ಛತ್ತೀಸ್ಗಢದಲ್ಲಿ ಸೇನೆ, ನಕ್ಸಲರ ಮಧ್ಯೆ ಗುಂಡಿನ ಚಕಮಕಿ: 7 ನಕ್ಸಲರ ಹತ್ಯೆ
ರಾಯ್ಪುರ,ಆ.3: ಛತ್ತೀಸ್ಗಢದಲ್ಲಿ ಇಂದು ನಡೆದ ಎನ್ಕೌಂಟರ್ನಲ್ಲಿ 7 ಮಂದಿ ನಕ್ಸಲರನ್ನು ಹತ್ಯೆಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ನಕ್ಸಲರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಛತ್ತೀಸ್ಗಢದ ರಾಜನಂದ್ಗಾವ್ ಜಿಲ್ಲೆಯ ಸೀತಾಗೋತ ಗ್ರಾಮದ ಅರಣ್ಯ ಬಳಿ ಶನಿವಾರ ಜಿಲ್ಲಾ ಮೀಸಲು ದಳ(ಡಿಆರ್ಜಿ) ಯೋಧರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಏಳು ಮಾವೋವಾದಿಗಳು ಹತರಾಗಿದ್ದಾರೆ.
ತುಮಕೂರಿನ ನಕ್ಸಲ್ ದಾಳಿ ಪ್ರಕರಣದಲ್ಲಿ ವರವರ ರಾವ್ ಬೆಂಗಳೂರು ಪೊಲೀಸ್ ವಶ
ಮಾವೋವಾದಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಭದ್ರತಾ ಪಡೆಗಳು ಇಂದು ಭರ್ಜರಿ ಬೇಟೆ ಮೂಲಕ ನಕ್ಸಲರಿಗೆ ಮತ್ತೊಂದು ಭಾರೀ ಹೊಡೆತ ನೀಡಿದ್ದಾರೆ.
ಶುಕ್ರವಾರ ತಡರಾತ್ರಿಯಿಂದಲೇ ಯೋಧರು ಆ ಪ್ರದೇಶವನ್ನು ಸುತ್ತುವರೆದು ನಕ್ಸಲೀಯರಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದರು. ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಯೋಧರು ತಮ್ಮ ಬಳಿ ಬರುತ್ತಿರುವುದನ್ನು ಕಂಡು ಮರೆಯಲ್ಲಿ ಅಡಗಿದ್ದ ಮಾವೋವಾದಿಗಳು ಗುಂಡು ಹಾರಿಸಿದರು.
ಯೋಧರು ಸಹ ಪ್ರತಿಯಾಗಿ ಗುಂಡು ಹಾರಿಸಿದಾಗ ಭೀಕರ ಗುಂಡಿನ ಚಕಮಕಿ ನಡೆಯಿತು. ಈ ಎನ್ಕೌಂಟರ್ನಲ್ಲಿ ಏಳು ನಕ್ಸಲರು ಹತರಾದರು. ಮೃತರ ಬಳಿ ಇದ್ದ ಅಪಾರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ನಕ್ಸಲರಿಗೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಂದರ್ ರಾಜ್ ತಿಳಿಸಿದ್ದಾರೆ.
ಮೃತ ನಕ್ಸಲರಿಂದ ಎಕೆ-47 ರೈಫೆಲ್ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ(ನಕ್ಸಲ್ ನಿಗ್ರಹ ಕಾರ್ಯಾಚರಣೆ) ಪಿ.ಸುಂದರ್ ರಾಜ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಛತ್ತೀಸ್ಗಢದ ನಕ್ಸಲ್ ಪೀಡಿತ ಜಿಲ್ಲೆಗಳಾದ ಸುಕ್ಮಾ, ಬಸ್ತರ್, ಬಿಜಾಪುರ್ ಸೇರಿದಂತೆ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ನಕ್ಸಲ್ ನಿಗ್ರಹ ಪಡೆ ಮಹಿಳೆಯರು ಸೇರಿದಂತೆ ಕೆಲವು ಬಂಡುಕೋರರನ್ನು ಹತ್ಯೆ ಮಾಡಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.