ಸೆಂಟ್ರಲ್ ವಿಸ್ಟಾ: ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿ ಸುಪ್ರೀಂನಿಂದ ವಜಾ
ನವದೆಹಲಿ, ಜೂ.29: ಕೊರೊನಾ ವೈರಸ್ನ ಸಂಕಷ್ಟದ ಸಂದರ್ಭದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕೊರೊನಾ ವೈರಸ್ನ ಸಂಕಷ್ಟದ ಸಂದರ್ಭದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿಗೆ ತಡೆ ನೀಡಲು ದೆಹಲಿ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹಾಗೆಯೇ ಇದೊಂದು ರಾಷ್ಟ್ರೀಯ ಅಗತ್ಯ ಯೋಜನೆ ಎಂದು ಹೇಳಿ, ಈ ಕಾಮಗಾರಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ದೆಹಲಿ ಹೈಕೋರ್ಟ್ ವಿಧಿಸಿತ್ತು.
ಸೆಂಟ್ರಲ್ ವಿಸ್ಟಾ ಯೋಜನೆ ತಡೆಗೆ ಒಪ್ಪದ ದೆಹಲಿ ಹೈಕೋರ್ಟ್, ಅರ್ಜಿದಾರರಿಗೆ ದಂಡ
ಬಳಿಕ ಅರ್ಜಿದಾರರು ದೆಹಲಿ ಹೈಕೋರ್ಟ್ ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿಯನ್ನು ಸಲ್ಲಿಸಿದ್ದು, ನ್ಯಾಯಾಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್ ಇದ್ದ ನ್ಯಾಯಪೀಠ ಈ ಅರ್ಜಿಯನ್ನು ತಿರಸ್ಕರಿಸಿದೆ.
ಇದೇ ರೀತಿ ಬೇರೆ ಕಾಮಗಾರಿಗಳು ಪ್ರಗತಿಯಲ್ಲಿದೆ, ಹಾಗಿರುವಾಗ ಅರ್ಜಿದಾರರು ಕೋವಿಡ್ ನೆಪ ಹೇಳಿ ಸೆಂಟ್ರಲ್ ವಿಸ್ತಾ ಯೋಜನೆಯೊಂದನ್ನೇ ಸ್ಥಗಿತಗೊಳಿಸಬೇಕು ಎಂದು ಯಾಕೆ ಮನವಿ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ನ್ಯಾಯಪೀಠ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ರೀತಿಯ ಹಲವು ಕಾಮಗಾರಿಗಳು ನಡೆಯುತ್ತಿದೆ, ಆ ಬಗ್ಗೆ ಮೇಲ್ಮನವಿದಾರರು ಯಾವುದಾದರೂ ಪ್ರಾಮಾಣಿಕ ಸಂಶೋಧನೆ ನಡೆಸಿದ್ದಾರೆಯೇ, ಅದು ಈ ಅರ್ಜಿಯಲ್ಲಿ ಒಳಗೊಂಡಿದೆಯೇ ಎಂದು ಕೇಳಿದೆ.
ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ಸಿದ್ಧಾರ್ಥ್ ಲೂತ್ರಾ, ಅರ್ಜಿಯಲ್ಲಿರುವ ಅನುಬಂಧಗಳನ್ನು ಉಲ್ಲೇಖಿಸಿ ಸಂಶೋಧನೆ ನಡೆಸಿರುವ ಮಾಹಿತಿ ಒದಗಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಮಾರ್ಗಸೂಚಿಗಳಿಗೆ ಅನುಸಾರವಾಗಿಯೇ ಯೋಜನೆಯ ಚಟುವಟಿಕೆಗಳನು ನಡೆಯುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ನಿಮಗೆ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಯೋಜನೆ ಇಲ್ಲ ಎಂಬ ಆತಂಕವಿತ್ತು. ಆದರೆ ಅದನ್ನು ಪಾಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಹಾಗಿರುವಾಗ ಅರ್ಜಿಯನ್ನು ಹೇಗೆ ಮುಂದುವರೆಸುವುದು?. ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿದೆ.
(ಒನ್ಇಂಡಿಯಾ ಸುದ್ದಿ)