ಸುಷ್ಮಾ ಸ್ವರಾಜ್ ಟ್ರೋಲ್: ಟ್ವಿಟ್ಟಿಗರಿಗೆ ಛೀಮಾರಿ ಹಾಕಿದ ಒಮರ್ ಅಬ್ದುಲ್ಲಾ
ನವದೆಹಲಿ, ಜುಲೈ 2: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗುತ್ತಿರುವುದಕ್ಕೆ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ, ಟ್ವಿಟ್ಟಿಗರಿಗೆ ಛೀಮಾರಿ ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಒಮರ್, ಟ್ರೋಲ್ ಆಗುತ್ತಿರುವ ಕುರಿತು ಟ್ವಿಟ್ಟರ್ ಪೋಲ್ ವೊಂದರಲ್ಲಿ ಜನರ ಅಭಿಪ್ರಾಯವನ್ನು ಸುಷ್ಮಾ ಕೇಳಿದ್ದರು. 120,000ಕ್ಕೂ ಹೆಚ್ಚು ಜನ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ರನ್ನು ಟ್ರೋಲ್ ಮಾಡಿದ ಟ್ವೀಟ್ ಅನ್ನು ಬೆಂಬಲಿಸುತ್ತೀರಾ?
ಅದರಲ್ಲಿ ಶೇ.43 ರಷ್ಟು ಜನ ನಿಂದನೀಯ ಟ್ವೀಟ್ ಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಟ್ವಿಟ್ಟರ್ ಜಗತ್ತು ಎತ್ತ ಸಾಗುತ್ತಿದೆ ಎನ್ನುವುದನ್ನು ತೋರಿಸುತ್ತಿದೆ. ನಿಂದನೀಯ ಟ್ವೀಟ್ ಮಾಡುವ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಜನರಿಗೆ ನಾಚಿಕೆಯಾಗಬೇಕು ಎಂದು ಒಮರ್, ಸುಷ್ಮಾ ಬೆನ್ನಿಗೆ ನಿಂತಿದ್ದಾರೆ.
'ನಾನು ಕೆಲವು ಟ್ವೀಟ್ ಗಳನ್ನು ಲೈಕ್ ಮಾಡಿದ್ದೇನೆ, ಇದು ಕೆಲವು ದಿನಗಳಿಂದ ನಡೆಯುತ್ತಿದೆ. ಇಂಥ ಟ್ವೀಟ್ ಗಳನ್ನು ನೀವು ಒಪ್ಪುತ್ತೀರಾ?' ಎಂದು ಸುಷ್ಮಾ ಆರಂಭಿಸಿದ್ದ ಟ್ವಿಟ್ಟರ್ ಪೋಲ್ ಗೆ ಶೇ.57 ರಷ್ಟು ಜನ 'ಇಲ್ಲ' ಎಂದು ಪ್ರತಿಕ್ರಿಯಿಸಿದ್ದರು, ಇನ್ನುಳಿದಂತೆ ಶೇ.43 ರಷ್ಟು ಜನ 'ಹೌದು' ಎಂದಿದ್ದರು.
ಏನಿದು ವಿವಾದ ? ತಾನ್ವಿ ಸೇಠ್ ಎಂಬ ಹಿಂದೂ ಮಹಿಳೆ ಮತ್ತು ಮೊಹಮ್ಮದ್ ಅನಸ್ ಸಿದ್ದಿಕಿ ಎಂಬ ಮುಸ್ಲಿಂ ವ್ಯಕ್ತಿ 2007ರಲ್ಲಿ ವಿವಾಹವಾಗಿದ್ದರು. ಪಾಸ್ ಪೋರ್ಟ್ ಪಡೆಯಲು ಅವರು ಉತ್ತರ ಪ್ರದೇಶದ ಲಕ್ನೋ ಪಾಸ್ ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿ ಹಾಕಿದ್ದರು.
ಆದರೆ ಈ ಸಂದರ್ಭದಲ್ಲಿ ಸಿದ್ದಿಕಿ ಅವರು ಹಿಂದೂ ಮತಕ್ಕೆ ಮತಾಂತರವಾಗುವಂತೆ ಪಾಸ್ ಪೋರ್ಟ್ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದರು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಈ ಸಂಬಂಧ ದಂಪತಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ದೂರು ನೀಡಿದ್ದರು.
ವಿಷಯ ತಿಳಿದ ಸುಷ್ಮಾ ಸ್ವರಾಜ್, ವಿವಾದ ಸೃಷ್ಟಿಸಿದ್ದ ಪಾಸ್ ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ವಿಕಾಸ್ ಮಿಶ್ರಾ ಅವರನ್ನು ವರ್ಗಾವಣೆ ಮಾಡುವಂತೆ ಆದೇಶಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಸುಷ್ಮಾ ಟ್ವಿಟ್ಟರ್ ನಲ್ಲಿ ಟ್ರೋಲ್ ಆಗಲಾರಂಭಿಸಿದರು.