ಮಾವೋವಾದಿ ಜತೆ ನಂಟು ಶಂಕೆ, ಹಲವು ವಿಚಾರವಾದಿಗಳ ಬಂಧನ, ಆಕ್ರೋಶ
ನವದೆಹಲಿ, ಆಗಸ್ಟ್ 28: ನಿಷೇಧಿತ ಮಾವೋವಾದಿಗಳ ನಂಟು ಶಂಕೆ ಮತ್ತು ಮೋದಿ ಹತ್ಯೆ ಯತ್ನ ಶಂಕೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಇಂದು ಹಲವು ವಿಚಾರವಾದಿಗಳನ್ನು ಬಂಧಿಸಲಾಗಿದೆ. ಬಂಧನದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್, ಲೇಖಕ ಆನಂದ ತೆಲ್ತುಂಬ್ಡೆ, ಮಾನವ ಹಕ್ಕು ಕಾರ್ಯಕರ್ತ ಅರುಣ್, ಪತ್ರಕರ್ತ ಗೌತಮ್, ಮಾನವ ಹಕ್ಕುಗಳ ಕಾರ್ಯಕರ್ತೆ ಸುಸಾನ್ ಅಬ್ರಹಾಂ, ಸಾಮಾಜಿಕ ಹೋರಾಟಗಾರ ಗೊನ್ಸಾಲ್ವಿಸ್ ಅವರುಗಳನ್ನು ವಿಶೇಷ ಪೊಲೀಸರು ಬಂಧಿಸಿದ್ದಾರೆ.
ವಿಚಾರವಾದಿಗಳ ಬಂಧನಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅರುಂಧತಿ ರಾಯ್, ರಾಮಚಂದ್ರ ಗುಹಾ, ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಹಲವು ಚಿಂತಕರು ಈ ಬಂಧನವನ್ನು ಖಂಡಿಸಿದ್ದಾರೆ.
ಅಘೋಷಿತ ತುರ್ತು ಪರಿಸ್ಥಿತಿ ಇದೆ
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಲವು ವಿಚಾರವಾದಿಗಳು, ಲೇಖಕರು, ವಿಚಾರವಾದಿಗಳು ಈ ಘಟನೆಯನ್ನು ಟೀಕಿಸಿದ್ದಾರೆ.
ಅರುಂದತಿ ರಾಯ್ ಆಕ್ರೋಶ
'ಗಲಭೆಕೋರರು, ಕೊಲೆಗಾರರೇ ಸ್ವತಂತ್ರ್ಯವಾಗಿ ಓಡಾಡಿಕೊಂಡಿರುವಾಗ ವಕೀಲರು, ಲೇಖಕರು, ದಲಿತ ಹೋರಾಟಗಾರರನ್ನು ಬಂಧಿಸುತ್ತಿರುವುದು ನಗೆಪಾಟಲಿನ ಸಂಗತಿ, ಬಂಧನ ಸಂವಿಧಾನದ ಉಲ್ಲಂಘನೆ' ಎಂದು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಅರುಂದತಿ ರಾಯ್ ಟೀಕಿಸಿದ್ದಾರೆ.
ರಾಮಚಂದ್ರ ಗುಹಾ ಟೀಕೆ
ಇದು ಅತ್ಯಂತ ಆಘಾತಕಾರಿ, ಸ್ವತಂತ್ರ್ಯ ದನಿಗಳ ಮೇಲಾಗುತ್ತಿರುವ ಕಿರುಕುಳ, ಈ ದೌರ್ಜನ್ಯವನ್ನು ತಡೆಯಲು ಸುಪ್ರೀಂಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ರಾಮಚಂದ್ರ ಗುಹಾ ಹೇಳಿದ್ದಾರೆ.
ಜೆಎನ್ಯು ವಿದ್ಯಾರ್ಥಿಗಳ ಟೀಕೆ
2019ರ ಚುನಾವಣೆ ಸಮೀಪದಲ್ಲಿರುವಾಗ ವಿರೋಧಿಗಳನ್ನು ಕಟ್ಟಿಹಾಕುವ ತಂತ್ರ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಉಮರ್ ಖಾಲಿದ್ ಟ್ವೀಟ್ ಮಾಡಿದ್ದಾರೆ. ಜೆಎನ್ಯು ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಶೀಲಾ ರಶೀದ್ದ ಟ್ವೀಟ್ ಮಾಡಿ 'ವ್ಯವಸ್ಥೆಯನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸುವ ಪ್ರಯತ್ನ ಈ ದಾಳಿ' ಎಂದಿದ್ದಾರೆ.
ತುರ್ತು ಪರಿಸ್ಥಿತಿಯ ಘೋಷಣೆಯೇ ಇದು
ಯಾರು ಸರ್ಕಾರವನ್ನು ಪ್ರಶ್ನಿಸುತ್ತಾರೆಯೋ ಅವರ ಮೇಲೆ ದಾಳಿಗಳಾಗುತ್ತಿವೆ. ಇದು ತುರ್ತು ಪರಿಸ್ಥಿತಿಯ ಸ್ಪಷ್ಟ ಘೋಷಣೆ. ಫ್ಯಾಸಿಸ್ಟ್ ಶಕ್ತಿಯ ಕೋರೆಹಲ್ಲುಗಳು ಈಗ ಹೊರಚಾಚಿಕೊಂಡಿವೆ ಎಂದು ಅವರು ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.