ಬಿಹಾರಕ್ಕೆ ಶಹನವಾಜ್ ಹುಸೇನ್: ಬಿಜೆಪಿಯ ಹೊಸ ತಂತ್ರ?
ನವದೆಹಲಿ, ಜನವರಿ 18: ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ 32ನೇ ವಯಸ್ಸಿನಲ್ಲಿಯೇ ಸಚಿವರಾಗುವ ಮೂಲಕ ಅತಿ ಕಿರಿಯ ಕೇಂದ್ರ ಸಚಿವ ಎನಿಸಿಕೊಂಡಿದ್ದ ಸಯ್ಯದ್ ಶಹನವಾಜ್ ಹುಸೇನ್ ಅವರು 22 ವರ್ಷಗಳ ಬಳಿಕ ಬಿಹಾರ ರಾಜಕಾರಣಕ್ಕೆ ಮರಳಿದ್ದಾರೆ. ಬಿಹಾರ ವಿಧಾನಪರಿಷತ್ ಚುನಾವಣೆಯಲ್ಲಿ ಹುಸೇನ್ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ನಾಮನಿರ್ದೇಶನ ಮಾಡಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿನ ಸಂಖ್ಯೆ ಗಮನಿಸಿದರೆ ಹುಸೇನ್ ಚುನಾವಣೆ ಇಲ್ಲಿ ಔಪಚಾರಿಕ ಮಾತ್ರ. ಅವರ ಈ ನಾಮನಿರ್ದೇಶನವನ್ನು ಎರಡು ರೀತಿಯಲ್ಲಿ ನೋಡಬಹುದು. ಒಂದನೆಯದು ಬಿಜೆಪಿ ಅವರಿಗೆ ಕೊನೆಗೂ ಪುನರ್ವಸತಿ ಕಲ್ಪಿಸಿದೆ. ಇನ್ನೊಂದು ರೀತಿಯಲ್ಲಿ ಅವರನ್ನು ದೆಹಲಿಯಿಂದ ಕೊನೆಗೂ ಹೊರಹಾಕಿದೆ.
ತೇಜಸ್ವಿಗೆ ಸಿಎಂ ಸ್ಥಾನ, ನಿತೀಶ್ಗೆ ಪ್ರಧಾನಿ ಹುದ್ದೆ: ಎನ್ಡಿಎ ಒಕ್ಕೂಟಕ್ಕೆ ಸಂಚಕಾರ?
ಶಹನವಾಜ್ ಹುಸೇನ್ ಅವರು ಇಷ್ಟು ವರ್ಷಗಳಿಂದ ರಾಜಕೀಯ ಕಾಠಿಣ್ಯತೆ ಅನುಭವಿಸುತ್ತಿದ್ದರು. ಈಗ ಅವರಿಗೆ ಒಂದು ನೆಲೆ ನೀಡಲಾಗಿದೆ. 2014ರಲ್ಲಿ ಕೊನೆಯದಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 'ಮೋದಿ ಅಲೆ'ಯ ಹೊರತಾಗಿಯೂ ಸೋಲಿನ ಕಹಿ ಅನುಭವಿಸಿದ್ದರು. ಈಗ ಅವರಿಗೆ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನಿಯಂತ್ರಿಸುವ, ಅವರನ್ನು ಕಾಡಿಸುವ ಅವಕಾಶ ಅವರಿಗೆ ದೊರಕಿದೆ. ಏಕೆಂದರೆ ಅವರ ನಡುವೆ ಉತ್ತಮ ಸಂಬಂಧವಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಭಾಗಲ್ಪುರ ಲೋಕಸಭಾ ಕ್ಷೇತ್ರವನ್ನು ನಿತೀಶ್ ಕುಮಾರ್ ಜೆಡಿಯು ಕೋಟಾಕ್ಕಾಗಿ ಕಿತ್ತುಕೊಂಡಿದ್ದರು ಎಂದು ಹುಸೇನ್ ಬಹಿರಂಗವಾಗಿ ಆರೋಪಿಸಿದ್ದರು.
