ಭಾರತದ ಯಾವ ರಾಜ್ಯಗಳಲ್ಲಿ ಯಾವಾಗ ತೆರೆಯುತ್ತೆ ಶಾಲಾ-ಕಾಲೇಜು?
ನವದೆಹಲಿ, ನವೆಂಬರ್.20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹತೋಟಿಗೆ ಬಂತು ಎನ್ನುವಷ್ಟರಲ್ಲೇ ಸೋಕಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ದೇಶದಲ್ಲಿ 47 ದಿನಗಳ ಬಳಿಕ ಮೊದಲ ಬಾರಿಗೆ ಕೊವಿಡ್-19 ಸೋಂಕಿತರ ಸಂಖ್ಯೆಯು ಗುಣಮುಖರ ಸಂಖ್ಯೆಗಿಂತ ಹೆಚ್ಚಾಗಿದೆ.
ದೇಶದಲ್ಲಿ ಒಂದೇ ದಿನ ಒಂದೇ ದಿನ 45,882 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 90,04,366ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ44,807 ಮಂದಿ ಸೋಂಕಿತರು ಗುಣಮುಖರಾಗಿದ್ದು, 584 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಮಹಾಮಾರಿಗೆ ಈವರೆಗೂ 1,32,162. ಮಂದಿ ಪ್ರಾಣ ಬಿಟ್ಟಿದ್ದಾರೆ. 84,28,410 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 4,43,794 ಸಕ್ರಿಯ ಪ್ರಕರಣಗಳಿವೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
ಕೊವಿಡ್ 19: ಡಿಸೆಂಬರ್ 31ರವರೆಗೂ ಮುಂಬೈನ ಶಾಲೆಗಳು ಬಂದ್
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ದೇಶದ ಪ್ರಮುಖ ನಗರಗಳಲ್ಲಿ ಶಾಲಾ-ಕಾಲೇಜುಗಳ ಪುನಾರಂಭದ ಆದೇಶವನ್ನು ತಡೆ ಹಿಡಿಯಲಾಗಿದೆ. ದೇಶದ ಪ್ರಮುಖ ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೇಗಿದೆ. ನವದೆಹಲಿ, ಮುಂಬೈ, ಹರಿಯಾಣ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಚಿತ್ರಣದ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಮುಂಬೈನಲ್ಲಿ ಡಿಸೆಂಬರ್.31ರವರೆಗೂ ಶಾಲೆ ತೆರೆಯಲ್ಲ
ಮಹಾರಾಷ್ಟ್ರದ ಮುಂಬೈನಲ್ಲಿ ಕೊವಿಡ್-19 ಸೋಂಕಿನ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಾಗಿದೆ. ಡಿಸೆಂಬರ್.31ರವರೆಗೂ ಮುಂಬೈನಲ್ಲಿ ಶಾಲೆಗಳನ್ನು ತೆರೆಯದಿರಲು ಮುಂಬೈ ಮಹಾನಗರ ಪಾಲಿಕೆಯು ಆದೇಶ ಹೊರಡಿಸಿದೆ. ರಾಜ್ಯದ ಇತರೆ ಭಾಗಗಳಲ್ಲಿ ನವೆಂಬರ್.23ರಿಂದ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಾಲೆಗಳು ಪುನಾರಂಭವಾಗಲಿದ್ದು, ಕೊರೊನಾವೈರಸ್ ಶಿಷ್ಟಾಚಾರ ಮತ್ತು ಮಾರ್ಗಸೂಚಿ ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ನ.30ರವರೆಗೂ ಹರಿಯಾಣದಲ್ಲಿ ಶಾಲೆ ತೆರೆಯಲ್ಲ
ಹರಿಯಾಣದಲ್ಲಿ ಶಾಲೆ ತೆರೆದ ಕೆಲವೇ ದಿನಗಳಲ್ಲಿ 12 ಸರ್ಕಾರಿ ಶಾಲೆಗಳ 72 ವಿದ್ಯಾರ್ಥಿಗಳಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ರಾಜ್ಯದ ರೇವಾರಿ, ಝಜ್ಜರ್, ಜಿಂದ್, ಹಿಸಾರ್ ಮತ್ತು ರೊಹ್ಟಕ್ ಜಿಲ್ಲೆಗಳಲ್ಲಿನ 180ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್.30ರವರೆಗೂ ಶಾಲೆಗಳನ್ನು ತೆರೆಯದಿರಲು ಸರ್ಕಾರವು ಆದೇಶಿಸಿದೆ.
ಶಾಲೆ ಪುನಾರಂಭ ಆದೇಶಕ್ಕೆ ಗುಜರಾತ್ ಸರ್ಕಾರದ ತಡೆ
ಗುಜರಾತ್ ನಲ್ಲಿ ನವೆಂಬರ್.23ರಿಂದ ಶಾಲೆ ಮತ್ತು ಕಾಲೇಜುಗಳ ಪುನಾರಂಭಕ್ಕೆ ಈ ಮೊದಲು ರಾಜ್ಯ ಸರ್ಕಾರವು ಆದೇಶ ನೀಡಿತ್ತು. ಆದರೆ ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, ನೆರೆ ರಾಜ್ಯಗಳಲ್ಲಿ ಶಾಲೆ ಪುನಾರಂಭದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದ್ದಕ್ಕೆ ಸರ್ಕಾರವು ಮುನ್ನೆಚ್ಚರಿಕೆ ವಹಿಸಿದೆ. 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್.23ರಿಂದ ಶಾಲೆ ಪುನಾರಂಭಿಸುವ ಆದೇಶಕ್ಕೆ ತಡೆಯಾಜ್ಞೆ ವಿಧಿಸಲಾಗಿದೆ.
Recommended Video
ಈ ರಾಜ್ಯಗಳಲ್ಲಿ ಶಾಲಾ-ಕಾಲೇಜು ಪುನಾರಂಭದ ದಿನಾಂಕವಿಲ್ಲ
ದೇಶದಲ್ಲಿ ದೀಪಾವಳಿ ನಂತರ ಕೊರೊನಾವೈರಸ್ ಸೋಂಕಿನ ಭೀತಿ ಹೆಚ್ಚಾಗಿದೆ. ಕೊವಿಡ್-19 ಮೂರನೇ ಅಲೆಗೆ ನವದೆಹಲಿಯಂತೂ ತತ್ತರಿಸಿ ಹೋಗಿದೆ. ಈ ಹಿನ್ನೆಲೆ ನವದೆಹಲಿ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ಮತ್ತು ಕರ್ನಾಟಕದ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳ ಪುನಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ರೀತಿ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಈ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನು ಕೊವಿಡ್-19 ಪರಿಸ್ಥಿತಿಯನ್ನು ನೋಡಿಕೊಂಡು ಪುನಾರಂಭಿಸುವುದಕ್ಕೆ ಸರ್ಕಾರವು ಚಿಂತಿಸುತ್ತಿದೆ ಎಂದು ತಿಳಿದು ಬಂದಿದೆ.