ಕೃಷಿ ವಲಯದ ಸುಧಾರಣೆ: ವೈರಲ್ ಆದ ಹಳೆಯ ಪತ್ರಕ್ಕೆ ಪವಾರ್ ಸ್ಪಷ್ಟನೆ
ನವದೆಹಲಿ, ಡಿಸೆಂಬರ್ 8: ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಅವರು ಕೃಷಿ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಬರೆದಿದ್ದ ಪತ್ರ ಈಗ ವೈರಲ್ ಆಗಿದ್ದು, ಅದಕ್ಕೆ ಪವಾರ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಈಗ ತಂದಿರುವ ಕೃಷಿ ವಲಯಗಳಲ್ಲಿನ ಬದಲಾವಣೆಗಳನ್ನೇ ಶರದ್ ಪವಾರ್ ಬಯಸಿದ್ದರು ಎನ್ನಲಾಗಿದೆ.
ದೆಹಲಿಯ ಆಗಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಶರದ್ ಪವಾರ್, ತಮ್ಮ ತಮ್ಮ ರಾಜ್ಯಗಳಲ್ಲಿನ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವಂತೆ ಹೇಳಿದ್ದರು ಎಂದು ಆನ್ಲೈನ್ನಲ್ಲಿ ಹರಿದಾಡುತ್ತಿರುವ ಪತ್ರವನ್ನು ಬಿಜೆಪಿ ಮುಖಂಡರು ತೋರಿಸುತ್ತಿದ್ದಾರೆ.
ಭಾರತ ಬಂದ್: ರಾಷ್ಟ್ರಪತಿಗೆ 9 ಲಕ್ಷ ರೈತರಿಂದ ಪೋಸ್ಟ್ಕಾರ್ಡ್ ರವಾನೆ
ಆದರೆ ಇದನ್ನು ಪವಾರ್ ನಿರಾಕರಿಸಿದ್ದಾರೆ. ಕೆಲವು ವಿರೋಧಪಕ್ಷಗಳು ಒಮ್ಮತದ ನಿಲುವು ತೆಗೆದುಕೊಂಡು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕೃಷಿ ಕಾಯ್ದೆಗಳ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಡಲಿವೆ ಎಂದು ಎನ್ಸಿಪಿ ಮುಖ್ಯಸ್ಥರಾಗಿರುವ ಪವಾರ್ ತಿಳಿಸಿದ್ದಾರೆ. ಮುಂದೆ ಓದಿ.
ಕಾಯ್ದೆಯಲ್ಲಿ ಎಪಿಎಂಸಿ ಉಲ್ಲೇಖವೇ ಇಲ್ಲ
'ಎಪಿಎಂಸಿಗಳಿಗೆ ಕೆಲವು ಸುಧಾರಣೆ ತರುವ ಅಗತ್ಯವಿದೆ ಎಂದು ನಾನು ಹೇಳಿದ್ದೆ. ಎಪಿಎಂಸಿ ಕಾಯ್ದೆ ಮುಂದುವರಿಯಬೇಕು. ಆದರೆ ಅದಕ್ಕೆ ಸುಧಾರಣೆಗಳು ಬೇಕು. ನಾನು ಪತ್ರ ಬರೆದಿದ್ದರ ಬಗ್ಗೆ ಅನುಮಾನ ಬೇಕಿಲ್ಲ. ಅದರೆ ಈ ಮೂರು ಹೊಸ ಕಾಯ್ದೆಗಳು ಎಪಿಎಂಸಿಯ ಬಗ್ಗೆ ಉಲ್ಲೇಖವನ್ನೇ ಮಾಡಿಲ್ಲ. ಅವರು ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ' ಎಂದು ಶರದ್ ಪವಾರ್ ಹೇಳಿದ್ದಾರೆ.
ಐದಾರು ಮಂದಿ ಚರ್ಚೆ
'ನಾಳೆ ವಿಭಿನ್ನ ರಾಜಕೀಯ ಪಕ್ಷಗಳ ಐದಾರು ಮಂದಿ ಒಟ್ಟಿಗೆ ಕುಳಿತು ಚರ್ಚಿಸಿ ಒಮ್ಮತದ ನಿಲುವು ತೆಗೆದುಕೊಳ್ಳಲಿದ್ದೇವೆ. ನಮಗೆ ನಾಳೆ ಸಂಜೆ 5 ಗಂಟೆಗೆ ರಾಷ್ಟ್ರಪತಿಯವರ ಭೇಟಿಯ ಸಮಯ ಸಿಕ್ಕಿದೆ. ಅವರ ಮುಂದೆ ನಮ್ಮೆಲ್ಲರ ಸಹಮತದ ನಿಲುವನ್ನು ಮಂಡಿಸಲಿದ್ದೇವೆ' ಎಂದು ಹೇಳಿದ್ದಾರೆ.
ಅಭಿವೃದ್ಧಿಗಾಗಿ ಸುಧಾರಣೆ ಅಗತ್ಯ, ಹಳೆಯ ಕಾನೂನುಗಳು ಹೊರೆಯಾಗುತ್ತಿವೆ: ಪ್ರಧಾನಿ ಮೋದಿ
ಪವಾರ್ ಪತ್ರ ಬರೆದಿದ್ದರು
ಪವಾರ್ ಅವರ ಹಳೆಯ ಪತ್ರವನ್ನು ಬಿಜೆಪಿ ಮುಖಂಡರು ಹಂಚಿಕೊಳ್ಳುತ್ತಿದ್ದು, ಪವಾರ್ ಮತ್ತು ಕಾಂಗ್ರೆಸ್ ದ್ವಿಮುಖ ನಿಲುವು ಹೊಂದಿರುವುದಾಗಿ ಆರೋಪಿಸುತ್ತಿದ್ದಾರೆ. 'ಶರದ್ ಪವಾರ್ ಕೂಡ ಹೊಸ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅವರು ಕೃಷಿ ಸಚಿವರಾಗಿದ್ದಾಗ ಮಾರುಕಟ್ಟೆ ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಸಹಭಾಗಿತ್ವಕ್ಕೆ ಅನುವು ಮಾಡಿಕೊಡುವಂತೆ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು' ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿತ್ತು?
'ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸುವ ಸಲುವಾಗಿಯೇ ನರೇಂದ್ರ ಮೋದಿ ಸರ್ಕಾರವನ್ನು ವಿರೋಧಿಸುತ್ತಿವೆ. 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಮತ್ತು ರಫ್ತು ಸೇರಿದಂತೆ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ಎಲ್ಲ ನಿರ್ಬಂಧಗಳಿಂದ ಮುಕ್ತಗೊಳಿಸುವುದಾಗಿ ಭರವಸೆ ನೀಡಿತ್ತು' ಎಂದು ರವಿಶಂಕರ್ ನೆನಪಿಸಿದ್ದಾರೆ.