ಶಶಿತರೂರ್ರನ್ನು 'ಕತ್ತೆ' ಎಂದಿದ್ದ ಕಾಂಗ್ರೆಸ್ ನಾಯಕ ಕ್ಷಮೆಯಾಚನೆ
ನವದೆಹಲಿ, ಸೆಪ್ಟೆಂಬರ್ 17: ಕಾಂಗ್ರೆಸ್ ಸಂಸದ ಶಶಿ ತರೂರ್ರನ್ನು ಕತ್ತೆ ಎಂದು ಹೇಳಿದ್ದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ, ಶಶಿ ತರೂರ್ ಬಳಿ ಕ್ಷಮೆ ಯಾಚಿಸಿದ್ದಾರೆ. ಈ ಕ್ಷಮೆಯನ್ನು ಶಶಿ ತರೂರ್ ಕೂಡಾ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ, "ಕತ್ತೆ" ಎಂದು ಹೇಳಿದ್ದ ವರದಿಗಳನ್ನು ಪ್ರಸಾರವಾಗುತ್ತಿದ್ದಂತೆ ಹಲವಾರು ಕಾಂಗ್ರೆಸ್ ಮುಖಂಡರು ರೇವಂತ್ ರೆಡ್ಡಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಶಶಿ ತರೂರ್ ಬಳಿ ರೇವಂತ್ ರೆಡ್ಡಿ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ, "ನಾನು ಶಶಿ ತರೂರ್ ಬಳಿ ಮಾತನಾಡಿದೆ. ನಾನು ನನ್ನ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದೇನೆ. ನಾನು ನನ್ನ ಹಿರಿಯ ಸಹೋದ್ಯೋಗಿಗಳನ್ನು ಅಧಿಕ ಗೌರವದಿಂದ ಕಾಣುತ್ತೇವೆ," ಎಂದು ತಿಳಿಸಿದ್ದಾರೆ.
ತಾಲಿಬಾನಿಗರು ಮಲಯಾಳಂ ಮಾತನಾಡುತ್ತಾರೆಯೇ, ಪ್ರಶ್ನೆ ಹುಟ್ಟಿದಾದರೂ ಯಾಕೆ?
"ಶಶಿ ತರೂರ್ ಅವರಿಗೆ ನೋವುಂಟು ಮಾಡಿರುವ ಹಿನ್ನೆಲೆ ನಾನು ವಿಷಾದ ವ್ಯಕ್ತ ಪಡಿಸುತ್ತೇನೆ," ಎಂಂದು ಹೇಳಿರುವ ರೇವಂತ್ ರೆಡ್ಡಿ, "ನಾವು ಕಾಂಗ್ರೆಸ್ ಪಕ್ಷದ ಮೌಲ್ಯಗಳು ಮತ್ತು ನೀತಿಗಳಲ್ಲಿ ನಮ್ಮ ನಂಬಿಕೆಯನ್ನು ಹಂಚಿಕೊಳ್ಳುತ್ತೇವೆ," ಎಂದು ಹೇಳಿದ್ದಾರೆ. ಇನ್ನು ರೇವಂತ್ ರೆಡ್ಡಿ ಕ್ಷಮೆಯಾಚಿಸಿದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಶಶಿ ತರೂರ್, "ರೇವಂತ್ ರೆಡ್ಡಿ ನನ್ನ ಬಗ್ಗೆ ಏನು ಹೇಳಿದ್ದಾರೋ ಅದರ ಬಗ್ಗೆ ನನ್ನ ಬಳಿ ಕರೆ ಮಾಡಿ ಕ್ಷಮೆ ಕೇಳಿದ್ದಾರೆ. ಅವರ ಈ ಕ್ಷಮೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಹಾಗೂ ಈ ದುರಷದೃಷ್ಟಕರ ಸನ್ನಿವೇಶವನ್ನು ಇತಿಹಾಸ ಎಂದು ತಿಳಿದುಕೊಳ್ಳಲು ನನಗೆ ಸಂತೋಷವಿದೆ," ಎಂದು ಟ್ವೀಟ್ ಮೂಲಕ ಶಶಿ ತರೂರ್ ಹೇಳಿದ್ದಾರೆ.
