ಭಾರತದ ರಾಜಕಾರಣಿಗಳು, ಲೈಂಗಿಕ ಹಗರಣಗಳು..
ಎಚ್.ವೈ.ಮೇಟಿ-ಲೈಂಗಿಕ ಹಗರಣದಲ್ಲಿ ಕೇಳಿಬಂದಿರುವ ಹೊಸ ಹೆಸರು. ಭಾರತದ ರಾಜಕಾರಣದಲ್ಲಿ ಲೈಂಗಿಕ ಹಗರಣಗಳಲ್ಲಿ ಸಿಲುಕಿ, ಕೆಲ ಬಾರಿ ಆರೋಪ ಕೇಳಿಬಂದು ತಲೆದಂಡವಾದವರ ಪಟ್ಟಿ ತುಂಬ ದೊಡ್ಡದಿದೆ.
ಬೆಂಗಳೂರು, ಡಿಸೆಂಬರ್ 15: ರಾಜಕಾರಣಿಗಳು ಮತ್ತು ಲೈಂಗಿಕ ಹಗರಣಗಳ ಮಧ್ಯೆ ಏನೋ ನಂಟಿರುವಂತಿದೆ. ಬುಧವಾರ ಅದಕ್ಕೆ ಕರ್ನಾಟಕದಲ್ಲಿ ಮತ್ತೊಂದು ನಿದರ್ಶನ ನೋಡಿದ್ವಿ. ಅಬಕಾರಿ ಸಚಿವರಾಗಿದ್ದ ಎಚ್.ವೈ.ಮೇಟಿ ಅವರ ಮೇಲೆ ಅಕ್ಷೇಪಾರ್ಹವಾದ ವಿಡಿಯೋವೊಂದರಲ್ಲಿ ಕಾಣಿಸಿಕೊಂಡ ಆರೋಪ ಬಂದಿದ್ದರಿಂದ ರಾಜೀನಾಮೆ ನೀಡಬೇಕಾಯಿತು.
ಕಳೆದ ತಿಂಗಳಷ್ಟೇ ಕರ್ನಾಟಕದ ಸಚಿವ ತನ್ವೀರ್ ಸೇಠ್ ಅವರು ಅರೆನಗ್ನ ಚಿತ್ರಗಳನ್ನು ನೋಡುತ್ತಿದ್ದರು ಎಂದು ಖಾಸಗಿ ಸುದ್ದಿ ವಾಹಿನಿಯೊಂದ ದೃಶ್ಯಗಳನ್ನು ಪ್ರಸಾರ ಮಾಡಿ, ಸಚಿವರು ವಿವಾದಕ್ಕೆ ಕಾರಣರಾಗಿದ್ದರು. ಅದೂ ರಾಜ್ಯ ಸರಕಾರದ ಕಾರ್ಯಕ್ರಮವೊಂದರಲ್ಲಿ ಅಂಥ ಚಿತ್ರ ನೋಡಿದ ಆರೋಪ ಬಂದಿತ್ತು. ಅವರ ಪಕ್ಷ ಬೆನ್ನಿಗೆ ನಿಂತಿದ್ದರಿಂದ ಸಚಿವ ಸ್ಥಾನದಲ್ಲೇ ಮುಂದುವರಿದಿದ್ದಾರೆ.[ವಿಡಿಯೋ ಬಹಿರಂಗ: ಸಚಿವ ಎಚ್ ವೈ ಮೇಟಿ ರಾಜೀನಾಮೆ ಅಂಗೀಕಾರ]
ದೇಶದ ವಿವಿಧೆಡೆ ಕೇಳಿಬಂದು ಪ್ರಮುಖ ಆರೋಪಗಳು, ಅವುಗಳ ಹಿನ್ನೆಲೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಅಧಿಕಾರ ಇರುವ ವ್ಯಕ್ತಿ ಅದನ್ನು ಹೇಗೆ ಬಳಸಿ ಪ್ರಭಾವ ಬೀರಬಹುದು ಎಂಬುದಕ್ಕೆ ಉದಾಹರಣೆಗಳು ಸಿಗುತ್ತವೆ. ಕೆಲವು ಸಂದರ್ಭದಲ್ಲಿ ಮಹಿಳೆಯರೇ ಬಲಿಬಿದ್ದ ಉದಾಹರಣೆ ಇದ್ದರೆ, ಮುಖಂಡರೇ ಬ್ಲ್ಯಾಕ್ ಮೇಲ್ ಗೆ ಒಳಗಾದ ನಿದರ್ಶನಗಳೂ ಇವೆ.
