ಭದ್ರತೆಗೆ ನಮ್ಮ ಮೊದಲ ಆದ್ಯತೆ: ಚೀನಾದಲ್ಲಿ ಮೋದಿ
ಶಾಂಘೈ, ಜೂನ್ 10: ಚೀನಾದ ಕ್ವಿಂಡಾವೋದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ಶೃಂಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭದ್ರತೆಯೇ ನಮ್ಮ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದ್ದಾರೆ.
ಶೃಂಗ ಸಭೆಯ ಪ್ಲೀನರಿ ಸೆಷನ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಭಯೋತ್ಪಾದನೆಯ ಪರಿಣಾಮಗಳಿಗೆ ಅಫ್ಘಾನಿಸ್ತಾನ ಒಂದು ದುರಾದೃಷ್ಟಕರ ಉದಾಹರಣೆಯಾಗಿದೆ. ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಧ್ಯಕ್ಷ ಅಶ್ರಫ್ ಘನಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಈ ಪ್ರಾಂತ್ಯದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ," ಎಂದು ಹೇಳಿದರು.
ಚೀನಾಕ್ಕೆ ರಫ್ತಾಗಲಿದೆ ಭಾರತದ ಅಕ್ಕಿ: ಎರಡು ಒಪ್ಪಂದಗಳಿಗೆ ಸಹಿ
ಭದ್ರತೆ ನಮ್ಮ ಮೊದಲ ಆದ್ಯತೆಯ ವಿಷಯ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ SECURE ಮಂತ್ರವನ್ನು ಜಪಿಸಿದರು. S ಅಂದರೆ ಜನರಿಗೆ ಭದ್ರತೆ, E ಎಂದರೆ ಆರ್ಥಿಕ ಅಭಿವೃದ್ಧಿ, C ಅಂದರೆ ಪ್ರಾದೇಶಿಕ ಸಂಪರ್ಕ, U ಅಂದರೆ ಏಕತೆ, R ಅಂದರೆ ಸಾರ್ವಭೌಮತೆಯೆಡೆಗಿನ ಗೌರವ, E ಎಂದರೆ ಪರಿಸರದ ರಕ್ಷಣೆ ಎಂದು ವಿವರಿಸಿದರು.
ಇವತ್ತು ಶಾಂಘೈ ಸಹಕಾರ ಸಂಘಕ್ಕೆ ಸೇರಿದ ದೇಶಗಳ ಕೇವಲ ಶೇ. 6ರಷ್ಟು ಪ್ರವಾಸಿಗರು ಮಾತ್ರ ಭಾರತಕ್ಕೆ ಬರುತ್ತಾರೆ. ಇದನ್ನು ಸುಲಭವಾಗಿ ದ್ವಿಗುಣಗೊಳಿಸಬಹುದು. ನಮ್ಮಲ್ಲೇ ಹಂಚಿಕೊಂಡಿರುವ ನಮ್ಮ ಸಂಸ್ಕೃತಿಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ಇದನ್ನು ಸಾಧಿಸಬಹುದು ಎಂದು ಪ್ರಧಾನಿ ಹೇಳಿದರು.
ನಾವು ಶಾಂಘೈ ಸಹಕಾರ ಸಂಸ್ಥೆಗೆ ಸೇರಿದ ದೇಶಗಳ ಆಹಾರ ಮೇಳ ಮತ್ತು ಬೌದ್ಧರ ಹಬ್ಬಗಳನ್ನು ಭಾರತದಲ್ಲಿ ಆಯೋಜನೆ ಮಾಡಲಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಈ ಶೃಂಗ ಸಭೆಯಲ್ಲಿ ಪಾಲ್ಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿಯೀಗ ಭಾರತಕ್ಕೆ ಹೊರಟಿದ್ದಾರೆ. ಕಳೆದ 5 ವಾರಗಳಲ್ಲಿ ಪ್ರಧಾನಿ ಕೈಗೊಂಡ ಎರಡನೇ ಚೀನಾ ಪ್ರವಾಸ ಇದಾಗಿದೆ. ಈ ಹಿಂದೆ ಏಪ್ರಿಲ್ 27 ಮತ್ತು 28ರಂದು ಮೋದಿ ಚೀನಾದ ವುಹಾನ್ ಗೆ ಭೇಟಿ ನೀಡಿದ್ದರು.