ಸಗಣಿ ಚಿಪ್ನಿಂದ ಮೊಬೈಲ್ ರೇಡಿಯೇಷನ್ ಕಡಿಮೆಯಾಗಲಿದೆ ಎಂಬುದನ್ನು ಸಾಬೀತುಪಡಿಸಿ: ತಜ್ಞರು
ನವದೆಹಲಿ, ಅಕ್ಟೋಬರ್ 19: ಸಗಣಿಯಿಂದ ತಯಾರಿಸಲಾಗಿರುವ ಚಿಪ್ನಿಂದ ಮೊಬೈಲ್ನಿಂದ ಹೊರಹೊಮ್ಮುವ ವಿಕಿರಣ ಕಡಿಮೆ ಮಾಡಬಹುದು ಎಂದು ರಾಷ್ಟ್ರೀಯ ಕಾಮಧೇನು ಆಯೋಗ ಹೇಳಿತ್ತು.
ಇದೀಗ ತಜ್ಞರು ಅದನ್ನು ಸಾಬೀತುಪಡಿಸುವಂತೆ ಒತ್ತಾಯಿಸುತ್ತಿದ್ದಾರೆ. ನದ ಸಗಣಿಯಿಂದ ಮಾಡಿದ ಚಿಪ್ ಮೊಬೈಲ್ ರೇಡಿಯೇಷನ್ನ್ನು ಕಡಿಮೆ ಮಾಡುತ್ತದೆ ಎಂಬ ನಿಮ್ಮ ಹೇಳಿಕೆಯನ್ನು ಸಾಬೀತುಪಡಿಸಿ ಎಂದು 600ಕ್ಕೂ ಹೆಚ್ಚು ವಿಜ್ಞಾನಿಗಳು ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ಕಥಿರಿಯಾ ಅವರಿಗೆ ಪತ್ರ ಬರೆದಿದ್ದಾರೆ.
ಮೊಬೈಲ್ ರೇಡಿಯೇಷನ್ ಕಡಿಮೆ ಮಾಡಲು 'ಸಗಣಿ ಚಿಪ್'
ಕಳೆದ ವಾರವಷ್ಟೇ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ್ಭಾಯಿ ಕಥಿರಿಯಾ ಅವರು, ದನದ ಸಗಣಿಯಿಂದ ತಯಾರಿಸಿದ ಚಿಪ್ನ್ನು ಬಿಡುಗಡೆಗೊಳಿಸಿದ್ದರು. ಬಳಿಕ ಇದರ ಬಳಕೆಯಿಂದ ಮೊಬೈಲ್ ಹ್ಯಾಂಡ್ಸೆಟ್ಗಳಿಂದ ಹೊರಸೂಸುವ ರೇಡಿಯೇಷನ್ ತಡೆಯಬಹುದು ಎಂದು ಹೇಳಿದ್ದರು.
ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ. ಇದು ವಿಕಿರಣ ವಿರೋಧಿಯಾಗಿದ್ದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೊಂದು ರೇಡಿಯೇಷನ್ ಚಿಪ್ ಆಗಿದ್ದು, ಮೊಬೈಲ್ ಫೋನ್ಗಳ ರೇಡಿಯೇಷನ್ ತಡೆಯಲು ಇವನ್ನು ಮೊಬೈಲ್ನಲ್ಲಿ ಬಳಸಬಹುದು. ಖಾಯಿಲೆಗಳಿಂದಲೂ ಇದು ರಕ್ಷಿಸಲಿದೆ ಎಂದು ತಿಳಿಸಿದ್ದರು.
ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ನ ಮುಂಬೈ ಅಧ್ಯಾಯದ ಹೇಳಿಕೆಯಲ್ಲಿ ದನದ ಸಗಣಿಯಿಂದ ಮಾಡಿದ ಚಿಪ್ ಮೊಬೈಲ್ ರೇಡಿಯೇಷನ್'ನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಯಾವ ವಿಜ್ಞಾನಿಗಳು, ಎಲ್ಲಿ ಪ್ರಯೋಗಗಳನ್ನು ನಡೆಸಿದ್ದಾರೆ.
ಅಧ್ಯಯನದ ಪ್ರಮುಖ ಸಂಶೋಧಕರು ಯಾರು, ಸಂಶೋಧನೆಯ ವರದಿಯನ್ನು ಎಲ್ಲಿ ಪ್ರಕಟಿಸಲಾಗಿದೆ ಎಂಬೆಲ್ಲಾ ಮಾಹಿತಿಗಳನ್ನು ನೀಡಿ ಎಂದು ವಿಜ್ಞಾನಿಗಳು ಕೇಳಿದ್ದಾರೆ.