ಪೆಗಾಸಸ್ ಬೇಹುಗಾರಿಕೆ: ಸುಪ್ರೀಂ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಶಶಿ ತರೂರ್ ಆಗ್ರಹ
ನವದೆಹಲಿ, ಜುಲೈ 26: ಪೆಗಾಸಸ್ ಬೇಹುಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದ ತನಿಖೆ ನಡೆಸಲು ಕಾಂಗ್ರೆಸ್ ನಾಯಕ ಶಶಿ ತರೂರ್ ಒತ್ತಾಯಿಸಿದ್ದಾರೆ.
ಜು.19 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದಲೂ ವಿಪಕ್ಷಗಳು ಪೆಗಾಸೆಸ್ ಬೇಹುಗಾರಿಕೆ ಬಗ್ಗೆ ಸಂಸತ್ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿವೆ. ಆದರೆ ಸರ್ಕಾರ ಈವರೆಗೂ ಚರ್ಚೆಗೆ ಅನುಮತಿ ನೀಡಿಲ್ಲ. ಪರಿಣಾಮ ಗದ್ದಲ ಉಂಟಾಗಿ ಸಂಸತ್ ಕಲಾಪ ವ್ಯರ್ಥವಾಗುತ್ತಿದೆ.
ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆಗೆ ಏಕೆ ಆದೇಶಿಸಿಲ್ಲ ಪ್ರಧಾನಿ ಮೋದಿ ಸರ್ಕಾರ!?
ಪೆಗಾಸಸ್ ಬೇಹುಗಾರಿಕೆ ತಂತ್ರಾಂಶದ ಮೂಲಕ ಭಾರತದಲ್ಲಿನ 40 ಕ್ಕೂ ಹೆಚ್ಚಿನ ಪತ್ರಕರ್ತರು, ಇಬ್ಬರು ಕೇಂದ್ರ ಸಚಿವರು, ವಿಪಕ್ಷ ನಾಯಕರು, ಸೇರಿ 300 ಕ್ಕೂ ಹೆಚ್ಚಿನ ಮಂದಿಯನ್ನು ಗುರಿಯಾಗಿಸಲಾಗಿದೆ ಎಂಬ ಮಾಹಿತಿ ಕಳೆದ ವಾರ ಬಹಿರಂಗವಾಗಿತ್ತು.
ಶಶಿ ತರೂರ್ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಆಗ್ರಹಿಸಿದ್ದು, ಚರ್ಚೆಗೆ ಅವಕಾಶ ನೀಡುವವರೆಗೂ ಸಂಸತ್ ನ ಸುಗಮನ ಕಲಾಪಕ್ಕೆ ವಿಪಕ್ಷಗಳು ಅವಕಾಶ ನೀಡುವುದಿಲ್ಲ ಎಂಬ ಸಂದೇಶ ರವಾನೆ ಮಾಡಿವೆ. ಸರ್ಕಾರದ ಸ್ವಾರ್ಥ ರಾಜಕೀಯ ಹಿತಾಸಕ್ತಿಗಾಗಿ ಬೇಹುಗಾರಿಕೆ ನಡೆಸಲು ಸಾರ್ವಜನಿಕರ ಹಣವನ್ನು ವ್ಯಯ ಮಾಡಲಾಗಿದೆ ಎಂದು ಶಶಿ ತರೂರ್ ಆರೋಪಿಸಿದ್ದಾರೆ.
ಇನ್ನೊಂದೆಡೆ, ಸರ್ಕಾರ ಈ ಆರೋಪವನ್ನು ನಿರಾಕರಿಸುತ್ತಿದೆ. ಲೋಕಸಭೆಯ ಕಲಾಪ ಮುಂದೂಡಲ್ಪಟ್ಟ ವಿರಾಮದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಶಶಿ ತರೂರ್, ಪೆಗಾಸಸ್ ಸ್ಪೈವೇರ್ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಒಪ್ಪಿಗೆ ನೀಡಬೇಕು, ಆದರೆ ಸರ್ಕಾರ ಒಪ್ಪುತ್ತಿಲ್ಲ. ಆದ್ದರಿಂದ ನಾವು ಯಾಕೆ ಸುಗಮ ಕಲಾಪಕ್ಕೆ ಅವಕಾಶ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.