2019ರ ಚುನಾವಣೆಗೂ ಮುನ್ನ ಠಾಕ್ರೆ ಮನೆ ಬಾಗಿಲು ತಟ್ಟಿದ ಶಾ
Recommended Video
ನವದೆಹಲಿ, ಜೂನ್ 5: 2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಎನ್ ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳನ್ನು ಗಟ್ಟಿ ಮಾಡಿಕೊಳ್ಳಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂದಾಗಿದ್ದಾರೆ.
ಮುಖ್ಯವಾಗಿ ಬಿಜೆಪಿ ಮತ್ತು ನರೇಂದ್ರ ಮೋದಿ ಸರಕಾರದ ವಿರುದ್ಧ ಕೆಂಡ ಕಾರುತ್ತಿರುವ ಶಿವಸೇನೆಯ ಉದ್ಧವ್ ಠಾಕ್ರೆ ಮನೆ ಬಾಗಿಲು ತಟ್ಟಿದ್ದಾರೆ. ಬುಧವಾರ ಮುಂಬೈನಲ್ಲಿ ಅವರು ಠಾಕ್ರೆಯನ್ನು ಭೇಟಿಯಾಗಲಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳಿ: ಶಿವಸೇನೆಗೆ ಕಾಂಗ್ರೆಸ್ ಸವಾಲು
ಇದಾದ ಬಳಿಕ ಗುರುವಾರ ಚಂಡೀಗಢದಲ್ಲಿ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಭೇಟಿಯಾಗಲಿದ್ದಾರೆ.
ಈ ಹಿಂದೆ ಅಮಿತ್ ಶಾ ಜೂನ್ 3ರಂದು ಎಲ್ ಜೆಪಿ ಮುಖ್ಯಸ್ಥರ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ರನ್ನು ಭೇಟಿಯಾಗಿದ್ದರು. ತಮ್ಮ ಮಿತ್ರಕೂಟದ ಪಕ್ಷಗಳನ್ನು ಭೇಟಿಯಾಗಿ ಸಂಬಂಧ ಗಟ್ಟಿಗೊಳಿಸುವ ಉದ್ದೇಶದಿಂದ ಅಮಿತ್ ಶಾ ಬೇರೆ ಬೇರೆ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಪಕ್ಷ ಮತ್ತು ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿರುವ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ.
"ಉದ್ಧವ್ ಠಾಕ್ರೆ ಭೇಟಿಗೆ ಅಮಿತ್ ಶಾ ಸಮಯ ಕೇಳಿದ್ದರು. ಅದರ ಪ್ರಕಾರ ಅವರಿಗೆ ನಾಳೆ ಸಂಜೆ ಭೇಟಿಗೆ ಸಮಯ ನೀಡಲಾಗಿದೆ," ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಇದೇ ವೇಳೆ 4 ವರ್ಷಗಳ ನಂತರ ಠಾಕ್ರೆಯನ್ನು ಅಮಿತ್ ಶಾ ಭೇಟಿಯಾಗುತ್ತಿರುವ ಔಚಿತ್ಯವನ್ನೂ ಅವರು ಪ್ರಶ್ನಿಸಿದ್ದಾರೆ.
ಇನ್ನು ಜೂನ್ 7ರಂದು ಪಾಟ್ನಾದಲ್ಲಿ ಎನ್ ಡಿಎಯ ಎಲ್ಲಾ ಮಿತ್ರ ಪಕ್ಷಗಳಿಗಾಗಿ ಮಹಾಭೋಜನ ಹಮ್ಮಿಕೋಳ್ಳಲಾಗಿದೆ. ಇದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಕೇಂದ್ರ ಸಚಿವ ಪಾಸ್ವಾನ್ ಮತ್ತು ಉಪೇಂದ್ರ ಕುಶ್ವಾಹ ಭಾಗವಹಿಸಲಿದ್ದಾರೆ.
ಎನ್ ಡಿಎಎ ಎಲ್ಲಾ ಸಂಸದರು, ಶಾಸಕರುಗಳಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.