ಬಂಗಾಲಿ ಸಾಹಿತಿ ಶಂಖ ಘೋಷ್ ಗೆ ಜ್ಞಾನಪೀಠ
ಕೋಲ್ಕತ್ತಾ, ಡಿಸೆಂಬರ್ 23: ಸಾಹಿತ್ಯಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸಿ, ಬೆಂಗಾಲಿ ಮತ್ತು ಭಾರತೀಯ ಕವಿ ಶಂಖ ಘೋಷ್ ಗೆ ಈ ವರ್ಷದ ಜ್ಞಾನಪೀಠದ ಗೌರವ ಲಭಿಸಿದೆ. ಇದು ಬಂಗಾಲಕ್ಕೆ ಸಂದಾಯವಾಗುತ್ತಿರುವುದು ಎರಡನೇ ಬಾರಿಗೆ. ಬಂಗಾಲದ ಮಹಾಶ್ವೇತಾ ದೇವಿ 1996ರಲ್ಲಿ ಜ್ಞಾನಪೀಠ ಗೌರವಕ್ಕೆ ಪಾತ್ರರಾಗಿದ್ದರು.
ಕವಿ ಜಾಯ್ ಗೋಸ್ವಾಮಿ ಮಾತನಾಡಿ, ಬಹಳ ಹಿಂದಿನಿಂದಲೂ ಶಂಖ ಘೋಷ್ ಅವರು ಅದ್ಭುತವಾದ ಕಾವ್ಯಗಳನ್ನು ರಚಿಸುತ್ತಿದ್ದಾರೆ. ಅವರು ಕಾದಂಬರಿಗಳನ್ನು ಕೂಡ ಬರೆದಿದ್ದಾರೆ. ಅವರು ಭಾರತೀಯ ಸಾಹಿತ್ಯದ ಮುಖವಾಣಿಯಿದ್ದಂತೆ. ಇಡೀ ಬಂಗಾಲ ಅವರ ಈ ಸಾಧನೆಗೆ ಗರ್ವ ಪಡುತ್ತದೆ ಎಂದಿದ್ದಾರೆ.[ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ]
ಸಾಹಿತ್ಯಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಜ್ಞಾನಪೀಠ ಗೌರವ ನೀಡಲಾಗುತ್ತದೆ. ಭಾರತೀಯ ಭಾಷೆಯಲ್ಲಿ ಬರೆಯುವ ಸಾಹಿತಿಗಳಿಗಾಗಿಯೇ ಈ ಗೌರವ ಮೀಸಲಾಗಿದೆ. 1965ರಿಂದ 1981ರವರೆಗೆ ಸಾಹಿತಿಯ ಅತ್ಯುತ್ತಮ ರಚನೆಗೆ ಜ್ಞಾನಪೀಠ ನೀಡಲಾಗುತ್ತಿತ್ತು. ಆ ನಂತರ ಒಟ್ಟಾರೆ ಸಾಹಿತ್ಯ ಸೇವೆಯನ್ನು ಗುರುತಿಸಿ, ಗೌರವಿಸಲಾಗುತ್ತಿದೆ.[ತತ್ವಶಾಸ್ತ್ರದ ಅರಳುವಿಕೆಗೆ ಸಾಹಿತ್ಯವೆಂಬ ನೀರು ಮುಖ್ಯ : ಭೈರಪ್ಪ]
ಜ್ಞಾನಪೀಠ ಗೌರವವು ಒಂದು ಲಕ್ಷ ನಗದು, ಪ್ರಶಸ್ತಿ ಫಲಕ, ಸರಸ್ವತಿ ವಿಗ್ರಹವನ್ನು ಒಳಗೊಂಡಿದೆ. 1961ರಿಂದ ಜ್ಞಾನಪೀಠ ಗೌರವ ನೀಡಲು ಆರಂಭಿಸಲಾಯಿತು. ಈ ಬಾರಿ ಪ್ರತಿಸಲದಂತೆಯೇ ಕನ್ನಡದ ಎಸ್.ಎಲ್.ಭೈರಪ್ಪನವರಿಗೆ ಜ್ಞಾನಪೀಠ ಬರಬಹುದು ಎಂಬ ನಿರೀಖ್ಷೆ ಅವರ ಅಭಿಮಾನಿಗಳಿಗಿತ್ತು. "ಮತ್ತೊಮ್ಮೆ ಜ್ಞಾನಪೀಠವು ಭೈರಪ್ಪನವರನ್ನು ತಪ್ಪಿಸಿಕೊಂಡಿದೆ' ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.