ಸಚಿವರು ಹಾಗೂ ರಾಜಕಾರಣಿಗಳಾದವರು ಲೈಂಗಿಕ ಹಗರಣಗಳಲ್ಲಿ ಸಿಲುಕಿಕೊಂಡ ಉದಾಹರಣೆಗಳನ್ನು ಒಮ್ಮೆ ಅವಲೋಕಿಸೋಣ.
ಬಾಬುಲಾಲ್ ನಗರ್
2013ರಲ್ಲಿ ರಾಜಸ್ತಾನದ ಮಾಜಿ ಸಚಿವರೊಬ್ಬರ ಮೇಲೆ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಸರಕಾರಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬುದು ಮಹಿಳೆ ಆರೋಪವಾಗಿತ್ತು. ಆ ನಂತರ ಸಚಿವ ಸ್ಥಾನಕ್ಕೆ ಆ ವ್ಯಕ್ತಿ ರಾಜೀನಾಮೆ ನೀಡಿದರು.
ರಾಘವ್ ಜೀ ಲಕ್ಷಮ್ ಸೀ ಸವಳ
ಮಧ್ಯಪ್ರದೇಶ ಸರಕಾರದಲ್ಲಿ ಸಚಿವರಾಗಿದ್ದ ರಾಘವ್ ಜೀ ಲಕ್ಷಮ್ ಸೀ ಸವಳ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಬಂತು. ಸರಕಾರಿ ಕೆಲಸ ಕೊಡಿಸುವ ಆಸೆ ತೋರಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬುದು ಆಕೆ ಆರೋಪವಾಗಿತ್ತು. ಈ ಘಟನೆ ನಡೆದದ್ದು 2013ರಲ್ಲಿ.
ಗೋಪಾಲ್ ಕಂದ
ಹರಿಯಾಣದ ಸಚಿವರಾಗಿದ್ದ ಗೋಪಾಲ್ ಕಂದ ಮೇಲೆ ಗಗನಸಖಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆಕೆಯ ಡೆತ್ ನೋಟ್ ನಲ್ಲಿ ಘಟನೆ ಬಗ್ಗೆ ಬರೆದಿದ್ದರು. ಆ ಸಚಿವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಯಿತು. ಆ ನಂತರ ಬಂಧನವಾಗಿ, ಜಾಮೀನು ಸಿಕ್ಕಿತು. ದೆಹಲಿ ಕೋರ್ಟ್ ಆ ಸಚಿವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಖುಲಾಸೆಗೊಳಿಸಿತು.
