ಕಾವೇರಿ ಗಲಭೆ : ಪರಿಹಾರ ದೊರಕಿಸಿಕೊಡಲು ಸುಪ್ರೀಂ ನಕಾರ
ನವದೆಹಲಿ, ಜನವರಿ 13 : ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 2016ರ ಸೆಪ್ಟೆಂಬರ್ ತಿಂಗಳಲ್ಲಿ ಆದ ಗಲಭೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನಿಂದ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡಲು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.
ಕರ್ನಾಟಕ ಕಳೆದ ವರ್ಷ ಭೀಕರ ಬರಗಾಲ ಅನುಭವಿಸುತ್ತಿದ್ದರಿಂದ ನಾಲ್ಕೂ ಜಲಾಶಯಗಳಲ್ಲಿ ನೀರು ಬತ್ತಿ ಹೋಗಿತ್ತು. ಈಕಾರಣ ತಮಿಳುನಾಡಿಗೆ ನೀರು ಬಿಡಲು ಕರ್ನಾಟಕ ನಿರಾಕರಿಸಿತ್ತು. [ಪೊಲೀಸರ ಲಾಠಿಗಿಂತ ಪ್ರತಿಭಟನಾಕಾರರ ಬಡಿಗೆ ದೊಡ್ಡದಿತ್ತು!]
ಆದರೆ, ಸರ್ವೋಚ್ಚ ನ್ಯಾಯಾಲಯ, ಹಿಂದಿನ ತೀರ್ಪನ್ನು ಕರ್ನಾಟಕ ಮಾನ್ಯ ಮಾಡಲೇಬೇಕು ಎಂದು ಹೇಳಿ, ಪ್ರತಿದಿನ ತಮಿಳುನಾಡಿಗೆ ನೀರು ಬಿಡಲೇಬೇಕು ಎಂದು ಆದೇಶ ನೀಡಿತ್ತು.
ತೀರ್ಪು ಬರುತ್ತಲೇ ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆ ನಡೆದು, ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದಿದ್ದರು. ಇದು ತಮಿಳುನಾಡಿನಲ್ಲಿಯೂ ಸಂಭವಿಸಿತ್ತು. ಅಲ್ಲಿ ಕೂಡ ಕನ್ನಡಿಗರ ಮೇಲೆ ಹಲ್ಲೆ ಮಾಡಲಾಗಿತ್ತು, ಕರ್ನಾಟಕದ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. [ರಾಜಗೋಪಾಲ ನಗರ, ಹೆಗ್ಗನಹಳ್ಳಿ ಇನ್ನೂ ಉದ್ವಿಗ್ನ]
ಈ ಹಿನ್ನೆಲೆಯಲ್ಲಿ ಪರಿಹಾರ ದೊರಕಿಸಿಕೊಡಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.