ಕೇರಳದ ಕಾಲೇಜಿನಲ್ಲಿ ಎಸ್ಎಫ್ಐ ವಿದ್ಯಾರ್ಥಿ ನಾಯಕನ ಕೊಲೆ
ಕೊಚ್ಚಿ, ಜುಲೈ 2: ಕೇರಳದಲ್ಲಿ ಆರ್.ಎಸ್.ಎಸ್ ಮತ್ತು ಸಿಪಿಎಂ ನಡುವಿನ ರಾಜಕೀಯ ಸಂಘರ್ಷ ಹಿಂಸೆಗೆ ತಿರುಗಿದ್ದು ಹಳೆ ವಿಚಾರ. ಇದೀಗ ಸಿಪಿಐಎಂ ಮತ್ತು ಪಿಎಫ್ಐ ಸಂಘಟನೆಗಳ ನಡುವಿನ ಹಿಂಸಾಚಾರ ಕಾಲೇಜಿಗೂ ಕಾಲಿಟ್ಟಿದೆ.
ಭಾನುವಾರ ನಡೆದ ಘಟನೆಯಲ್ಲಿ ಎಸ್ಎಫ್ಐ ವಿದ್ಯಾರ್ಥಿ ನಾಯಕನ ಅಭಿಮನ್ಯು ಎಂಬವನನ್ನು ಎರ್ನಾಕುಲಂನ ಕಾಲೇಜೊಂದರಲ್ಲಿ ಕೊಲೆ ಮಾಡಲಾಗಿದೆ.
ದೈವಸ್ಥಾನದ ಆವರಣ ಗೋಡೆ ಕುಸಿದು ಕಾಲೇಜು ವಿದ್ಯಾರ್ಥಿನಿ ಸಾವು
ಎಸ್ಎಫ್ಐ ಕಾಲೇಜು ನಾಯಕರ ಮೇಲೆ ಇಸ್ಲಾಂ ಪರವಾದ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಸಂಘಟನೆ 'ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ' ಈ ಕೊಲೆ ನಡೆಸಿದೆ ಎನ್ನಲಾಗಿದೆ. ಎರ್ನಾಕುಲಂನ ಮಹಾರಾಜ ಕಾಲೇಜಿಲ್ಲಿ ಈ ಘಟನೆ ನಡೆದಿದೆ.
ಗಾಯಗೊಂಡಿರುವ ಓರ್ವ ವಿದ್ಯಾರ್ಥಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪಿಎಫ್ಐ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಖಂಡಿಸಿ ಸಿಪಿಐಎಂನ ವಿದ್ಯಾರ್ಥಿ ಸಂಘಟನೆ ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ ಇಂದು ಕೇರಳ ರಾಜ್ಯ ಬಂದ್ ಗೆ ಕರೆ ನೀಡಿದೆ.
'ಸ್ಕಾರ್ಫ್' ಬೆಂಬಲಿಸದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ವಿದೇಶದಿಂದ ಬೆದರಿಕೆ
ಸಾವಿಗೀಡಾದ ಅಭಿಮನ್ಯು ಇಡುಕ್ಕಿ ಜಿಲ್ಲೆಯ ವಟ್ಟವಡ ನಿವಾಸಿಯಾಗಿದ್ದಾನೆ. ಈತ ಕಾಲೇಜನಲ್ಲಿ ಎರಡನೇ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ.
ಕಾಲೇಜಿನ ಗೋಡೆಯನ್ನು ಬಳಸಿಕೊಳ್ಳುವ ವಿಚಾರವಾಗಿ ಎರಡೂ ಸಂಘಟನೆಗಳ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿ ಇದು ಕೊಲೆಗೆ ತಿರುಗಿದೆ ಎನ್ನಲಾಗಿದೆ.
ಘಟನೆಯನ್ನು ರಾಜ್ಯಸಭಾ ಸದಸ್ಯ ಪಿ. ರಾಜೀವ್ ಖಂಡಿಸಿದ್ದಾರೆ. "ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಇಂಥಹ ಘೋರ ದಾಳಿಯನ್ನು ನಾವು ನೋಡಿಲ್ಲ. ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿರುವ ಇಂಥಹ ಸಂಘಟನೆಗಳ ವಿರುದ್ಧ ಹೋರಾಡಲು ಎಲ್ಲಾ ಪ್ರಗತಿಪರ ಶಕ್ತಿಗಳು ಮುಂದೆ ಬರಬೇಕು," ಎಂದು ಎರ್ನಾಕುಲಂ ಜಿಲ್ಲೆಯವರೇ ಆದ ಎಸ್ಎಫ್ಐನ ಮಾಜಿ ರಾಜ್ಯ ನಾಯಕರಾದ ಪಿ. ರಾಜೀವ್ ಕರೆ ನೀಡಿದ್ದಾರೆ.