ಎನ್.ಡಿ.ತಿವಾರಿ
ಕಾಂಗ್ರೆಸ್ ಮುಖಂಡ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ತಿವಾರಿ 2009ರಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಲೈಂಗಿಕ ಸಂಬಂಧ ಹೊಂದಿದ ಆರೋಪ ಬಂತು. ಅ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಮಹಿಪಾಲ್ ಮದೆರ್ನಾ
ರಾಜಸ್ತಾನದ ಭನ್ವಾರಿ ದೇವಿ ಪ್ರಕರಣ ಎಂದೇ ದೇಶದಾದ್ಯಂತ ಸುದ್ದಿಯಾದ ಪ್ರಕರಣದಲ್ಲಿ ಕೇಳಿಬಂದ ಹೆಸರು 2011ರಲ್ಲಿ ಅಲ್ಲಿನ ಸಚಿವರಾಗಿದ್ದ ಮಹಿಪಾಲ್ ಮದೆರ್ನಾ ಅವರದು. ಭನ್ವಾರಿ ದೇವಿ ಅಪಹರಣವಾದಾಗ ಆಕೆಯ ಪತಿ ಮದೆರ್ನಾ ವಿರುದ್ಧ ಆರೋಪ ಮಾಡುತ್ತಾರೆ. ಸಚಿವರನ್ನು ಲೈಂಗಿಕ ಹಗರಣದ ವಿಡಿಯೋ ಬಿಡುಗಡೆ ಮಾಡುವುದಾಗಿ, ಹಣಕ್ಕೆ ಬ್ಲಾಕ್ ಮೇಲ್ ಮಾಡಲು ಯತ್ನಿಸಿದ್ದಳು ಭನ್ವಾರಿ ದೇವಿ. ಆ ನಂತರ ಸರಕಾರದಿಂದ ಮದೆರ್ನಾ ವಜಾ ಮಾಡಲಾಯಿತು.
ಅಮರ್ ಮಣಿ ತ್ರಿಪಾಠಿ
ಕವಯಿತ್ರಿ ಮಧುಮಿತಾ ಶುಕ್ಲಾ ಕೊಲೆ ಪ್ರಕರಣದ ಆರೋಪದಲ್ಲಿ ಉತ್ತರ ಪ್ರದೇಶದ ಈ ಮಾಜಿ ಸಚಿವನನ್ನು ಜೈಲಿಗೆ ಕಳುಹಿಸಲಾಯಿತು. ಆಕೆ ಗರ್ಭ ಧರಿಸಿದ್ದಳು, ಗರ್ಭಪಾತಕ್ಕೆ ನಿರಾಕರಿಸಿದ್ದಳು. ಆ ನಂತರ ಆಕೆಯನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ತ್ರಿಪಾಠಿಯನ್ನು ಮಾಯಾವತಿ ಸರಕಾರ ಬಲವಂತವಾಗಿ ಸಂಪುಟದಿಂದ ಹೊರಹಾಕಿತ್ತು.
ಪಿಕೆ ಕುನ್ಹಾಲಿ ಕುಟ್ಟಿ
1997ರಲ್ಲಿ ಕೇರಳ ಸರಕಾರದಲ್ಲಿ ಸಚಿವರಾಗಿದ್ದರು ಪಿಕೆ ಕುನ್ಹಾಲಿಕುಟ್ಟಿ. ಕೋಳಿಕ್ಕೋಡ್ ನಲ್ಲಿ ಐಸ್ ಕ್ರೀಂ ಪಾರ್ಲರ್ ಹಾಕಿಕೊಡುವ ಭರವಸೆ ನೀಡಿ ವೇಶ್ಯಾವಾಟಿಕೆಗೆ ಮಹಿಳೆಯನ್ನು ತಳ್ಳುವ ಹುನ್ನಾರವಿತ್ತು ಎಂಬ ಆರೋಪ ಕೇಳಿಬಂದಿತ್ತು. ಕುಟ್ಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಪ್ರಕರಣದಲ್ಲಿ ಅವರನ್ನು ಆರೋಪಿ ಮಾಡಲಿಲ್ಲ.
ಸುರೇಶ್ ರಾಮ್
ಜಗಜೀವನ್ ರಾಮ್ ಅವರ ಮಗ ಸುರೇಶ್ ರಾಮ್ ಅವರು 1978ರಲ್ಲಿ ಲೈಂಗಿಕ ಹಗರಣದಲ್ಲಿ ಸಿಕ್ಕಿದರು. ಮಹಿಳೆಯೊಂದಿಗೆ ಆಪ್ತವಾಗಿದ್ದ ಫೋಟೋಗಳು ಸೂರ್ಯ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದವು.