ್ರೋಲ್, ಡೀಸೆಲ್: ಎರಡು ತಿಂಗಳಲ್ಲಿ 35 ಬಾರಿ ಬೆಲೆ ಏರಿಕೆ
1973 ರಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಇಂಧನ ಬೆಲೆ ಏರಿಕೆಯ ವಿರುದ್ದ ಪ್ರತಿಭಟನೆ ನಡೆಸಿದ್ದರು.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ ಏಳು ಪೈಸೆ ಏರಿಕೆ ಮಾಡಿತ್ತು. ಈ ಹಿನ್ನೆಲೆ ಅಟಲ್ ಬಿಹಾರಿ ವಾಜಪೇಯಿ ಎತ್ತಿನಗಾಡಿಯಲ್ಲಿ ಸಂಸತ್ತಿಗೆ ಆಗಮಿಸುವ ಮೂಲಕ ಪ್ರತಿಭಟನೆ ನಡೆಸಿದ್ದರು.
ಈ ವಿಡಿಯೋ ಶೇರ್ ಮಾಡಿರುವ ಶಶಿ ತರೂರ್, ''ಪೆಟ್ರೋಲ್ ಬೆಲೆ ಏಳು ಪೈಸೆ ಏರಿಕೆಯಾದಾಗ 1973 ರ ಪ್ರತಿಭಟನೆಯ ಅಪರೂಪದ ದೃಶ್ಯವಿದು. ಅಟಲ್ ಬಿಹಾರಿ ವಾಜಪೇಯಿ ಎತ್ತಿನಗಾಡಿಯಲ್ಲಿ ಸಂಸತ್ತಿಗೆ ಆಗಮಿಸಿದ್ದರು,'' ಎಂದು ಹೇಳಿದ್ದಾರೆ.
ಹಾಗೆಯೇ ''ಪ್ರಸ್ತುತ ಭದ್ರತಾ ನಿರ್ಬಂಧಗಳು ಇರುವ ಕಾರಣ ಈಗ ಈ ರೀತಿ ಮಾಡಲು ಸಾಧ್ಯವಿಲ್ಲ,'' ಎಂಬುದನ್ನು ಕೂಡಾ ಶಶಿ ತರೂರ್ ಉಲ್ಲೇಖಿಸಿದ್ದಾರೆ.
'ಪೊಗೊನೋಟ್ರೋಫಿ': ಹೊಸ ಪದ ಕಲಿತು ಮೋದಿ ಕಾಲೆಳೆದ ಶಶಿ ತರೂರ್
ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ನಡುವೆಯೂ ದೇಶದ ಅನೇಕ ಪ್ರಮುಖ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ನೂರು ರುಪಾಯಿಯ ಗಡಿ ದಾಟಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕುತ್ತಿದೆ.
ಇನ್ನು ಟ್ವಿಟ್ಟರ್ನಲ್ಲಿ ಸಕ್ರಿಯರಾಗಿರುವ ಶಶಿ ತರೂರ್ ಅದೆಷ್ಟೋ ಬಾರಿ ಹೊಸ ಇಂಗ್ಲೀಷ್ ಪದವನ್ನು ವಿವರಿಸುತ್ತಾ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಾರೆ.
Rare footage from 1973 of an opposition protest when petrol prices were raised by seven Paise. Atal Bihari Vajpayee arrived in Parliament on a bullock cart (which would not be possible today with the new security restrictions on vehicle entry into the complex!) pic.twitter.com/1hd97kgoMG
— Shashi Tharoor (@ShashiTharoor) July 3, 2021
ಟ್ವಿಟ್ಟರ್ನಲ್ಲಿ ಶಶಿ ತರೂರ್ನ ಅಭಿಮಾನಿಯೋರ್ವರು ತಾನು ಹೊಸ ಪದ ಕಲಿಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಡಾ.ಪ್ರಿಯಾ ಆನಂದ್ ಎಂಬವರು, ''ಸರ್, ನಿಮ್ಮ ಭಾಷಣಗಳನ್ನು ಹೊರತುಪಡಿಸಿ ನಾನು ಕೆಲವು ಹೊಸ ಪದಗಳನ್ನು ಕಲಿಯಲು ಕಾಯುತ್ತಿದ್ದೇನೆ. ಹೊಸ ಪದದ ಮೂಲಕ ಮನಸ್ಸನ್ನು ಕೆರಳಿಸುವುದು ಯಾವಾಗಲೂ ಅದ್ಭುತ,'' ಎಂದು ಟ್ವೀಟ್ ಮೂಲಕ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಶಿ ತರೂರ್, ''ಅರ್ಥಶಾಸ್ತ್ರಜ್ಞನಾದ ನನ್ನ ಸ್ನೇಹಿತ ರಾಥಿನ್ ರಾಯ್ ಇಂದು ನನಗೆ ಹೊಸ ಪದವನ್ನು ಕಲಿಸಿದರು. ಅದುವೇ ಪೊಗೊನೋಟ್ರೋಫಿ. ಇದರರ್ಥ 'ಗಡ್ಡವನ್ನು ಬೆಳೆಸುವುದು'. ಪ್ರಧಾನಮಂತ್ರಿಯವರ ಪೊಗೊನೋಟ್ರೋಫಿ ಸಾಂಕ್ರಾಮಿಕ ಮುನ್ಸೂಚನೆಯಾಗಿದೆ,'' ಎಂದು ವ್ಯಂಗ್ಯವಾಡಿದ್ದರು. ಇದೀಗ ಶಶಿ ತರೂರ್ರ ಈ ಪದವು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಸಂಚಲನವನ್ನು ಸೃಷ್ಟಿಸಿದೆ.
(ಒನ್ಇಂಡಿಯಾ ಸುದ್ದಿ)