ನಿತೀಶ್ ಅವರನ್ನು ಹೈರಾಣಾಗಿಸುವ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 'ಹನುಮಾನ್' ಚಿರಾಗ್ ಪಾಸ್ವಾನ್, ಹುಸೇನ್ ಅವರಿಗೆ ಪ್ರಬಲ ಅಸ್ತ್ರವಾಗಬಹುದು. ಹಾಗೆಯೇ ನಿತೀಶ್ ಸಂಪುಟಕ್ಕೆ ಅವರ ಸೇರ್ಪಡೆಗೆ ಬಿಜೆಪಿ ಒಲವು ತೋರಿಸಲಿದೆ. ಈ ಮೂಲಕ ಸಚಿವ ಸಂಪುಟದಲ್ಲಿ ಏಕೈಕ ಮುಸ್ಲಿಂ ಮುಖವಾಗುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆಯಲ್ಲಿ 11 ಮುಸ್ಲಿಂ ಅಭ್ಯರ್ಥಿಗಳು ಜೆಡಿಯುದಿಂದ ಗೆಲುವು ಕಂಡಿದ್ದಾರೆ. ಎನ್ಡಿಎ ಒಕ್ಕೂಟದ ಬಿಜೆಪಿ ಹಾಗೂ ಇತರೆ ಪಕ್ಷಗಳಿಂದ ಒಬ್ಬ ಮುಸ್ಲಿಂ ಅಭ್ಯರ್ಥಿಯೂ ಸ್ಪರ್ಧಿಸಿರಲಿಲ್ಲ. ಹಿರಿಯ ಸಚಿವರು, ಮುಖ್ಯವಾಗಿ ಮುಸ್ಲಿಂ ಮುಖಂಡ ಪ್ರಮುಖ ನೆಲೆಗೆ ಬರುವುದು ನಿತೀಶ್ ಕುಮಾರ್ಗೆ ಸಂಕಟ ತಾರದೆ ಇರದು.
ನನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿರಲಿಲ್ಲ: ನಿತೀಶ್ ಕುಮಾರ್
ಬಿಹಾರದಲ್ಲಿ ಹುಸೇನ್ ಅವರನ್ನು ಸಚಿವರನ್ನಾಗಿ ಮಾಡಿದರೆ ಬಿಜೆಪಿಗೆ ಸಂತಸವಾಗಲಿದೆಯೇ? ಅವರಿಗೆ ಆಯ್ಕೆ ಇದೆಯೇ? 2015 ಮತ್ತು 2020ರ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವಂತೆ ಬಿಜೆಪಿ ಬಯಸಿದ್ದರೂ, ಹುಸೇನ್ ಅದನ್ನು ನಿರಾಕರಿಸಿದ್ದರು. ರಾಜ್ಯದಲ್ಲಿ ಶಾಸಕ ಅಥವಾ ಸಚಿವರಾಗುವುದನ್ನು ಹಿಂಬಡ್ತಿ ಎಂದೇ ಅವರು ಭಾವಿಸಿರುವುದು ಸ್ಪಷ್ಟ. ಏಕೆಂದರೆ ಇತಿಹಾಸ ನಿರ್ಮಿಸುವ ವೇಳೆ ಅವರು 30ರ ವಯಸ್ಸಿನ ಗಡಿ ದಾಟಿದ್ದರಷ್ಟೇ. 1999ರಲ್ಲಿ ಮುಸ್ಲಿಂ ಬಾಹುಳ್ಯದ ಕಿಶನ್ಗಂಜ್ ಲೋಕಸಭೆ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಅವರನ್ನು ಕಿರಿಯ ಸಚಿವರನ್ನಾಗಿ ವಾಜಪೇಯಿ ಆಯ್ಕೆ ಮಾಡಿದ್ದರು. ಬಳಿಕ ಒಂದೆರಡು ವರ್ಷದಲ್ಲಿಯೇ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದರು.