ಶಾರುಖ್ ವಿರುದ್ಧ ಇನ್ನೂ ಆರದ ಅಸಹಿಷ್ಣುತೆ ಉರಿ!
ಅಹಮದಾಬಾದ್, ಫೆ. 15: ಕಿಂಗ್ ಖಾನ್ ಶಾರೂಖ್ ಅವರ ಕಾರಿನ ಮೇಲೆ ದಾಳಿ ನಡೆದಿದೆ. ರಯೀಸ್ ಚಿತ್ರದ ಚಿತ್ರೀಕರಣಕ್ಕಾಗಿ ಬಂದಿದ್ದ ಖಾನ್ ಅವರು ಬಂದಿದ್ದಾರೆ. ಶಾರುಖ್ ಅವರ ಕಾರಿನ ಮೇಲೆ ಗುಂಪೊಂದು ದಾಳಿ ಮಾಡಿದೆ. ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಶಾರುಖ್ ನೀಡಿದ್ದ ಹೇಳಿಕೆ ಖಂಡಿಸಿ ಪ್ರತಿಭಟಿಸುತ್ತಿರುವುದಾಗಿ ದಾಳಿ ಮಾಡಿದವರು ಹೇಳಿದ್ದಾರೆ.
ಅಹಮದಾಬಾದಿನ ಆಶ್ರಮ ರಸ್ತೆಯಲ್ಲಿರುವ ಹಯಾತ್ ರಿಜೆನ್ಸಿ ಹೋಟೆಲ್ ಆವರಣದಲ್ಲಿ ಶಾರೂಖ್ ಅವರು ಕಾರು ನಿಲ್ಲಿಸಿದ್ದರು. ಸುಮಾರು 8 ರಿಂದ 10 ಮಂದಿ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ರಯೀಸ್ ಚಿತ್ರತಂಡದ ವಿರುದ್ಧ 15 ದಿನ ಮುನ್ನ ಭುಜ್ ಪ್ರದೇಶದಲ್ಲಿ ಚಿತ್ರೀಕರಣದ ವೇಳೆ ಪ್ರತಿಭಟನೆ ನಡೆಸಲಾಗಿತ್ತು.
ನಂತರ ಹೇಳಿಕೆ ಬಗ್ಗೆ ಸಮರ್ಥನೆ ನೀಡಿ, "ಭಾರತ ಅಸಹಿಷ್ಣುತೆ ಹೊಂದಿದೆ ಎಂದು ನಾನೆಂದೂ ಹೇಳಿಲ್ಲ. ನನ್ನನ್ನು ಆ ಬಗ್ಗೆ ಕೇಳಿದಾಗ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಅಭಿಪ್ರಾಯ ಹೇಳಲೇಬೇಕು ಎಂದು ಒತ್ತಾಯಿಸಿದಾಗ, ಯುವಕರು ಈ ದೇಶವನ್ನು ಜಾತ್ಯತೀತ ಹಾಗೂ ಪ್ರಗತಿಪರ ದೇಶವಾಗಿ ಮಾಡಲು ಗಮನ ಹರಿಸಬೇಕು ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.
ಖಾನ್ ಅವರ ಹಿಂದಿನ ಚಿತ್ರ ದಿಲ್ವಾಲೆಗೆ ಕೂಡಾ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಬಾಕ್ಸ್ ಆಫೀಸ್ನಲ್ಲಿ ನೀರಸ ಪ್ರತಿಕ್ರಿಯೆ ದೊರಕಿತ್ತು. ರಯೀಸ್ ಚಿತ್ರ ಜುಲೈ ಮಧ್ಯಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಚಿತ್ರದ ಬಿಡುಗಡೆಗೆ ನಿಷೇಧ ಹೇರುವಂತೆ ಆಗ್ರಹಿಸಿ ದಾಳಿ ಮಾಡಿದ ವಿಶ್ವ ಹಿಂದೂಪರಿಷತ್ ನ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಎಸಿಪಿ ಬಿಯು ಜಡೇಜ ಹೇಳಿದ್ದಾರೆ.