ಸಿಜೆಐ ಅಧಿಕಾರ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ
ನವದೆಹಲಿ, ಏಪ್ರಿಲ್ 11: ಜನವರಿ ತಿಂಗಳಿನಲ್ಲಿ ನ್ಯಾಯಾಂಗದ ವಿರುದ್ಧ ತಿರುಗಿಬಿದ್ದು, ಪತ್ರಿಕಾಗೋಷ್ಠಿ ಕರೆದಿದ್ದ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಮ್ಮೆ ನ್ಯಾಯಾಂಗ ಸುದ್ದಿಯಲ್ಲಿದೆ!
ಪ್ರಕರಣಗಳನ್ನು ಇತರೆ ನ್ಯಾಯಮೂರ್ತಿಗಳಿಗೆ ಹಂಚುವಾಗ ಇರುವ ಮಾನದಂಡ ಮತ್ತು ಈ ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಇರುವ ಆಡಳಿತಾತ್ಮಕ ಅಧಿಕಾರದ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮತ್ತೆ ಸುದ್ದಿಗೆ ಬಂದ ನ್ಯಾಯಾಂಗ: ಸಿಜೆಐ ಅಧಿಕಾರ ಪ್ರಶ್ನಿಸಿ ಪಿಐಎಲ್
ಹಿರಿಯ ವಕೀಲ ಶಾಂತಿ ಭೂಷಣ್ ಅವರ ಪರವಾಗಿ ಅವರ ಮಗ ಪ್ರಶಾಂತ್ ಭೂಷಣ್ ಈ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳನ್ನು ಹಂಚುವಾಗ ತಾರತಮ್ಯ ಮಾಡುವಂತಿಲ್ಲ, ಪ್ರಕರಣಗಳ ಹಂಚಿಕೆಯ ವಿಷಯದಲ್ಲಿ ಮುಖ್ಯನ್ಯಾಯಮೂರ್ತಿಗಳು ಪರಮಾಧಿಕಾರ ಪಡದೆದಿದ್ದಾರೆಯೇ ಎಂದು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
ಜನವರಿಯಲ್ಲಿ ಸುಪ್ರೀಂ ಕೋರ್ಟಿನ ನಾಲ್ವರು ನ್ಯಾಯಮೂರ್ತಿಗಳು ಸಿಜೆಐ ವಿರುದ್ಧ ತಿರುಗಿಬಿದ್ದ ಘಟನೆಯ ಇನ್ನೂ ಹಸಿಯಾಗಿರುವಾಗಲೇ ಸುಪ್ರೀಂ ಕೋರ್ಟಿಗೆ ಈ ಅರ್ಜಿ ಸಲ್ಲಿಕೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.