ಚುನಾವಣಾ ಬಾಂಡ್ ಯೋಜನೆ ತಡೆ ಕುರಿತಂತೆ ಸುಪ್ರೀಂ ಮಹತ್ವದ ಆದೇಶ
ನವದೆಹಲಿ, ಜನವರಿ 20: ಚುನಾವಣಾ ಬಾಂಡ್ಗಳನ್ನು ತಕ್ಷಣವೇ ತಡೆಹಿಡಿಯುವ ಬಗ್ಗೆ ಯಾವುದೇ ರೀತಿ ಮಧ್ಯಂತರ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರದಂದು ಹೇಳಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಕೇಂದ್ರ ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗಕ್ಕೆ ಈ ಕುರಿತಂತೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಿದೆ. ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದ್ದು, ಈ ಸಂದರ್ಭದಲ್ಲಿ ಚುನಾವಣಾ ಬಾಂಡ್ ಗಳ ಬಳಕೆಗೆ ತಡೆ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.
ಎಲೆಕ್ಷನ್ ಬಾಂಡ್ ಎಂದರೇನು: ಯೋಜನೆಗೆ ಕಾಂಗ್ರೆಸ್ ವಿರೋಧವೇಕೆ?
ವಕೀಲ ಪ್ರಶಾಂತ್ ಭೂಷಣ್ ಅವರು ಎನ್ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಗೆ ಹಾಜರಾಗಿ, ತುರ್ತು ಆದೇಶದ ಅಗತ್ಯವಿದೆ, 'ಅನಾಮಧೇಯ' ಧನಸಹಾಯವನ್ನು ಮತ್ತೆ ಹಣದ ಮೂಲವಾಗಿ ಬಳಸಲಾಗುತ್ತದೆ, ಚುನಾವಣಾ ಬಾಂಡ್ ಗೆ ಮಾನ್ಯತೆ ಸಿಗುವ ತನಕ ಬಳಕೆಯನ್ನು ನಿರ್ಬಂಧಿಸುವಂತೆ ವಾದಿಸಿದರು.
ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಉತ್ತರವನ್ನು ನೀಡಲು ನಾಲ್ಕು ವಾರಗಳ ಕಾಲಾವಕಾಶ ಕೇಳಿದರು. ಆದರೆ, ನ್ಯಾ. ಎಸ್ಎ ಬೊಬ್ಡೆ, ನ್ಯಾ. ಬಿ. ಆರ್ ಗವಾಯಿ, ನ್ಯಾ. ಸೂರ್ಯಕಾಂತ್ ಅವರಿದ್ದ ನ್ಯಾಯಪೀಠವು ಎರಡು ವಾರಗಳ ಕಾಲಾವಕಾಶ ನೀಡಿದೆ.
ಚುನಾವಣಾ ಬಾಂಡ್ಗಳು ಅನಾಮಧೇಯ ಕಾರ್ಪೊರೇಟ್ ದೇಣಿಗೆಗಳ ಪ್ರವಾಹ ದ್ವಾರವನ್ನು ತೆರೆದಿದ್ದು ಇದರಿಂದ ಪ್ರಜಾಪ್ರಭುತ್ವದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವಾದಿಸಲಾಗಿದೆ. ಚುನಾವಣಾ ಆಯೋಗ ಮತ್ತು ಕೇಂದ್ರ ಕಾನೂನು ಸಚಿವಾಲಯವು ಎತ್ತಿರುವ ಆಕ್ಷೇಪಣೆಗಳನ್ನು ಎಡಿಆರ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 2, 2018ರಂದು ಸರ್ಕಾರವು ಎಲೆಕ್ಟೋರಲ್ ಬಾಂಡ್ ಕುರಿತಂತೆ ನೋಟಿಫಿಕೇಷನ್ ಹೊರಡಿಸಿತ್ತು. ಭಾರತೀಯ ನಾಗರಿಕರು ಬಾಂಡ್ ಖರೀದಿಸಲು ಅರ್ಹರಾಗಿದ್ದು, ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಬಾಂಡ್ ಹೊಂದಬಹುದಾಗಿದೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 1%ಗಿಂತ ಕಡಿಮೆ ಮತಗಳಿಗಿಂತ ಕಡಿಮೆ ಮತಗಳನ್ನು ಪಡೆದಿರದ,ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 29ಎ ಅನ್ವಯ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಪಡೆಯಲು ಅರ್ಹವಾಗಿವೆ.