ತೆಹಲ್ಕಾ ಸಹ ಸಂಸ್ಥಾಪಕ ತರುಣ್ ತೇಜಪಾಲ್ ಅರ್ಜಿ ವಜಾಗೊಳಿಸಿದ ಸುಪ್ರೀಂ
ನವದೆಹಲಿ, ಆಗಸ್ಟ್ 19: ಖ್ಯಾತ ಪತ್ರಕರ್ತ, ತೆಹಲ್ಕಾ ಸಹ ಸಂಸ್ಥಾಪಕ, ಸಂಪಾದಕ ತರುಣ್ ತೇಜಪಾಲ್ ತಮ್ಮ ಸಂಸ್ಥೆಯ ಮಹಿಳಾ ಸಹೋದ್ಯೋಗಿ ಅಸಭ್ಯವಾಗಿ ನಡೆದುಕೊಂಡ ಘಟನೆಗೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕುವಂತೆ ಕೋರಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಈ ಪ್ರಕರಣ ಬೆಳಕಿಗೆ ಬಂದ ಬಳಿಕ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆ ತೊರೆದಿದ್ದರು. ನಂತರ ಅವರನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಅಮಾನತು ಮಾಡಲಾಗಿತ್ತು. 2013ರ ಲೈಂಗಿಕ ಕಿರುಕುಳ ಪ್ರಕರಣದಿಂದ ಮುಕ್ತಿ ಬಯಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, " ತೇಜಪಾಲ್ ವಿರುದ್ಧದ ಆರೋಪ ಗಂಭೀರವಾಗಿದೆ ಹಾಗೂ ಸಂತ್ರಸ್ತೆಯ ಖಾಸಗಿತನ ಮೇಲಿನ ಆಕ್ರಮಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ತೆಹಲ್ಕಾ ಸಂಪಾದಕನ ಲೈಂಗಿಕ ಕಿರುಕುಳ ವೃತ್ತಾಂತ ಇಲ್ಲಿದೆ
ಗೋವಾದ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ತರುಣ್ ತೇಜಪಾಲ್ ಅವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ ಅರ್ಜಿ ವಜಾಗೊಳಿಸಿರುವುದರಿಂದ ವಿಚಾರಣೆ ಮುಂದುವರೆಯಲಿದೆ.
'ಆತನದು (ಆರೋಪಿ ತರುಣ್ ತೇಜಪಾಲ್) ಲೈಂಗಿಕ ದುರ್ವತನೆ. ನಾನು ಆತನ ಮಗಳಿಗೆ ಸಮಾನವಾಗಿದ್ದೇನೆ. ಆದರೂ ಆತ ಸತತವಾಗಿ ಸುಮಾರು ಕಾಲದಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಅದೆಲ್ಲಾ ನನ್ನ ಜತೆ ಮಾಡಬೇಡಿ ಎಂದು ಎಷ್ಟೋ ಬಾರಿ ಅಂಗಾಲಾಚಿದ್ದೆ. ಆದರೂ ಅದು ಆತನ ಕಿವಿಗೆ ಬೀಳಲಿಲ್ಲ. ನಿರಂತರವಾಗಿ ನಡೆದೇ ಇತ್ತು' ಎಂದು ಬಾಧಿತ ಪತ್ರಕರ್ತೆ ಅಂದು NDTVಗೆ ತಿಳಿಸಿದ್ದರು.
2013ರಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗೋವಾದಲ್ಲಿ ತೇಜಪಾಲ್ ಹಾಗೂ ಕಿರಿಯ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಮೂರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.