ಹಾಗೆಯೇ "ನಾವು ತೆಲಂಗಾಣದಲ್ಲಿ ಹಾಗೂ ರಾಷ್ಟ್ರದ ಎಲ್ಲೆಡೆ ಕಾಂಗ್ರೆಸ್ ಅನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು," ಎಂದು ಕೂಡಾ ಕಾಂಗ್ರೆಸ್ನ ತಿರುವನಂತಪುರಂ ಸಂಸದ ಶಶಿ ತರೂರ್ ತಿಳಿಸಿದ್ದಾರೆ. ಇನ್ನು ತೆಲಂಗಾಣದ ಕಾಂಗ್ರೆಸ್ ಉಸ್ತುವಾರಿ ಮಾಣಿಕ್ಕಂ ಟ್ಯಾಗೋರ್ರನ್ನು ಕೂಡಾ ಟ್ಯಾಗ್ ಮಾಡಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ, "ತೆಲಂಗಾಣದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಜಯ ಗಳಿಸಲು ಬೇಕಾದ ಸಾರ್ವಜನಿಕ ಪ್ರಚಾರ ಕಾರ್ಯಗಳಲ್ಲಿ ಶಶಿ ತರೂರ್ ಸಹಾಯ ಮಾಡಲಿದ್ದಾರೆ," ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಸುನಂದಾ ಪುಷ್ಕರ್ ಪ್ರಕರಣ: ಈ ನಿಗೂಢ ಸಾವಿನ ಎಲ್ಲಾ ತಿರುವುಗಳ ಟೈಮ್ಲೈನ್
ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ದ ಈ ಹಿಂದೆ ವಾಗ್ದಾಳಿ ನಡೆಸಿದ್ದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ, "ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರ ಹಾಕುವ ವಿಶ್ವಾಸ ನನಗೆ ಇದೆ," ಎಂದು ಹೇಳಿದ್ದಾರೆ. ಇತ್ತೀಚೆಗೆ ಶಶಿ ತರೂರ್ ಹೈದರಾಬಾದ್ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಐಟಿ ಸಚಿವ ಕೆಟಿ ರಾಮರಾವ್ ಅವರನ್ನು ಹೊಗಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ, "ಶಶಿ ತರೂರ್ ಹಾಗೂ ರಾಮ್ ರಾವ್ ಇಬ್ಬರೂ ಕೂಡಾ ಒಂದೇ ತರಹದ ಜನರು. ಇವರಿಬ್ಬರಿಗೂ ಇಂಗ್ಲೀಷ್ ಮಾತನಾಡಲು ಬಹಳ ಸರಳವಾಗಿ, ಚೆನ್ನಾಗಿ ಬರುತ್ತದೆ. ಅಷ್ಟಕ್ಕೆ ಅವರು ಜ್ಞಾನವುಳ್ಳ ವ್ಯಕ್ತಿಗಳು ಎಂದು ಅರ್ಥವೇನಲ್ಲ," ಎಂದು ಲೇವಡಿ ಮಾಡಿದ್ದರು.
ಹಾಗೆಯೇ "ಶಶಿ ತರೂರ್ ಕತ್ತೆ, ನಾನು ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಲಾಗುವುದು ಎಂದು ನಂಬಿದ್ದೆ. ಕೆ ಟಿ ರಾಮ ರಾವ್, ಶಶಿ ತರೂರ್ರನ್ನು ಹೊಗಳುವ ಮುನ್ನ ಶಶಿ ತರೂರ್ ರಾಜ್ಯಗಳ ವ್ಯವಹಾರದ ಸ್ಥಿತಿಯನ್ನು ತಿಳಿದಿರಬೇಕಿತ್ತು. ಟ್ವೀಟ್ನಲ್ಲಿ ಆ ಕತ್ತೆಯನ್ನು ಟ್ಯಾಗ್ ಮಾಡಬೇಕಿತ್ತು. ಪರಸ್ಪರ ಇಂಗ್ಲೀಷಿನಲ್ಲಿ ಮಾತನಾಡಿದ ಮಾತ್ರಕ್ಕೆ ಇಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ," ಎಂದು ಟೀಕೆ ಮಾಡಿದ್ದರು.
(ಒನ್ ಇಂಡಿಯಾ ಸುದ್ದಿ)