ಗರ್ಭಿಣಿಯರಿಗೆ ಕೊರೊನಾ ಲಸಿಕೆ; ಕೇಂದ್ರದ ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ
ನವದೆಹಲಿ, ಸೆಪ್ಟೆಂಬರ್ 20: ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಆದ್ಯತೆಯಲ್ಲಿ ಕೊರೊನಾ ಲಸಿಕೆ ನೀಡುವ ಸಂಬಂಧ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯ ಪೀಠವು ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಡಿಸಿಪಿಸಿಆರ್) ಮನವಿ ಮೇರೆಗೆ ಕೇಂದ್ರಕ್ಕೆ ನೋಟೀಸ್ ನೀಡಿದೆ ಹಾಗೂ ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಹೇಳಿದೆ.
ಪ್ರತಿಯೊಬ್ಬ ಗರ್ಭಿಣಿಯೂ ಕೊರೊನಾ ಲಸಿಕೆ ಪಡೆಯುವಂತೆ ಸಿಡಿಸಿ ಸೂಚನೆ
ಡಿಸಿಪಿಸಿಆರ್ ಪರ ಹಾಜರಾದ ವಕೀಲರಾದ ವೃಂದಾ ಗ್ರೋವರ್, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಹಾಕಲು ಮಾರ್ಗಸೂಚಿ ನೀಡಿದೆ. ಆದರೆ ಈಗ ಲಸಿಕೆಯಿಂದಾಗಿ ಗರ್ಭಿಣಿಯರ ಮೇಲೆ ಕೆಲವು ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಹೇಳುತ್ತಿದೆ. ಹೀಗಾಗಿ ಈ ಕುರಿತು ಕೇಂದ್ರ ಸ್ಪಷ್ಟ ವಿವರ ನೀಡಬೇಕು. ಇಂಥ ಮಹಿಳೆಯರನ್ನು ನಿರ್ದಿಷ್ಟ ವರ್ಗವಾಗಿ ಗುರಿತಿಸಿ ಲಸಿಕೆ ನೀಡಲು ಘೋಷಿಸುವ ಅಗಶ್ಯಕತೆಯಿದೆ ಹಾಗೂ ಕೊರೊನಾ ಲಸಿಕೆ ಪರಿಣಾಮಗಳ ಕುರಿತು ನಿರಂತರ ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಕೊರೊನಾ ಲಸಿಕೆ ನೀಡಲು ನೋಂದಣಿಗೆ ಒಂದು ನಿರ್ದಿಷ್ಟ ವೇದಿಕೆ ರಚಿಸುವ ಅವಶ್ಯಕತೆ ಇದೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ಆರ್ಟಿಕಲ್ 32ರ ಅಡಿಯಲ್ಲಿ ಡಿಸಿಪಿಸಿಆರ್ ಈ ವರ್ಷದ ಮೇ ತಿಂಗಳಿನಲ್ಲಿ, ಅಂದರೆ ಕೊರೊನಾ ಎರಡನೇ ಅಲೆ ಸಂದರ್ಭ ಅರ್ಜಿ ಸಲ್ಲಿಸಿತ್ತು. ಆನಂತರ ಗರ್ಭಿಣಿಯರಿಗೆ ಹಾಗೂ ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಲು ಕೇಂದ್ರ ಮಾರ್ಗಸೂಚಿ ಹೊರಡಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ನ್ಯಾಯಾಲಯ ನೋಟೀಸ್ ನೀಡಿದ್ದು, ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕಾಗಿ ಆದೇಶಿಸಿದೆ.
ಕರ್ನಾಟಕದಲ್ಲಿ ಕೊರೊನಾ ಲಸಿಕೆ ಪಡೆದ ಗರ್ಭಿಣಿಯರೆಷ್ಟು?
ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಕೊರೊನಾ ಲಸಿಕೆ ನೀತಿ ಹಾಗೂ ಮುಂದಿನ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ತಿಳಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಾಯವನ್ನು ಉನ್ನತ ನ್ಯಾಯಾಲಯ ಕೋರಿದೆ.
ಪ್ರತಿಯೊಬ್ಬ ಗರ್ಭಿಣಿಯೂ ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ದಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಬೋರ್ಡ್ ಕೂಡ (ಸಿಡಿಸಿ) ಸೂಚನೆ ನೀಡಿತ್ತು .ಡೆಲ್ಟಾ ಪ್ಲಸ್ ಸೋಂಕಿನ ವಿರುದ್ಧ ಹೋರಾಡಲು ಎಲ್ಲಾ ಗರ್ಭಿಣಿಯರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಗರ್ಭಿಣಿಯರು ಕೊರೊನಾ ಸೋಂಕಿಗೆ ತುತ್ತಾದರೆ ಹೆಚ್ಚಿನ ಅಪಾಯ ಎದುರಿಸಬೇಕಾಗುತ್ತದೆ. ಗರ್ಭಪಾತ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಆದ್ಯತೆಯಲ್ಲಿ ಲಸಿಕೆ ನೀಡಬೇಕು ಎಂದು ಕೇಂದ್ರ ತಿಳಿಸಿತ್ತು.
''ಗರ್ಭಿಣಿಯರು ಲಸಿಕೆ ಪಡೆದುಕೊಂಡಿದ್ದೇ ಆದರೆ, ಸೋಂಕು ತಗುಲಿದರೂ ಅದರ ತೀವ್ರತೆ ಕಡಿಮೆಯಿರುತ್ತದೆ. ಅಲ್ಲದೆ, ಹೆರಿಗೆ ಮತ್ತು ಅಕಾಲಿಕ ಹೆರಿಗೆಗಳ ಅಪಾಯ ಕಡಿಮೆ ಇರುತ್ತದೆ. ಸೋಂಕು ಹರಡುವ ಪ್ರಮಾಣ ಕೂಡ ಕಡಿಮೆ ಇರುತ್ತದೆ'' ಎಂದು ಕೆಲವು ತಜ್ಞರು ಹೇಳಿದ್ದರು.
ಕೇಂದ್ರ ಸರ್ಕಾರ ಗರ್ಭಿಣಿಯರಿಗೆ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲೇ ಕೊರೊನಾ ಮೂರನೇ ಅಲೆ ಆರಂಭಕ್ಕೂ ಮುನ್ನ ಗರ್ಭಿಣಿಯರಿಗೆ ಲಸಿಕೆ ನೀಡಲು ಯಾವುದೇ ರೀತಿಯ ಸಮಸ್ಯೆ ಹಾಗೂ ತೊಡಕುಗಳು ಎದುರಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಲಸಿಕಾ ಅಭಿಯಾನವನ್ನು ನಡೆಸಬೇಕೆಂಬ ಸಲಹೆಗಳೂ ಬಂದಿದ್ದವು.
ಮೊದಲ ತ್ರೈಮಾಸಿಕ ಬಳಿಕ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಗರ್ಭಧರಿಸಿದ ಆರಂಭಿಕ ತಿಂಗಳುಗಳಲ್ಲಿ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಮೊದಲ ತ್ರೈಮಾಸಿಕದ ಬಳಿಕ ಲಸಿಕೆ ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿತ್ತು.