ಶೇ 50 ಜನಸಂಖ್ಯೆಗೆ ಕೊರೊನಾ ಸೋಂಕು: ಸಮಿತಿ ಹೇಳಿಕೆಯನ್ನು ಪ್ರಶ್ನಿಸಿದ ವಿಜ್ಞಾನಿಗಳು
ನವದೆಹಲಿ, ಅಕ್ಟೋಬರ್ 20: ಭಾರತದಲ್ಲಿ 2021ರ ಫೆಬ್ರವರಿ ಅಂತ್ಯದ ವೇಳೆಗೆ ಕೊರೊನಾ ವೈರಸ್ ಸೋಂಕಿನ ಪಿಡುಗು ದೇಶದ ಅರ್ಧದಷ್ಟು ಜನಸಂಖ್ಯೆಗೆ ತಗುಲಲಿದ್ದು, ಕೋವಿಡ್ ನಿಯಂತ್ರಣಕ್ಕೆ ಬರಲಿದೆ ಎಂಬ ಕೇಂದ್ರ ಸರ್ಕಾರದಿಂದ ನೇಮಕಗೊಂಡ ವೈಜ್ಞಾನಿಕ ಸಮಿತಿಯ ಹೇಳಿಕೆಯನ್ನು ಅನೇಕ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ. ಭಾರತದ 1.3 ಬಿಲಿಯನ್ ಜನಸಂಖ್ಯೆಯಲ್ಲಿ ಕನಿಷ್ಢ ಶೇ 50ರಷ್ಟು ಮಂದಿಗೆ ಸೋಂಕು ಹರಡಲಿದೆ ಎಂಬ ತೀರ್ಮಾನಕ್ಕೆ ಬರಲು ಸಮಿತಿ ಅನುಸರಿಸಿದ ಮಾದರಿ ಯಾವುದು ಎಂದು ಕೇಳಿದ್ದಾರೆ.
'ಸುದೀರ್ಘ ಕಾಲದ ಊಹೆಗಳ ಬಗ್ಗೆ ನನಗೆ ಬಹಳ ಸಂದೇಹಗಳಿವೆ. ವಿಸ್ತೃತ ಸ್ವರೂಪದ ಹೇಳಿಕೆಗಳೂ ಅನುಮಾನಾಸ್ಪದವಾಗಿವೆ. ಆದರೆ ಈ ಹೇಳಿಕೆ ಮಾತ್ರ ತೀರಾ ಅಸಮಂಜಸ' ಎಂದು ಚೆನ್ನೈನ ಗಣಿತ ವಿಜ್ಞಾನಗಳ ಸಂಸ್ಥೆಯ ಪ್ರೊಫೆಸರ್ ಒಬ್ಬರು ಹೇಳಿದ್ದಾರೆ.
ಭಾರತದಲ್ಲಿ 100ರಲ್ಲಿ 50 ಮಂದಿಗೆ ಕೊರೊನಾವೈರಸ್ ಪಕ್ಕಾ!
ಮಾರ್ಚ್ ತಿಂಗಳಲ್ಲಿ ಯಾವುದೇ ರೀತಿಯ ದಾಖಲೆಗಳು ಇರಲಿಲ್ಲ. ಅಕ್ಟೋಬರ್ ವೇಳೆಗೆ ವಾಸ್ತವ ದಾಖಲೆಗಳ ಆಧಾರದಲ್ಲಿ ಪಡೆದ ರಾಜ್ಯ ಮಟ್ಟದ ಅಂದಾಜು ದಾಖಲೆಗಳು ಕೂಡ ಲಭ್ಯವಿಲ್ಲದಿರುವುದು ಅಕ್ಷಮ್ಯ. ಯಾವ ಅಂದಾಜಿನ ಮೇಲೆ ಸಮಿತಿಯು ಈ ಲೆಕ್ಕಾಚಾರಕ್ಕೆ ಬಂದಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಮುಂದೆ ಓದಿ.
