ಭಾರತ-ಚೀನಾ ನಡುವೆ 7ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ
ನವದೆಹಲಿ, ಅಕ್ಟೋಬರ್ 12: ಇಂದು ಭಾರತ ಹಾಗೂ ಚೀನಾ ನಡುವೆ ಏಳನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಹಂತದ ಮಾತುಕತೆ ನಡೆಯಲಿದೆ.
ಸೆಪ್ಟೆಂಬರ್ 21ರಂದು ನಡೆದ ಕಳೆದ ಸಭೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಇದು ಏಳನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಯಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಮಾತುಕತೆಯಿಂದ ಚೀನಾದ ನಿಲುವು ಬದಲಿಸಲು ಸಾಧ್ಯವಿಲ್ಲ: ಅಮೆರಿಕ
ಈ ಹಿಂದಿನ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಯಾವುದೇ ಮಹತ್ವದ ಬೆಳವಣಿಗೆಗಳು ಕಾಣದಿರುವುದರಿಂದ ಇಂದಿನ ಮಾತುಕತೆ ಕೂಡ ಫಲಪ್ರದವಾಗಬಹುದು ಎಂಬ ಯಾವುದೇ ಸೂಚನೆ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಸೇನೆ ಹಿಂತೆಗೆಯಬೇಕೆಂದು ಚೀನಾ ಪಟ್ಟು
ಲಡಾಖ್ನ ದಕ್ಷಿಣ ತೀರ ಪ್ಯಾಂಗಾಂಗ್ ಟ್ಸೊ ಸರೋವರದ ಬಳಿಯಿಂದ ಭಾರತ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಚೀನಾ ಪಟ್ಟುಹಿಡಿದು ಕುಳಿತಿರುವುದರಿಂದ ಈ ಹಿಂದಿನ ಸಭೆಗಳಲ್ಲಿ ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಸಭೆಯಲ್ಲಿ ಪಾಲ್ಗೊಳ್ಳುವವರು ಯಾರು?
ಇಂದಿನ ಕಮಾಂಡರ್ ಮಟ್ಟದ ಮಾತುಕತೆ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರಿಗೆ ಕೊನೆಯ ಸಭೆಯಾಗಿದೆ. ಲೇಹ್ ಮೂಲದ ಮುಂದಿನ ಕಾರ್ಪ್ಸ್ ಕಮಾಂಡರ್ ಆಗಿ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಸಹ ಇಂದಿನ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮುಂದಿನ ತಿಂಗಳು ಭಾರತೀಯ ಮಿಲಿಟರಿ ಅಕಾಡೆಮಿಯ ಕಮಾಂಡೆಂಟ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಎರಡೂ ದೇಶಗಳ ಸಂಧಾನ
ಸೇನೆಯನ್ನು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಎರಡೂ ದೇಶಗಳು ಪರಸ್ಪರ ಸಂಧಾನ ಸೂತ್ರಕ್ಕೆ ಬರಬೇಕಾಗಿದ್ದು ಎರಡೂ ದೇಶಗಳ ಒಪ್ಪಿಗೆಯಿದ್ದರೆ ಮಾತ್ರ ಸೇನೆ ನಿಲುಗಡೆ ಬಗ್ಗೆ ಮಾತುಕತೆ ಮುಂದುವರಿಸಲು ಸಾಧ್ಯ, ಎರಡೂ ದೇಶಗಳು ಒಟ್ಟಿಗೆ ಸೇನೆ ನಿಯೋಜನೆಯನ್ನು ಹಿಂಪಡೆಯಬೇಕೆಂಬುದು ಭಾರತದ ನಿಲುವಾಗಿದೆ.
1959ರಲ್ಲಿ ಗಡಿ ವಾಸ್ತವರೇಖೆ ಒಪ್ಪಂದ
1959ರಲ್ಲಿಯೇ ಗಡಿ ವಾಸ್ತವ ರೇಖೆಯ ಒಪ್ಪಂದ ಆಗಿದ್ದು, ಆಗಿನ ಚೀನಾ ಅಧ್ಯಕ್ಷ ಝುಯು ಎನ್ಲೈ ಅವರು ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಜೊತೆ ಒಪ್ಪಂದ ಮಾಡಿಕೊಂಡರು. ಆದರೆ ಆ ಒಪ್ಪಂದವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ ಎಂಬುದು ಚೀನಾ ವಾದವಾಗಿದೆ.