21 ವಿಪಕ್ಷಗಳ ಅರ್ಜಿಗೆ ಮನ್ನಣೆ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ಮಾರ್ಚ್ 15: ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ ವಿರೋಧಿಸಿ 21 ವಿಪಕ್ಷಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಶುಕ್ರವಾರದಂದು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಕುರಿತಂತೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಲು ಮಾರ್ಚ್ 25ರ ತನಕ ಕಾಲಾವಕಾಶ ನೀಡಲಾಗಿದೆ.
ಭಾರತದಲ್ಲಿ ಬಳಸುವ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಗಳು ಹ್ಯಾಕ್ ಮಾಡಬಹುದು ಎಂದು ಸ್ವಯಂಘೋಷಿತ ಸೈಬರ್ ತಜ್ಞರೊಬ್ಬರು ಸವಾಲು ಹಾಕಿರುವ ಸಂದರ್ಭದಲ್ಲೇ ಮುಂದಿನ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಆಗ್ರಹ ಕೇಳಿ ಬಂದಿತ್ತು. ಆದರೆ, ಎಲ್ಲಾ ಬೇಡಿಕೆ, ಆಗ್ರಹಗಳನ್ನು ತಳ್ಳಿ ಹಾಕಿರುವ ಕೇಂದ್ರ ಚುನಾವಣಾ ಆಯೋಗ, ಇವಿಎಂ ಸುರಕ್ಷಿತವಾಗಿದ್ದು, ಯಾವುದೇ ಕಾಲಕ್ಕೂ ಮತಪತ್ರಗಳ ಬಳಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಇವಿಎಂ ಹ್ಯಾಕ್ ಬಗ್ಗೆ ಮಾತನಾಡಿದ ಶುಜಾ ವಿರುದ್ಧ ಎಫ್ಐಆರ್?
1975ರಲ್ಲಿ ಇಂದಿರಾಗಾಂಧಿ ವರ್ಸಸ್ ರಾಜ್ ನಾರಾಯಣ್ ಪ್ರಕರಣವನ್ನು ಉಲ್ಲೇಖಿಸಿ ವಾದಿಸಿರುವ ವಿಪಕ್ಷಗಳು, ಪಾರದರ್ಶಕ ಹಾಗೂ ನ್ಯಾಯಯುತವಾದ ಚುನಾವಣೆಗಾಗಿ ಆಗ್ರಹಿಸಿ, ಸಂವಿಧಾನದ ಮೂಲ ಆಶಯವನ್ನು ಉಳಿಸುವಂತೆ ಕೋರ್ಟಿನಲ್ಲಿ ಕೋರಿಕೊಂಡಿವೆ.
'ಇವಿಎಂನಲ್ಲಿ ಚುನಾವಣೆ ನಡೆದರೆ ಮತಎಣಿಕೆ ವೇಳೆ 50% ಮತ ಎಣಿಕೆ ಇವಿಎಂ(ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರ)ನಲ್ಲಿ ನಡೆದರೆ ಉಳಿದ 50% ವಿವಿಪ್ಯಾಟ್(Voter Verified Paper Trail Audit Machines) ಯಂತ್ರದಲ್ಲಿ ನಡೆಯಬೇಕು, ಈ ಸಾಧನಗಳಿಗೆ ಇನ್ನು ಹೆಚ್ಚಿನ ಸುರಕ್ಷತೆ ಬೇಕು' ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ವಾದಿಸಿದ್ದಾರೆ.
ವಿವಾದ ಏನೇ ಇರಲಿ, ಇವಿಎಂ ತಯಾರಕ ಕಂಪನಿಗಂತೂ ಭರ್ಜರಿ ಲಾಭ
ಕಾಂಗ್ರೆಸ್ನ ಗುಲಾಂನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮಾ, ಟಿಡಿಪಿಯ ಚಂದ್ರಬಾಬು ನಾಯ್ಡು, ಎನ್ಸಿಪಿಯ ಮಜಿದ್ ಮೆನನ್, ಡೆರೆಕ್ ಓಬ್ರಿಯನ್, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ ಸೇರಿದಂತೆ ಹಲವು ಮುಖಂಡರಿದ್ದ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೊರಾ ಅವರನ್ನು ಫೆಬ್ರವರಿ ತಿಂಗಳಿನಲ್ಲಿ ಭೇಟಿ ಮಾಡಿ, ಈ ಬಗ್ಗೆ ಮನವಿ ಸಲ್ಲಿಸಿ ಚರ್ಚಿಸಿದ್ದರು.
A bench headed by Chief Justice Ranjan Gogoi also asked Election Commission to depute a senior officer to assist the court and posted the matter for next hearing on March 25. https://t.co/Qlqiwocsg5
— ANI (@ANI) March 15, 2019
2014ರ ಲೋಕಸಭೆ ಚುನಾವಣೆ ಹಾಗೂ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲು ಮತಯಂತ್ರಗಳ ದುರುಪಯೋಗವೇ ಕಾರಣ, ಇವಿಎಂ ಹ್ಯಾಕ್ ಮಾಡಿದ್ದರಿಂದ ಬಿಜೆಪಿಗೆ ಲಾಭವಾಯಿತು. ಹಿರಿಯ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರು ಈ ರಹಸ್ಯವನ್ನು ಹೊರಹಾಕುವ ಭೀತಿ ಎದುರಾಗಿದ್ದರಿಂದ ಅವರನ್ನು ಹತ್ಯೆ ಮಾಡಲಾಯಿತು ಎಂದು ಸೈಬರ್ ತಜ್ಞ ಶುಜಾ ಅವರು ಲಂಡನ್ನಿನ ಹ್ಯಾಕಥಾನ್ ನಲ್ಲಿ ನೀಡಿದ ವಿವರಗಳನ್ನು ಚುನಾವಣಾ ಆಯೋಗದ ಮುಖ್ಯಸ್ಥ ಸುನಿಲ್ ಅವರು ತಳ್ಳಿ ಹಾಕಿದ್ದಾರೆ.