ಐಸಿಎಂಆರ್ ಡೇಟಾ ಬಳಸಿಲ್ಲ
ರಾಷ್ಟ್ರೀಯ ಮಟ್ಟದ ಕೊರೊನಾ ವೈರಸ್ ಪ್ರಕರಣಗಳ ಪ್ರಮಾಣ ಅಳೆಯುವ ಮಾದರಿಯಲ್ಲಿ ಶೇ 10ರಷ್ಟು ಸಂಭಾವ್ಯ ದೋಷಗಳಿವೆ. ಇದೇ ಮಾದರಿಯನ್ನು ರಾಜ್ಯ ಅಥವಾ ಜಿಲ್ಲಾವಾರು ಪರಿಸ್ಥಿತಿಯನ್ನು ಮಾಪನ ಮಾಡಲು ಬಳಸಿದರೆ ಈ ದೋಷದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಸರ್ಕಾರದ ಸಮಿತಿಯ ಸದಸ್ಯರಾಗಿರುವ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಗಣಿತ ಪ್ರೊಫೆಸರ್ ಮಣೀಂದ್ರ ಅಗರವಾಲ್ ಸಮರ್ಥಿಸಿಕೊಂಡಿರುವುದಾಗಿ 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳನ್ನು ಬಳಸಿಕೊಂಡು ತನ್ನ 'ಸೂಪರ್ ಮಾಡೆಲ್' ಅನ್ನು ಸಮಿತಿ ತಯಾರಿಸಿದೆ. ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದ (ಐಸಿಎಂಆರ್) ಅಧಿಕೃತ ಡೇಟಾಗಳನ್ನು ಅದು ಬಳಸಿಕೊಂಡಿಲ್ಲ.
ಸರ್ಕಾರದ ಸಮರ್ಥನೆ ಪ್ರಯತ್ನ
ಕೇಂದ್ರ ಸರ್ಕಾರವು ಈಗಾಗಲೇ ತೆಗೆದುಕೊಂಡಿರುವ ಕ್ರಮಗಳನ್ನು ಸಮರ್ಥಿಸುವಂತಹ ತೀರ್ಮಾನಕ್ಕೆ ಬರಲು ಈ ಸಮಿತಿಯು ಹೇಗೆ ಸರಳೀಕೃತ ಮಾದರಿಯನ್ನು ಬಳಸಿಕೊಂಡಿದೆ ಎಂದು ವೈಜ್ಞಾನಿಕ ವಲಯದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಸಮುದಾಯ ಪ್ರಸರಣ
'ಹೆಸರಾಂತ ವಿಜ್ಞಾನಗಳು ಅತ್ಯಂತ ಪೇಲವ ಕೆಲಸದ ದಾಖಲೆಯಲ್ಲಿ ತಮ್ಮ ಹೆಸರನ್ನು ಹಾಕಿಕೊಳ್ಳುವುದನ್ನು ಕಂಡು ಅಚ್ಚರಿಯಾಗುತ್ತಿದೆ. ಇದು ಒಂದು ರಾಜಕೀಯ ಚಟುವಟಿಕೆಯಂತೆ ಕಾಣಿಸುತ್ತದೆ' ಎಂದು ಐಎಂಎಸ್ಸಿಯ ಮತ್ತೊಬ್ಬ ಪ್ರೊಫೆಸರ್ ಹೇಳಿದ್ದಾರೆ.
ಆರೋಪ ನಿರಾಕರಿಸಿದ ಸಮಿತಿ
ಈ ಆರೋಪಗಳನ್ನು ನಿರಾಕರಿಸಿರುವ ಅಗರವಾಲ್, ಸರ್ಕಾರದ ನೀತಿಗಳು ಈ ಅಂತಿಮ ಅಭಿಪ್ರಾಯ ಬೆಂಬಲಿಸಿದರೆ ನಾವೇನು ಮಾಡಲು ಸಾಧ್ಯವಿಲ್ಲ. ಆದರೆ ಇದರಲ್ಲಿ ರಾಜಕೀಯ ಹಸ್ತಕ್ಷೇಪ ಖಂಡಿತಾ ಇಲ್ಲ' ಎಂದಿದ್ದಾರೆ.
'ನಾವು ಎಲ್ಲ ವಿಜ್ಞಾನಿಗಳಿಗೂ ಪತ್ರ ಬರೆದಿದ್ದೆವು. ನಮಗೆ ಬಂದ 30 ಪ್ರಸ್ತಾವಗಳಲ್ಲಿ ಎರಡು ಮಾದರಿಗಳನ್ನು ಆಯ್ಕೆ ಮಾಡಿಕೊಂಡಿದ್ದೆವು. ಈ ಮಾದರಿಗಳನ್ನು ಸುಧಾರಿಸಲು ಜತೆಯಾಗಿ ಕೆಲಸ ಮಾಡಲು ಸಮಿತಿ ನಿರ್ಧರಿಸಿತ್ತು. ಇದರಲ್ಲಿ ಪಾತ್ರ ವಹಿಸಿದ ವಿಜ್ಞಾನಿಗಳಿಗೆ ಸೂಕ್ತ ಮನ್ನಣೆ ನೀಡಲಾಗಿದೆ' ಎಂದು ಪ್ರಕ್ರಿಯೆಯನ್ನು ವಿವರಿಸಿದ್ದಾರೆ.
