'ಚಿನ್ನ ಮಹಿಳೆಗೆ ಶೃಂಗಾರ, ಫ್ಯಾಷನ್ನಿಗೆ ಅದನ್ನವರು ಕೊಳ್ಳಲ್ಲ'
ಬೆಂಗಳೂರು, ಮಾರ್ಚ್ 17 : ಕೇಂದ್ರ ಬಜೆಟ್ಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣದ ಮೇಲೆ ಹೇರಿರುವ ಅಬಕಾರಿ ಸುಂಕವನ್ನು ವಿರೋಧಿಸಿ ವಿಧಾನಸಭೆ ಸದಸ್ಯರೂ ಆಗಿರುವ ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ. ಶರವಣ ಅವರು ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಭಾರತದಲ್ಲಿ ಜನರು ಫ್ಯಾಷನ್ನಿಗಾಗಿ ಚಿನ್ನಾಭರಣವನ್ನು ಕೊಳ್ಳುವುದಿಲ್ಲ. ಅದು ಅವರ ಜೀವನದ, ಸಂಸ್ಕೃತಿಯ, ಸಂಪ್ರದಾಯದ ಒಂದು ಅವಿಭಾಜ್ಯ ಅಂಗವಾಗಿದೆ. ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರಿಂದ ದೇಶದಾದ್ಯಂತ ಆಭರಣದ ಮಾರಾಟ ಭಾರೀ ಪ್ರಮಾಣದಲ್ಲಿ ತಗ್ಗಿದೆ. ಇದು ಆಭರಣ ವ್ಯಾಪಾರಿಗಳನ್ನು ಮಾತ್ರವಲ್ಲ ಜನರ ಭಾವನೆಗಳಿಗೂ ಧಕ್ಕೆ ತಂದಿದೆ ಎಂದು ಅವರು ಹೇಳಿದರು.[ಮುಂದುವರಿದ ಚಿನ್ನಾಭರಣ ಅಂಗಡಿ ಮಾಲೀಕರ ಧರಣಿ]
ಫೆಬ್ರವರಿ 29ರಂದು ಮಂಡಿಸಲಾದ ಕೇಂದ್ರ ಬಜೆಟ್ಟಿನಲ್ಲಿ, ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಚಿನ್ನಾಭರಣದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ. ಎರಡು ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿಗೆ ಪಾನ್ ಕಾರ್ಡ್ ಕಡ್ಡಾಯ ಮತ್ತು ಆಭರಗಳ ವಹಿವಾಟಿನ ಮೇಲೆ ಶೇ. 1ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗಿದೆ.[9ನೇ ದಿನಕ್ಕೆ ಚಿನ್ನಾಭರಣ ಮಾಲೀಕರ ಮುಷ್ಕರ, ಗ್ರಾಹಕ ತತ್ತರ]
ಇದನ್ನು ವಿರೋಧಿಸಿ ದೇಶದಾದ್ಯಂತ ಚಿನ್ನಾಭರಣ ವ್ಯಾಪಾರಿಗಳು ಪ್ರತಿಭಟನೆಗಿಳಿದಿದ್ದಾರೆ. ಅಬಕಾರಿ ಸುಂಕ ಏರಿಕೆ ಅವೈಜ್ಞಾನಿಕವಾಗಿದ್ದು, ಅದನ್ನು ಇಳಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಒಕ್ಕೊರಲಿನಿಂದ ಕೂಗಿದ್ದಾರೆ.
ರಾಮ್ಲೀಲಾ ಮೈದಾನದಲ್ಲಿ ಶರವಣ
ಕರ್ನಾಟಕ ಆಭರಣ ಮಂಡಳಿ ಅಧ್ಯಕ್ಷ ಡಾ. ಟಿ.ಎ. ಶರವಣ ಮತ್ತು ಸದಸ್ಯರು ರಾಮ್ಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದರು.[ಚಿನ್ನಾಭರಣ ಮಳಿಗೆಗಳು ಇಂದು ಮತ್ತು ನಾಳೆಯೂ ಬಂದ್]
ಫ್ಯಾಷನ್ನಿಗಾಗಿ ಚಿನ್ನಾಭರಣವನ್ನು ಕೊಳ್ಳುವುದಿಲ್ಲ
ಜನರು ಫ್ಯಾಷನ್ನಿಗಾಗಿ ಅಥವಾ ಶೋಕಿಗಾಗಿ ಬಂಗಾರ, ಬೆಳ್ಳಿಯನ್ನು ಕೊಳ್ಳುವುದಿಲ್ಲ. ಮದುವೆ, ಮುಂಜಿ ಹೇಗೆ ಸಂಸ್ಕೃತಿಯ ಅಂಗವೋ, ಚಿನ್ನಾಭರಣ ಧರಿಸುವುದು ಕೂಡ ಅಷ್ಟೇ ಮಹತ್ವದ್ದು ಎಂಬುದನ್ನು ಕೇಂದ್ರ ಸರಕಾರ ಅರಿತುಕೊಳ್ಳಬೇಕು ಎಂಬುದು ಅವರ ವಾದ.[ಫೆ.10ಕ್ಕೆ ದೇಶಾದ್ಯಂತ ಚಿನ್ನಾಭರಣ ಅಂಗಡಿಗಳು ಬಂದ್]
ಸುಂದರ ಮಹಿಳಾಮಣಿಗಳು
ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ವರ್ತಕರೆಲ್ಲ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಹೋರಾಟಕ್ಕಿಳಿದಿದ್ದಾರೆ. ಪ್ರತಿಭಟನೆಯಲ್ಲಿ ಆಭರಣ ವರ್ತಕಿಯರು ಕೂಡ ಭಾಗವಹಿಸಿದ್ದರು.
ಆಭರಣ ಮಹಿಳೆಯರ ಶೃಂಗಾರ
ಅರುಣ್ ಜೇಟ್ಲಿಯವರೆ, ಆಭರಣ ವರ್ತಕರ ಬಗ್ಗೆ, ಚಿನ್ನಾಭರಣ ತೊಡುವ ಜನರ ಬಗ್ಗೆ ಕರುಣೆ ತೋರಿ. ಆಭರಣ ಧರಿಸುವುದು ಮಹಿಳೆಯರಿಗೆ ಶೃಂಗಾರ ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯಮ ಕುಸಿದುಬಿದ್ದಿದೆ
ನೀವು ಮಾಡುತ್ತಿರುವುದು ಮೇಕ್ ಇನ್ ಇಂಡಿಯಾನೋ, ಬೇಕ್ ಇನ್ ಇಂಡಿಯಾನೋ? ಅಬಕಾರಿ ಸುಂಕ ಏರಿಸಿದ್ದರಿಂದ ಉದ್ಯಮ ಕುಸಿದುಬಿದ್ದಿದೆ, 10.6 ಕೋಟಿಯಷ್ಟು ಜನ ಈ ಉದ್ಯಮದೊಂದಿಗೆ ತೊಡಗಿಕೊಂಡಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ?
ಜೇಟ್ಲಿ ಪ್ರತಿಭಟನೆಗೆ ಸ್ಪಂದಿಸುತ್ತಾರಾ?
ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿಯವರು ಆಭರಣ ವರ್ತಕರ ಕೂಗಿಗೆ ಸ್ಪಂದಿಸುತ್ತಾರಾ? ಏರಿಸಿರುವ ಅಬಕಾರಿ ಸುಂಕವನ್ನು ಇಳಿಸುತ್ತಾರಾ?