ಪ್ರಿಯಾ ವಾರಿಯರ್ ವಿರುದ್ಧದ ತನಿಖೆಗೆ ತಡೆ ನೀಡಿದ ಸುಪ್ರೀಂಕೋರ್ಟ್
ನವದೆಹಲಿ, ಫೆಬ್ರವರಿ 21: 'ರಾಷ್ಟ್ರೀಯ ಕ್ರಷ್' ಎನಿಸಿಕೊಂಡಿರುವ ಮಲ್ಲು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ಸುಪ್ರೀಂಕೋರ್ಟಿನಿಂದ ಬುಧವಾರ ಬೆಳಗ್ಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಪ್ರಿಯಾ ವಿರುದ್ಧ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಒರು ಅಡಾರ್ ಲವ್ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ಪ್ರಿಯಾ ವಾರಿಯರ್ ವಿರುದ್ಧದ ಎಲ್ಲಾ ಕ್ರಿಮಿನಲ್ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಒರು ಅಡಾರ್ ಲವ್ ಚಿತ್ರದ ಹಾಡು ಹಾಗೂ ಚಿತ್ರ ತಂಡದ ವಿರುದ್ಧ ಹೈದರಾಬಾದಿನ ಫಲಕ್ನಾಮಾ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಅಲ್ಲಿನ ಪೊಲೀಸರು ಪ್ರಿಯಾ ಸೇರಿದಂತೆ ಹಲವರ ಮೇಲೆ ಎಫ್ ಐಆರ್ ದಾಖಲಿಸಿದ್ದರು.
ಯಾರೀಕೆ ಪ್ರಿಯಾ ಪ್ರಕಾಶ್ ವಾರಿಯರ್? ಏನು ಇವಳ ದಾಖಲೆ?
ಈಗ ತಮ್ಮ ಮೇಲಿನ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಪ್ರಿಯಾ ಅವರ ಕಣ್ ಮಿಟುಕು, ಹಾವಭಾವ, ಗೀತ ಸಾಹಿತ್ಯ ಹಾಗೂ ದೃಶ್ಯಗಳು ಪ್ರವಾದಿಗಳಿಗೆ ಅಪಮಾನ ಮಾಡಿದ್ದಂತಿದೆ ಎಂದು ಮುಸ್ಲಿಮ್ ಯುವಕರ ಗುಂಪೊಂದು ದೂರು ನೀಡಿದೆ.
ಪ್ರಿಯಾ ಪ್ರಕಾಶ್ ಅವರ ವಿರುದ್ಧ ಮಾತ್ರ ದೂರು ನೀಡಿಲ್ಲ. ಈ ಚಿತ್ರದಲ್ಲಿ ಆ ಹಾಡಿನಲ್ಲಿ ಯಾರೇ ಅಭಿನಯಿಸಿದ್ದರೂ ನಮ್ಮ ಆಕ್ಷೇಪ ಇರುತ್ತಿತ್ತು. 'ಮಾಣಿಕ್ಯ ಮಲಯಾಯ ಪೂವಿ..' ಹಾಡಿನ ಸಾಹಿತ್ಯಕ್ಕೂ ಪ್ರವಾದಿ ಮೊಹಮ್ಮದರ ಜೀವನಕ್ಕೂ ಸಾಮ್ಯತೆ ಇದೆ, ಜತೆಗೆ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಶಬ್ದಗಳಿವೆ ದೂರಿನಲ್ಲಿ ಹೇಳಲಾಗಿದೆ.