ಗುಜರಾತ್ ಹಿರಿಯ ಮುಖಂಡ ಬವಾಲಿಯಾ ಕಾಂಗ್ರೆಸ್ ಗೆ ಗುಡ್ ಬೈ
ಅಹಮದಾಬಾದ್, ಜುಲೈ 3: ಹಿರಿಯ ಕಾಂಗ್ರೆಸ್ ಮುಖಂಡ, ಹಿಂದುಳಿದ ಸಮುದಾಯದ ಪ್ರಮುಖಕ ನಾಯಕ ಮತ್ತಯ ನಾಲ್ಕು ಬಾರಿಯ ಶಾಸಕ ಕುನ್ವರ್ಜಿ ಬವಾಲಿಯಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಗುಜರಾತ್ ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಸೇರಲು ಮುಂದಾಗಿದ್ದಾರೆ.
ಜಸ್ದನ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಗುಜರಾತ್ ವಿಧಾನಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರಿಗೆ ಬವಾಲಿಯಾ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಅವರು ನೇರವಾಗಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಕೋಲಿ ಸಮುದಾಯದಾ ಪ್ರಭಾವಿ ನಾಯಕ ಬವಾಲಿಯಾ ರಾಜೀನಾಮೆ 2019ರ ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್ ಕಾಂಗ್ರೆಸ್ ಬಿದ್ದ ಬಹುದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಲ್ಲಿಸಿದ ತಮ್ಮ ರಾಜೀನಾಮೆ ಒತ್ರದಲ್ಲಿ ಬವಾಲಿಯಾ ಗುಜರಾತ್ ಕಾಂಗ್ರೆಸ್ ಕಾರ್ಯ ವಿಧಾನದ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಕೇವಲ ತಿಂಗಳ ಹಿಂದೆಯಷ್ಟೇ ಬವಾಲಿಯಾರನ್ನು ರಾಹುಲ್ ಗಾಂಧಿ ದೆಹಲಿಗೆ ಕರೆಸಿಕೊಂಡು ಮಾತನಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ಮಾತುಕತೆ ಫಲಪ್ರದವಾಗಿಲ್ಲ ಎಂದುದಕ್ಕೆ ಸಾಕ್ಷಿಯಾಗಿ ಬವಾಲಿಯಾ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.
ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಜೀತು ವಘಾನಿ ನೇತೃತ್ವದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ವಕ್ತಾರ ಭರತ್ ಪಾಂಡ್ಯ ಹೇಳಿದ್ದಾರೆ.