ಸುನಂದಾ ಸಾವು: ಕೋರ್ಟ್ಗೆ ಇಂದು ಶಶಿ ತರೂರ್ ಹಾಜರು ಸಾಧ್ಯತೆ
ನವದೆಹಲಿ, ಜುಲೈ 7: ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಶನಿವಾರ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.
ವಿಶೇಷ ತನಿಖಾ ದಳ (ಎಸ್ಐಟಿ) ಸಲ್ಲಿಸಿದ್ದ ದೋಷಾರೋಪ ಪಟ್ಟಿಯ ಆಧಾರದಲ್ಲಿ ಶಶಿ ತರೂರ್ ಅವರ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿತ್ತು.
ಸುನಂದಾ ಪುಷ್ಕರ್ ಕೇಸ್: ಶಶಿ ತರೂರ್ ಗೆ ನಿರೀಕ್ಷಣಾ ಜಾಮೀನು
ತರೂರ್ ಅವರು, ದೆಹಲಿಯ ಪಟಿಯಾಲ ಹೌಸ್ ಕೋರ್ಟ್ನಲ್ಲಿ ಒಂದು ಲಕ್ಷ ರೂಪಾಯಿ ಜಾಮೀನು ಬಾಂಡ್ ಅನ್ನು ಪಡೆದುಕೊಂಡರೆ ಮಾತ್ರ ಅವರಿಗೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನು ಜಾರಿಯಾಗಲಿದೆ.
ತರೂರ್ ಅವರಿಗೆ ಎರಡು ಷರತ್ತುಗಳ ಮೇಲೆ ಜಾಮೀನು ನೀಡಲಾಗಿದೆ. ಅವರು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶದಿಂದ ಹೊರಕ್ಕೆ ಪ್ರಯಾಣ ಮಾಡುವಂತಿಲ್ಲ. ಮತ್ತು ಅವರು ತಮ್ಮ ವಿರುದ್ಧದ ಪುರಾವೆಗಳು ಮತ್ತು ಸಾಕ್ಷ್ಯದಾರರನ್ನು ಹಾಳುಮಾಡುವಂತಿಲ್ಲ ಎಂದು ಷರತ್ತು ಹಾಕಲಾಗಿದೆ.
ಅಲ್ಲದೆ, ಒಂದು ಲಕ್ಷ ರೂಪಾಯಿ ಬಾಂಡ್ ಸಲ್ಲಿಕೆ ಮಾಡುವಂತೆಯೂ ಕೋರ್ಟ್ ಸೂಚನೆ ನೀಡಿದೆ ಎಂದು ವಕೀಲ ವಿಕಾಸ್ ಪಹ್ವಾ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನಿರೀಕ್ಷಣಾ ಜಾಮೀನು ನೀಡುವ ತನ್ನ ತೀರ್ಪನ್ನು ಕೋರ್ಟ್ ಗುರುವಾರಕ್ಕೆ ನಿಗದಿಪಡಿಸಿತ್ತು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.