ಸುಪ್ರೀಂಕೋರ್ಟ್ ಸಂಚಾರಿ ಪೀಠ ಹಕ್ಕೊತ್ತಾಯಕ್ಕೆ ನ್ಯಾ. ಕಿರುಬಾಕರನ್ ಬೆಂಬಲ
ಚೆನ್ನೈ, ಸೆಪ್ಟೆಂಬರ್ 08: ಸಾಮಾನ್ಯ ಜನತೆಗೂ ನ್ಯಾಯದಾನವು ಸುಲಭದಲ್ಲಿ ಲಭ್ಯವಾಗಬೇಕಾದರೆ ದೆಹಲಿಯಿಂದ ಹೊರಗೆ ಸುಪ್ರೀಂಕೋರ್ಟ್ನ ಪ್ರಾಂತೀಯ ಪೀಠಗಳು ಅಥವಾ ಸಂಚಾರಿ ಪೀಠಗಳನ್ನು ಸ್ಥಾಪಿಸಬೇಕಾದ ಅಗತ್ಯತೆಯ ಬಗ್ಗೆ ಇತ್ತೀಚೆಗಷ್ಟೇ ನಿವೃತ್ತರಾದ ಮದ್ರಾಸ್ ಹೈಕೋರ್ಟ್ನ ನ್ಯಾ. ಕಿರುಬಾಕರನ್ ಅವರು ಮೊದಲು ನೀಡಿದ ತೀರ್ಪು ನೀಡಿದ್ದಾರೆ.
''ಕಾರ್ತಿಕ್ ರಂಗನಾಥನ್ ವರ್ಸಸ್ ಶಿಸ್ತು ಸಮಿತಿ-4, ತಮಿಳುನಾಡು, ಪುದುಚೆರಿ ವಕೀಲರ ಪರಿಷತ್ತು'' ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ''ಸಾಮಾನ್ಯ ಜನರ ಅನುಕೂಲಕ್ಕಾಗಿ, ಆದಷ್ಟೂ ಬೇಗನೇ'' ದೆಹಲಿಯಲ್ಲಿರುವ ಎಲ್ಲ ನ್ಯಾಯಮಂಡಳಿಗಳು ಹಾಗೂ ಭಾರತೀಯ ವಕೀಲರ ಪರಿಷತ್ತಿನ ಸಂಚಾರಿ ಪೀಠಗಳು ಅಥವಾ ಶಾಶ್ವತ ಪೀಠಗಳನ್ನು ಪ್ರಾಂತೀಯ ವಲಯಗಳಲ್ಲಿ ಸ್ಥಾಪಿಸುವುದನ್ನು ಕೇಂದ್ರ ಸರ್ಕಾರವು ಶೀಘ್ರ ಪರಿಗಣಿಸಬೇಕು ಎಂದಿದ್ದಾರೆ.
''ಯಾವುದೇ ಪ್ರಾಂತೀಯ ಪೀಠಗಳನ್ನು ಸ್ಥಾಪಿಸದೆ ಕೇವಲ ದೆಹಲಿಯಲ್ಲಿ ಮಾತ್ರವೇ ನ್ಯಾಯಾಲಯ ಹಾಗೂ ನ್ಯಾಯಮಂಡಳಿಗಳಿದ್ದರೆ ಅದು ದೇಶದ ದೂರದೂರದ ಭಾಗಗಳಲ್ಲಿ ನೆಲೆಸಿರುವ ಜನರಿಗೆ ಮಾಡುವ ಅನ್ಯಾಯವೇ ಸರಿ,'' ಎಂದು ಅವರು ಹೇಳಿದ್ದಾರೆ.
ಮೇಲ್ಮನವಿ ನ್ಯಾಯಾಲಯಗಳನ್ನು ಸುಲಭವಾಗಿ ಎಡತಾಕುವ ಸೌಲಭ್ಯದಿಂದ ವಂಚಿತರಾದವರು ಅನ್ಯಾಯವನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕಾದ ಅನಿರ್ವಾಯತೆಯ ಬಗ್ಗೆ ಅವರು ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ, ''ಈ ಅನ್ಯಾಯವು 1950ರಿಂದಲೂ ನಡೆದು ಬಂದಿದೆ. ಎಲ್ಲ ಭಾಗೀದಾರರ ಬಗ್ಗೆ ಅಪಾರ ಗೌರವವನ್ನಿರಿಸಿಕೊಳ್ಳುತ್ತಲೇ ಈ ನ್ಯಾಯಾಲಯವು ವ್ಯಕ್ತಪಡಿಸುವ ಅಭಿಪ್ರಾಯವೇನೆಂದರೆ ನ್ಯಾಯವನ್ನು ದೊರಕಿಸಿಕೊಡಲು ಕೈಗೊಳ್ಳಲಾದ ಕ್ರಮಗಳನ್ನು ಇದೇ ಭಾಗೀದಾರರು ಮೊಗ್ಗಿನಲ್ಲೇ ಚಿವುಟಿದ್ದಾರೆ. ಸಂಪನ್ಮೂಲದ ಕೊರತೆ ಹಾಗೂ ಮೇಲ್ಮನವಿ ನ್ಯಾಯಾಲಯಗಳನ್ನು ಎಡತಾಕುವ ಕೊರತೆಯಿಂದಾಗಿ ವ್ಯಾಜ್ಯಕಾರರು ಅನನುಕೂಲಕರ ಆದೇಶಗಳನ್ನು ಸಹ ಅನಿವಾರ್ಯವಾಗಿ ಒಪ್ಪಿಕೊಳ್ಳುವಂತಾಗಿದೆ,'' ಎಂದು ದಾಖಲಿಸಿದ್ದಾರೆ.
