ಆಧಾರ್ ಕಡ್ಡಾಯ ಸಾಧ್ಯವಿಲ್ಲ: ಸುಪ್ರೀಂ ಪುನರುಚ್ಚಾರ
ನವದೆಹಲಿ, ಅಕ್ಟೋಬರ್. 08: ಸರ್ಕಾರಿ ಯೋಜನೆಗಳ ವಿತರಣೆ ಯಲ್ಲಿ ಆಧಾರ್ ಕಾರ್ಡ್ ಬಳಕೆಯನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಆದರೆ ಎಲ್ ಪಿಜಿ ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಆಧಾರ್ ಅನ್ನು ಉಪಯೋಗಿಸಿಕೊಳ್ಳಬಹುದು ಇಲ್ಲಿ ಸಹ ಕಡ್ಡಯ ಎಂಬುದಿಲ್ಲ ಸೌಲಭ್ಯ ಬಳಕೆ ಅನುಕೂಲತೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ವಿತ್ತೀಯ, ಟೆಲಿಕಾಂ ಮತ್ತು ಸ್ಟಾಕ್ ಮಾರ್ಕೆಟ್ ವಹಿವಾಟುಗಳಲ್ಲಿ ಆಧಾರ್ ಅನ್ನು ಗುರುತು ಪತ್ರವಾಗಿ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ರಿಸರ್ವ್ ಬ್ಯಾಂಕ್, ಸೆಬಿ ನ್ಯಾಯಾಲಯದ ಮೆಟ್ಟಿಲು ಏರಿದ್ದವು. ಆದರೆ ನ್ಯಾ. ಜೆ.ಚೆಲಮೇಶ್ವರ್ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದ್ದು ಆಧಾರ್ ಬಳಕೆ ಕಡ್ಡಾಯವಲ್ಲ ಎಂದು ಮತ್ತೆ ಹೇಳಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]
ಪಡಿತರ ವಿತರಣೆ, ಎಲ್ಪಿಜಿ ಮತ್ತು ಸೀಮೆಎಣ್ಣೆ ಸಬ್ಸಿಡಿ ಯೋಜನೆಗಷ್ಟೇ ಆಧಾರ್ ಕಾರ್ಡ್ ಬಳಸಬಹುದು ಎಂಬುದಾಗಿ ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಆಧಾರ್ ಕಾರ್ಡ್ ಬಳಕೆ ಜನರ ಇಚ್ಛೆಗೆ ಬಿಟ್ಟಿದ್ದು, ಇದನ್ನು ಕಡ್ಡಾಯ ಎಂದು ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ.
ದೇಶದ 90 ಕೋಟಿ ಜನರಿಗೆ ಆಧಾರ್ ವಿತರಣೆ ಮಾಡಲಾಗಿದೆ. ಒಂದು ವೇಳೆ ಕಡ್ಡಾಯ ಎಂದು ತೀರ್ಮಾನ ನೀಡಿದರೂ ಯಾವ ಬಗೆಯ ಸಮಸ್ಯೆ ಎದುರಾಗದು ಎಂದು ಅಟರ್ನರಿ ಜನರಲ್ ಮುಕುಲ್ ರೊಹ್ಟಗಿ ಮಾಹಿತಿ ನೀಡಿದ್ದಾರೆ.