ಲಾಕ್ಡೌನ್ ನಿರ್ಧಾರದ ಪ್ರಶ್ನೆ
ನರೇಂದ್ರ ಮೋದಿ ಅವರ ಸರ್ಕಾರ ಮಾರ್ಚ್ ತಿಂಗಳಲ್ಲಿ ತೆಗೆದುಕೊಂಡ ಲಾಕ್ಡೌನ್ ನಿರ್ಧಾರ ಅತ್ಯಂತ ನಿಖರ ಸಮಯದಲ್ಲಿ ಕೈಗೊಂಡ ತೀರ್ಮಾನ ಎಂದೂ ಸಮಿತಿ ಅಭಿಪ್ರಾಯಕ್ಕೆ ಬಂದಿದೆ. ಇದನ್ನು ಕೂಡ ವಿಜ್ಞಾನಿಗಳು ಪ್ರಶ್ನಿಸಿದ್ದಾರೆ.
'ಸಮಿತಿ ಹೇಳಿರುವುದಕ್ಕೆ ವಿರುದ್ಧವಾಗಿ ವಲಸೆ ಕಾರ್ಮಿಕರು ತಮ್ಮ ಮೂಲ ರಾಜ್ಯಗಳಿಗೆ ಮರಳುವುದು ವಿಳಂಬವಾಗಿರುವುದು ಕೂಡ ಕಾಯಿಲೆ ಹರಡಲು ನೆರವಾಗಿದೆ' ಎಂದು ತಜ್ಞರು ಹೇಳಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಚಲನೆಯು ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಬದಲಿಸುವಲ್ಲಿ ಯಾವುದೇ ಪ್ರಮುಖ ಪರಿಣಾಮಬೀರಿಲ್ಲ ಎಂದು ಸಮಿತಿ ಹೇಳಿದೆ. ಈ ಹೇಳಿಕೆಗೆ ಯಾವುದೇ ಮಾದರಿ ಆಧಾರವಿಲ್ಲ. ವಲಸೆ ಕಾರ್ಮಿಕರ ಬಗ್ಗೆ ಅಧ್ಯಯನಕ್ಕೆ ಈ ಮಾದರಿಯಲ್ಲಿ ಅವಕಾಶವೂ ಇಲ್ಲ ಎಂದು ತಂತ್ರಜ್ಞರೊಬ್ಬರು ಹೇಳಿದ್ದಾರೆ.
ಶೇ 50ರಷ್ಟು ಜನರಿಗೆ ಸೋಂಕು
ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಬೆಳವಣಿಗೆಯನ್ನು ಸಮಿತಿ ಅಧ್ಯಯನ ಮಾಡಿದೆ. ಆದರೆ ಸುಮಾರು ಒಂದು ತಿಂಗಳವರೆಗೆ ವಲಸೆ ಕಾರ್ಮಿಕರನ್ನು ಬಿಟ್ಟುಕೊಳ್ಳದ ಪಶ್ಚಿಮ ಬಂಗಾಳವನ್ನು ಪರಿಗಣಿಸಿಲ್ಲ ಎಂದು ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ.
ಗಣಿತ ಮಾದರಿಯಲ್ಲಿ ಭಾರತದ ಕೊರೊನಾ ವೈರಸ್ ಪ್ರಕರಣಗಳನ್ನು ಅಂದಾಜಿಸಲಾಗುತ್ತಿದ್ದು, ದೇಶದಲ್ಲಿ ಶೇ 30ರಷ್ಟು ಜನಸಂಖ್ಯೆಗೆ ಈಗ ಸೋಂಕು ತಗುಲಿದೆ. ಫೆಬ್ರವರಿ ಅಂತ್ಯದ ವೇಳೆಗೆ ಶೇ 50ರಷ್ಟು ಮಂದಿಗೆ ಸೋಂಕು ತಗುಲಲಿದೆ ಎಂದು ಸಮಿತಿ ಹೇಳಿತ್ತು.
Recommended Video