ನ್ಯಾಯಕ್ಕಾಗಿ ಸುಪ್ರೀಂಕೋರ್ಟ್ನ ಮೊರೆಹೋಗ ಬಯಸುವುದು ಸಾಮಾನ್ಯ ವ್ಯಕ್ತಿಯ ಮಟ್ಟಿಗೆ ಕನಸಾಗಿಯೇ ಉಳಿದಿದೆ. ಇದು ನ್ಯಾಯದ ನಿರಾಕರಣೆಯಾಗಿದೆ. ಹೀಗಿರುವಾಗ ನ್ಯಾಯದಾನದ ಲಭ್ಯತೆಯನ್ನು ಮೂಲಭೂತ ಹಕ್ಕೆಂದು ಸುಮ್ಮನೆ ಘೋಷಿಸುವುದರಿಂದ ಯಾವುದೇ ಉದ್ದೇಶವು ಫಲಿಸುವುದಿಲ್ಲ ಎಂದು ತಮ್ಮ ತೀರ್ಪಿನಲ್ಲಿ ನ್ಯಾ. ಕಿರುಬಾಕರನ್ ಉಲ್ಲೇಖಿಸಿದ್ದಾರೆ.
ಅಂತಿಮವಾಗಿ, ''ನವದೆಹಲಿಯಿಂದ ಹೊರತಾಗಿ ಬೇರೆ ಸ್ಥಳಗಳಲ್ಲಿ ಸುಪ್ರೀಂ ಕೋರ್ಟ್ ಪೀಠಗಳನ್ನು ಸ್ಥಾಪಿಸುವ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಶೀಘ್ರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಈ ನ್ಯಾಯಾಲಯ ಬಯಸುತ್ತದೆ... ಜನಸಂಖ್ಯೆಯ ಹಾಗೂ ವ್ಯಾಜ್ಯಗಳ ಹೆಚ್ಚಳದ ಬಗ್ಗೆ ಇಂದು ಪರಿಗಣಿಸಬೇಕಿದೆ. ವ್ಯಾಜ್ಯಕಾರರಾದ ಸಾಮಾನ್ಯ ಜನರ ವಾಸ್ತವಿಕ ಸಮಸ್ಯೆಗಳನ್ನು ಅತಿಶೀಘ್ರವಾಗಿ ಪರಿಹರಿಸಬೇಕಿದೆ'' ಎಂದು ಪೀಠವು ಹೇಳಿದೆ.
ಪ್ರಾದೇಶಿಕ ಪೀಠಗಳ ಸ್ಥಾಪನೆಗಾಗಿ ಈ ಹಿಂದೆ ಅನೇಕ ಕಾನೂನು ಆಯೋಗಗಳು ಮತ್ತು ಸಂಸದೀಯ ವ್ಯವಹಾರಗಳ ಸಮಿತಿಗಳು ಮಾಡಿರುವ ಶಿಫಾರಸ್ಸನ್ನು ಪರಿಗಣಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಈ ಗಂಡಾಂತರಕಾರಿ ಸನ್ನಿವೇಶಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ನ್ಯಾ. ಕಿರುಬಾಕರನ್ ತಮ್ಮ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)
ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್ ಹಾಗೂ ಲಕ್ಷದ್ವೀಪದ ಬಡ ಕಕ್ಷಿದಾರರು ನ್ಯಾಯದಾನಕ್ಕಾಗಿ ಸುಪ್ರೀಂಕೋರ್ಟ್ ನತ್ತ ತೆರಳಲು ದೆಹಲಿಗೆ ತೆರಳಲು ಕಷ್ಟವಾಗಲಿದೆ. ಸಂಚಾರಿ ಪೀಠ ಸ್ಥಾಪನೆಯಾದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಈ ಹಿಂದೆ ದಕ್ಷಿಣ ಭಾರತ ಸಂಚಾರಿ ಪೀಠ ಸ್ಥಾಪನಾ ಕ್ರಿಯಾ ಸಮಿತಿ ಮನವಿ ಮಾಡಿತ್ತು.
ಸಂವಿಧಾನದ ಅನುಚ್ಛೇದ 39-ಎ ಅನ್ವಯ ನ್ಯಾಯಕ್ಕಾಗಿ ನೆರವು ನೀಡುವುದು ಸರ್ಕಾರದ ಮತ್ತು ನ್ಯಾಯಾಲಯಗಳ ಸಂವಿಧಾನಬದ್ಧ ಕರ್ತವ್ಯ. ಆದ್ದರಿಂದ ದಕ್ಷಿಣ ಭಾರತ ರಾಜ್ಯಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸುವ ಅಗತ್ಯವಿದೆ. ಇದಕ್ಕಾಗಿ ಸರ್ವೋಚ್ಛ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸುವುದು ಅನಿವಾರ್ಯವಾಗಿದೆ. ಅನುಚ್ಛೇದ 130ರ ಪ್ರಕಾರ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸುವ ಅಧಿಕಾರ ಸರ್ವೋಚ್ಛ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ.
ಸಂವಿಧಾನದ ಅನುಚ್ಛೇದ 14 ರಂತೆ ಉತ್ತರ ಭಾರತದ ಕಕ್ಷಿದಾರರಂತೆ ದಕ್ಷಿಣ ಭಾರತದ ಕಕ್ಷಿದಾರರಿಗೆ ಅನುಕೂಲ ಒದಗಿಸಿಕೊಡುವ ಸಲುವಾಗಿ ಸರ್ವೋಚ್ಛ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪಿಸಬೇಕಾಗಿರುವುದು ಸಂವಿಧಾನ ಬದ್ಧ ಅಗತ್ಯವಾಗಿದೆ.