ಕೊರೊನಾದಿಂದ ಅನಾಥರಾಗಿರುವ ಮಕ್ಕಳ ನೋವು ಅರ್ಥ ಮಾಡಿಕೊಂಡು ಕಾಳಜಿ ವಹಿಸಿ; ಸುಪ್ರೀಂ ಕೋರ್ಟ್ ಸೂಚನೆ
ನವದೆಹಲಿ, ಮೇ 28: ಕೊರೊನಾ ಲಾಕ್ಡೌನ್ ಸಮಯದಲ್ಲಿ ಅನಾಥ ಮಕ್ಕಳ ರಕ್ಷಣೆ ಕುರಿತು ಮಾತನಾಡಿರುವ ಸುಪ್ರೀಂ ಕೋರ್ಟ್, ಕೊರೊನಾ ಸೋಂಕಿನಿಂದಾಗಿ ಅನಾಥರಾದ ಮಕ್ಕಳ ಮೂಲ ಅಗತ್ಯಗಳನ್ನು ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು ಎಂದು ಹೇಳಿದೆ.
ಮಾರ್ಚ್ 2020ರ ನಂತರದಲ್ಲಿ ಕೊರೊನಾ ಸೋಂಕಿನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಗುರುತಿಸಲು ರಾಜ್ಯಗಳಿಗೆ ಸೂಚನೆ ನೀಡಿದೆ. ಅಂಥ ಮಕ್ಕಳ ಅವಶ್ಯಕತೆಗಳ ಕುರಿತು ರಾಜ್ಯ ಸರ್ಕಾರಗಳು ನಿಗಾ ವಹಿಸಬೇಕು. ಅವರ ನೋವನ್ನು ಅರ್ಥ ಮಾಡಿಕೊಂಡು ಅವರ ಅವಶ್ಯಕತೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಹಾಗೂ ಅನಿರುದ್ಧ್ ಬೋಸ್ ಅವರನ್ನೊಳಗೊಂಡ ಪೀಠ ಹೇಳಿದೆ.
ಕರ್ನಾಟಕದಲ್ಲಿ ಕೊರೊನಾವೈರಸ್ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹೇಗೆ?
ಕೊರೊನಾ ಸೋಂಕಿನ ಸಮಯದಲ್ಲಿ ಮಕ್ಕಳ ರಕ್ಷಣೆ ಸಂಬಂಧ ನ್ಯಾಯಾಲಯ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದು, ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದೆ. ಮಕ್ಕಳ ರಕ್ಷಣೆ ಕುರಿತು ಈ ಮುನ್ನವೂ ಸರಣಿ ಆದೇಶಗಳನ್ನು ನ್ಯಾಯಾಲಯ ಹೊರಡಿಸಿತ್ತು.
ದೇಶದಲ್ಲಿ ಕೊರೊನಾ ಸೋಂಕು ಬಿಕ್ಕಟ್ಟಿನ ಪರಿಸ್ಥಿತಿ ಹುಟ್ಟುಹಾಕಿದೆ. ಇದು ಮಕ್ಕಳ ಜೀವನದ ಮೇಲೆಯೂ ಪರಿಣಾಮ ಬೀರುತ್ತಿದೆ. ಸೋಂಕಿನ ಕಾರಣವಾಗಿ ಅನಾಥರಾದ ಮಕ್ಕಳನ್ನು ಅಧಿಕಾರಿಗಳು ಗುರುತಿಸಬೇಕು. ಅವರ ಅವಶ್ಯಕತೆಗಳತ್ತ ಗಮನ ಹರಿಸಬೇಕು ಎಂದು ಸೂಚಿಸಿದೆ. ನ್ಯಾಯಾಲಯದಿಂದ ಆದೇಶ ಬರುವವರೆಗೂ ಕಾಯದೇ ಅಧಿಕಾರಿಗಳು ಮಕ್ಕಳಿಗೆ ಆಹಾರ, ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದೆ.
ಮಾರ್ಚ್ 2020ರಿಂದ ಎಷ್ಟು ಮಕ್ಕಳು ಅನಾಥರಾಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಆ ಮಾಹಿತಿಯನ್ನು ಮಕ್ಕಳ ಹಕ್ಕುಗಳ ಸಂರಕ್ಷಣೆಯ ರಾಷ್ಟ್ರೀಯ ಆಯೋಗದ ಪೋರ್ಟಲ್ನಲ್ಲಿ ಶೀಘ್ರವೇ ಅಪ್ ಲೋಡ್ ಮಾಡಲು ಸೂಚಿಸಿದೆ. ಜೂನ್ 1ರಂದು ಮತ್ತೊಮ್ಮೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಈ ವರ್ಷದ ಏಪ್ರಿಲ್ 1ರಿಂದ ಮೇ 25ರವರೆಗೆ ದೇಶಾದ್ಯಂತ ಸುಮಾರು 577 ಮಕ್ಕಳು ಕೊರೊನಾ ಸೋಂಕಿನ ಕಾರಣವಾಗಿ ಅನಾಥರಾಗಿದ್ದಾರೆ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸಚಿವೆ ಸ್ಮೃತಿ ಇರಾನಿ ಈಚೆಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಸಾವಿರಕ್ಕೂ ಹೆಚ್ಚು ಮಕ್ಕಳು ತಮ್ಮ ಪೋಷಕರಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ಎಎಫ್ಪಿ ವರದಿ ಮಾಡಿತ್ತು.
ಕೊರೊನಾ ಸೋಂಕಿನಿಂದಾಗಿ ದೇಶದಲ್ಲಿ ಸುಮಾರು ಮೂರು ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕಿನ ಕಾರಣವಾಗಿ ಅನಾಥರಾದ ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ದೆಹಲಿ ಹಾಗೂ ಕೇರಳ ಸರ್ಕಾರಗಳು ಆರ್ಥಿಕ ಯೋಜನೆಗಳನ್ನು ರೂಪಿಸುವುದಾಗಿ ಘೋಷಿಸಿವೆ.