ನ್ಯಾ. ರಂಜನ್ ನೇಮಕ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ
ನವದೆಹಲಿ, ಸೆಪ್ಟೆಂಬರ್ 26: ನ್ಯಾ.ರಂಜನ್ ಗೊಗೊಯ್ ಅವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು(ಸೆಪ್ಟೆಂಬರ್ 26) ತಿರಸ್ಕರಿಸಿದೆ.
ಹಾಲಿ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ(ಜಸ್ಟೀಸ್ ಎಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್) ವು ಬುಧವಾರದಂದು ಅರ್ಜಿ ವಿಚಾರಣೆ ನಡೆಸಿ, ತೀರ್ಪು ನೀಡಿದ್ದು, ತ್ವರಿತಗತಿಯಲ್ಲಿ ವಿಚಾರಣೆ ಸಾಧ್ಯವಿಲ್ಲ, ತಕರಾರಿನ ಬಗ್ಗೆ ಜ್ಞಾಪನ ಪತ್ರವನ್ನು ನೀಡಿ, ವಿಚಾರಣೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದಿದ್ದಾರೆ.
ಗಾಂಧಿ ಜಯಂತಿ ಮರುದಿನದಂದು ಸಿಜೆಐಯಾಗಿ ರಂಜನ್ ಅಧಿಕಾರಕ್ಕೆ
ಜ.12 ರಂದು ನವದೆಹಲಿಯಲ್ಲಿ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಮೂರ್ತಿಗಳಾದ ನ್ಯಾ. ಕುರಿಯನ್ ಜೋಸೆಫ್, ನ್ಯಾ. ಜೆ ಚಲಮೇಶ್ವರ, ನ್ಯಾ. ರಂಜನ್ ಗೊಗೊಯ್ ಮತ್ತು ನ್ಯಾ. ಮದನ್ ಲೋಕೂರ್ ಸುದ್ದಿಗೋಷ್ಠಿ ಕರೆದಿದ್ದರು. ಈ ಸುದ್ದಿ ಗೋಷ್ಟಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಹುಳುಕುಗಳಿವೆ ಎಂದು ಜರೆದಿದ್ದರು. ಮಾತ್ರವಲ್ಲ, ಇತ್ತೀಚೆಗೆ ದೀಪಕ್ ಮಿಶ್ರಾ ಅವರಿಗೆ ಈ ಕುರಿತು ಬರೆದ ಪತ್ರಕ್ಕೆ ಅವರು ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದೂ ದೂರಿದ್ದರು. ಯಾವ ಸೂಚನೆಯನ್ನೂ ನೀಡದೆ, ಶಿಷ್ಟಾಚಾರವನ್ನೆಲ್ಲ ಉಲ್ಲಂಘಿಸಿದ ನ್ಯಾಯಮೂರ್ತಿಗಳ ನಡೆಗೆ ನ್ಯಾಯಾಂಗ ವಲಯದಲ್ಲಿ ತೀವ್ರ ಅಸಮಾಧಾನ ಸೃಷ್ಟಿಯಾಗಿತ್ತು.
ಹಾಲಿ ಸಿಜೆಐ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಸುಪ್ರೀಂ ಕೋರ್ಟ್ ಪರಂಪರೆ ಹಾಗೂ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಆಂತರಿಕ ವಿಚಾರವನ್ನು ಬಹಿರಂಗಪಡಿಸಿದ ಇಂಥ ವ್ಯಕ್ತಿಯು ಸಿಜೆಐ ಹುದ್ದೆಗೆ ಅರ್ಹರಲ್ಲ ಎಂದು ವಕೀಲ ಆರ್.ಪಿ.ಲೂಥ್ರಾ ಹಾಗೂ ಸತ್ಯವೀರ್ ಶರ್ಮ ಅವರು ಅರ್ಜಿ ಸಲ್ಲಿಸಿದ್ದರು.
ತಾವೇ ತೋಡಿದ್ದ ಹಳ್ಳಕ್ಕೆ ತಾವೇ ಬಿದ್ದರಾ ರಂಜನ್ ಗೋಗಾಯ್?
ಅಕ್ಟೋಬರ್ 02ರ ಗಾಂಧಿ ಜಯಂತಿ ದಿನದಂದು ಸಿಜೆಐ ದೀಪಕ್ ಮಿಶ್ರಾ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದೆ. ರಂಜನ್ ಅವರು ನೂತನ ಸಿಜೆಐ ಆಗಿ ಅಕ್ಟೋಬರ್ 03ರಂದು ಅಧಿಕಾರ ಸ್ವೀಕರಿಸಲಿದ್ದು, ಅವರು 2019 ರ ನವೆಂಬರ್ ವರೆಗೂ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ.